ಚನ್ನಪಟ್ಟಣ: ನಮ್ಮ ಮನಸ್ಥಿತಿ ಬದಲಾದರೆ ಮಾತ್ರ ಪರಿಸ್ಥಿತಿ ಬದಲಾಗುತ್ತದೆ. ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಗಿದರೆ ಮಾತ್ರ ಸಾಧನೆ ಸಾಧ್ಯ ಎಂದು ಪರಿವರ್ತನಾ ಶಿಕ್ಷಣ ಸಂಸ್ಥೆಯ ಚೇತನ್ ರಾಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆಗಳು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಜೀವಾಮೃತ ರಕ್ತನಿಧಿ ಸೆಂಟರ್ ಸಂಯುಕ್ತಾಶ್ರಯದಲ್ಲಿ ರೆಡ್ಕ್ರಾಸ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ೨೦೨೫-೨೬ ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಲ್ಲಿ ಆಗಬೇಕಾದ ಬದಲಾವಣೆಗಳು ಹಾಗೂ ನೋಡಬೇಕಾದ ನೀತಿಗಳನ್ನು ತಿಳಿದುಕೊಳ್ಳಬೇಕು. ನಮ್ಮ ಬದುಕು ಬೇರೆಯವರಿಗೆ ಉದಾಹರಣೆಯಾಗಬೇಕು. ಇದಕ್ಕಾಗಿ ಮೊದಲು ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕುವುದು ಮುಖ್ಯವಲ್ಲ, ಹೇಗೆ ಬದುಕುತ್ತೇವೆ ಎಂಬುದು ಮುಖ್ಯ. ಸಾಧನೆಗೆ ಗುರಿ ಮುಖ್ಯ. ಇಲ್ಲಿ ಯಾರಿಂದಲೂ ಯಾರೂ ಉದ್ದಾರ ಆಗುವುದಿಲ್ಲ. ನಮ್ಮ ಉದ್ದಾರ ನಮ್ಮಿಂದಲೇ ಆಗಬೇಕು ಎಂದರು.ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಲ್ಲೇ ಸಾಧನೆಯ ಬಗ್ಗೆ ಕನಸು ಕಾಣುವ ಜೊತೆಗೆ ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸಬೇಕಿದೆ. ಇದರಿಂದ ಪೋಷಕರು ಸೇರಿದಂತೆ ಶಿಕ್ಷಣ ಸಂಸ್ಥೆಗೂ ಕೀರ್ತಿ ತರಬೇಕು ಎಂದರು.
ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಬಿಎಸ್ಎಂ ನಾಯ್ಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಸಂಪೂರ್ಣ ನಾಯ್ಡು, ಬಿಡದಿ ಟಯೋಟಾ ಕಾರ್ಮಿಕರ ಸಂಸ್ಥೆಯ ಅಧ್ಯಕ್ಷ ದೀಪಕ್, ಬಿಇಒ ರಾಮಲಿಂಗಯ್ಯ, ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬಿ.ಸಿ.ಯೋಗೇಶ್ಗೌಡ, ನಗರಸಭಾಧ್ಯಕ್ಷ ನಾಗೇಶ್, ಮಾಜಿ ಅಧ್ಯಕ್ಷ ವಾಸಿಲ್ ಆಲಿಖಾನ್, ಸದಸ್ಯರಾದ ಮೊಹಮ್ಮದ್ ಸಬ್ಬೀರ್ ಉಲ್ಲಾ, ತೌಸೀಫ್, ಸಮಾಜ ಸೇವಕ ಇಕ್ಬಾಲ್, ಅತಿಕ್ ಮುನ್ನಾವರ್ ಇತರರಿದ್ದರು.ಪೊಟೋ೧೫ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆ ರೆಡ್ಕ್ರಾಸ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಪರಿವರ್ತನಾ ಶಿಕ್ಷಣ ಸಂಸ್ಥೆಯ ಚೇತನ್ ರಾಮ್ ಉದ್ಘಾಟಿಸಿದರು.