ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸವಿದ್ದಲ್ಲಿ ಸಾಧನೆ ಸುಲಭವಾಗುತ್ತದೆ. ಮಕ್ಕಳಿಗೆ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ವಿದ್ಯಾರ್ಥಿ ವೇತನ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಚಿಕ್ಕಮಗಳೂರಿನ ಬಂಟರ ಯಾನೆ ನಾಡವರ ಸಂಘ ದಂಬದಹಳ್ಳಿಯಲ್ಲಿರುವ ಬಂಟರ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ವಿದ್ಯಾಭ್ಯಾಸದ ನಂತರ ಉನ್ನತ ಹುದ್ದೆಗಳಿಗೆ ಹೋದ ಸಂದರ್ಭದಲ್ಲಿ ನಿಮಗೆ ವಿದ್ಯಾರ್ಥಿವೇತನ ನೀಡಿದ ಬಂಟರ ಸಂಘವನ್ನು ಮರೆಯಬಾರದು. ಆರ್ಥಿಕ ವಾಗಿ ಹಿಂದುಳಿದಿದ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬಂಟರ ಸಂಘ ಸುಮಾರು 5 ಲಕ್ಷ ದಷ್ಟು ವಿದ್ಯಾರ್ಥಿ ವೇತನವನ್ನು ಪ್ರತಿವರ್ಷ ನೀಡುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಮುಂದೆ ಬರಬೇಕೆಂದು ತಿಳಿಸಿದರು.
ಯಾವುದೇ ಸಮಾಜ ಸಂಘಟಿತರಾದರೆ ಒಂದು ಶಕ್ತಿಯಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಬಂಟರ ಯಾನೆ ನಾಡವರ ಸಂಘಟನೆ ಒಂದು ಗಟ್ಟಿಯಾದ ಸಂಘಟನೆಯಾಗಿ ಬೆಳೆದಿದೆ. ಚಿಕ್ಕ ಸಮುದಾಯವಾದರೂ ಒಂದು ಚೊಕ್ಕ ಕಾರ್ಯ ಕ್ರಮವನ್ನು ಮಾಡುವ ಮೂಲಕ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಬಂಟರ ಯಾನೆ ನಾಡವರ ಸಂಘ ಹಮ್ಮಿಕೊಳ್ಳುವ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ತಾವು ಎಲ್ಲಾ ರೀತಿಯ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಪ್ರಾಧ್ಯಾಪಕ ಪ್ರೊ.ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಬಂಟರು ಮೂಲತಃ ಕೃಷಿಕರು. ಈ ದೇಶದ ಎಲ್ಲಾ ಭಾಗಗಳಲ್ಲಿ ವ್ಯಾಪಾರ, ಉದ್ದಿಮೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂಡರ್ವರ್ಲ್ಡ್ನಿಂದ ಹಿಡಿದು ಮಿಸ್ ವರ್ಲ್ಡ್ವರೆಗೂ ಬಂಟರ ಸಮುದಾಯ ಹರಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಟು ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಉದ್ಯಮಿಗಳು ತಮ್ಮ ಹುಟ್ಟೂರಿನ ಅಭಿವೃದ್ಧಿಗೆ ನೆರವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶಾಂತಣ್ಣ ಆಳ್ವ ಮಾತನಾಡಿ, ಮೊಬೈಲ್ ಸಂಪರ್ಕದಲ್ಲಿ ಮುಳುಗಿ ಹೋಗಿರುವ ವಿದ್ಯಾರ್ಥಿಗಳು ತಮ್ಮ ನೆನಪಿನ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ನೋಡುವ ಪ್ರವೃತ್ತಿಗೆ ದಾಸರಾಗಿರುವ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಓದುವ ಮತ್ತು ಬರೆಯುವ ಪ್ರವೃತ್ತಿಯನ್ನೇ ಮರೆಯುತ್ತಿದ್ದಾರೆಂದು ವಿಷಾಧ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ ಬಂಟರ ಸಂಘದ ಕಾರ್ಯದರ್ಶಿ ದೇವರಾಜ್ ಶೆಟ್ಟಿಯವರನ್ನು ಇದೇ ಸಂದರ್ಭದಲ್ಲಿ ಸಂಘದ ಪರವಾಗಿ ಸನ್ಮಾನಿಸಲಾಯಿತು.ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನದ ನಿಧಿಗೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯಲ್ಲಿ ಕೆಲಸ ಮಾಡಿ ಈಗ ರೋಟರಿ ಸಹಾಯಕ ಗವರ್ನರ್ ಆಗಿ ಆಗಿರುವ ವಿನೋದ್ಕುಮಾರ್ ಶೆಟ್ಟಿ ದಂಪತಿ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೀಣಾ ಆರ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆನಂದ್ಕುಮಾರ್ ಶೆಟ್ಟಿ ಸಂಘದ ನಡೆದು ಬಂದ ದಾರಿಯನ್ನು ವಿವರಿಸಿದರು. ಮೂಡಿಗೆರೆ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ರವಿಶಂಕರ್ ಅಡ್ಯಂತಾಯ, ಕಳಸ ಬಂಟರ ಸಂಘದ ಅಧ್ಯಕ್ಷ ಕಿರನ್ಶೆಟ್ಟಿ, ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಬಲ್ಲಾರಿ ವಿನಯಶೆಟ್ಟಿ, ಶೃಂಗೇರಿ ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಜಿಲ್ಲಾ ಬಂಟರ ಸಂಘದ ಜಿಲ್ಲಾಧ್ಯಕ್ಷ ಪುರಂದರ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ , ಬಂಟರ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
6 ಕೆಸಿಕೆಎಂ 2ಚಿಕ್ಕಮಗಳೂರಿನ ಬಂಟರ ಯಾನೆ ನಾಡವರ ಸಂಘ ದಂಬದಹಳ್ಳಿಯಲ್ಲಿರುವ ಬಂಟರ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.