ಸಾರಾಂಶ
ವಿದ್ಯಾರ್ಥಿಗಳು ಕಲಿಕಾ ದಿನಗಳಲ್ಲಿ ತಮಗಿಷ್ಟವಾದ ಕ್ಷೇತ್ರ ಆಯ್ದುಕೊಂಡು ಸ್ಪಷ್ಟವಾದ ಗುರಿಯ ಕಡೆಗೆ ಸಾಗಬೇಕು ಜತೆಗೆ ಗುರುವಿನ ಮಾರ್ಗದರ್ಶನದೊಂದಿಗೆ ಯಶಸ್ಸನ್ನು ಹೊಂದಬೇಕು ಅಂದಾಗ ಮಾತ್ರ ಜೀವನಕೊಂದು ಅರ್ಥ ಬರಲು ಸಾಧ್ಯ.
ಅಳ್ನಾವರ: ವಿದ್ಯಾರ್ಥಿಗಳು ಸಮಯಕ್ಕೆ ಗೌರವ ಕೊಟ್ಟಾಗ ಮಾತ್ರ ಸಮಯ ವಿದ್ಯಾರ್ಥಿಗಳನ್ನು ಗೌರವಿಸುತ್ತದೆ ಮತ್ತು ವಿದ್ಯಾರ್ಥಿಗಳು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಮಾಡುವ ಕಲೆ ಕರಗತ ಮಾಡಿಕೊಳ್ಳಬೇಕೆಂದು ಹು-ಧಾ ಮಹಾನಗರ ಪಾಲಿಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿವಿಧ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕಾ ದಿನಗಳಲ್ಲಿ ತಮಗಿಷ್ಟವಾದ ಕ್ಷೇತ್ರ ಆಯ್ದುಕೊಂಡು ಸ್ಪಷ್ಟವಾದ ಗುರಿಯ ಕಡೆಗೆ ಸಾಗಬೇಕು ಜತೆಗೆ ಗುರುವಿನ ಮಾರ್ಗದರ್ಶನದೊಂದಿಗೆ ಯಶಸ್ಸನ್ನು ಹೊಂದಬೇಕು ಅಂದಾಗ ಮಾತ್ರ ಜೀವನಕೊಂದು ಅರ್ಥ ಬರಲು ಸಾಧ್ಯ, ಸತತ ಪರಿಶ್ರಮ ಹಾಗೂ ಪರಿಪೂರ್ಣ ವ್ಯಕ್ತಿತ್ವ ಮೈಗೂಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನೇ ವೇದಿಕೆಗಳನ್ನಾಗಿ ಬಳಸಿಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಈ ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ, ಕ್ರೀಡೆ, ರಾಜ್ಯಶಾಸ್ತ್ರ, ಗ್ರಂಥಾಲಯ ವಿಭಾಗದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಡಾ. ಪರ್ವೀನ್ ಶೇಖ ವಾರ್ಷಿಕ ವರದಿ ವಾಚಿಸಿದರು. ಡಾ. ಸುರೇಶ ದೊಡ್ಡಮನಿ ನೂತನವಾಗಿ ಆಯ್ಕೆಯಾದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಿಗೆ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.ಮಾರುತಿ ನಂದನ ನಿರೂಪಿಸಿದರು. ಕಾಲೇಜಿನ ಸಿಡಿಸಿ ಸದಸ್ಯರು ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು. ಬಿಎ ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜತೆಗೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.