ಸಾಧನೆ ಎನ್ನುವುದು ಸೋಮಾರಿಗಳ ಸ್ವತ್ತಲ್ಲ: ಶ್ರೀಹರಿಬಾಬು

| Published : Jun 10 2025, 04:21 AM IST

ಸಾರಾಂಶ

ಸಮಯ ಎಂಬುದು ತುಂಬಾ ಅಮೂಲ್ಯವಾದುದು. ಪ್ರತಿ ದಿನವೂ ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಪ್ರಯತ್ನ, ಪರಿಶ್ರಮ ಮತ್ತು ಏಕಾಗ್ರತೆ ಇವೇ ಯಶಸ್ಸಿನ ಗುಟ್ಟು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು.

ಯುಜಿಸಿ ನೆಟ್ ಹಾಗೂ ಕೆ-ಸೆಟ್ ತರಬೇತಿ ಕಾರ್ಯಾಗಾರದಲ್ಲಿ ಎಸ್ಪಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸಮಯ ಎಂಬುದು ತುಂಬಾ ಅಮೂಲ್ಯವಾದುದು. ಪ್ರತಿ ದಿನವೂ ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಪ್ರಯತ್ನ, ಪರಿಶ್ರಮ ಮತ್ತು ಏಕಾಗ್ರತೆ ಇವೇ ಯಶಸ್ಸಿನ ಗುಟ್ಟು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ವಿಜಯನಗರ ಎಸ್ಪಿ ಡಾ. ಬಿ.ಎಲ್‌. ಶ್ರೀಹರಿಬಾಬು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಆಯೋಜಿಸಿರುವ ಯುಜಿಸಿ ನೆಟ್ ಹಾಗೂ ಕೆ-ಸೆಟ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ವಿಫಲತೆ ಎಂದರೆ ಅದು ಕೇವಲ ಒಂದು ಸೋಲು ಅಲ್ಲ, ಬದಲಾಗಿ ಅದು ಜೀವನದ ಒಂದು ದೊಡ್ಡ ಭಾಗ. ಈ ಸೋಲನ್ನು ಸರಿಯಾದ ರೀತಿಯಲ್ಲಿ ಅರಿತುಕೊಂಡು ನಿರಂತರ ಪ್ರಯತ್ನದಿಂದ ಯಶಸ್ಸಿನ ಶಿಖರ ಏರಬಹುದು. ಮುಖ್ಯವಾಗಿ ಸಕಾರಾತ್ಮಕ ಮನೋಭಾವದಿಂದ ಜೀವಕ್ಕೆ ಬೇಕಾದ ಕೌಶಲ್ಯ ಮತ್ತು ತಾಳ್ಮೆ ಒಗ್ಗೂಡಿಸಿಕೊಂಡರೆ ಯಶಸ್ಸಿನ ಹಾದಿ ಸುಲಭವಾಗುತ್ತದೆ ಎಂದರು.

ಇನ್ನೂ ಇಂದಿನ ದಿನಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಇಚ್ಛಾಶಕ್ತಿ ಕೊರತೆಯಿದ್ದು ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಆಸಕ್ತಿ, ತಾಳ್ಮೆ, ಪರಿಶ್ರಮ ಹಾಗೂ ಸತತವಾದ ಪ್ರಯತ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, ಸಂವೇದನಾಶೀಲ ಅಧಿಕಾರಿಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿ ಬೇಕು. ಅಂತಹ ಅಧಿಕಾರಿಯಾಗಿ ಶ್ರೀಹರಿಬಾಬು ಇದ್ದಾರೆ. ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಸ್ವಯಂ ಪ್ರೇರಣೆಯಿಂದ ಬಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಈ ಕಾರ್ಯಾಗಾರದಲ್ಲಿ ವಿವಿಧ ವಿಭಾಗಳ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.