ಕನ್ನಡಪ್ರಭ ವಾರ್ತೆ ನಾಗಮಂಗಲ
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಉದಾತ್ತವಾದ ಕನಸು, ನಿರ್ದಿಷ್ಟ ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕಳೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 554ನೇ ರ್ಯಾಂಕ್ ಪಡೆದು ತೇರ್ಗಡೆ ಹೊಂದಿರುವ ತಾಲೂಕಿನ ಕರಡಹಳ್ಳಿ ಆರ್.ಧನಂಜಯ ಅಭಿಪ್ರಾಯಪಟ್ಟರು.ತಾಲೂಕಿನ ದೇವಲಾಪುರ ಹ್ಯಾಂಡ್ಪೋಸ್ಟ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ವಿದ್ಯಾವಂತರಾಗಿ, ಸಮಾಜದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ಪ್ರತಿಯೊಬ್ಬ ಪೋಷಕರು ಅಪಾರ ಕನಸು ಕಟ್ಟಿಕೊಂಡಿರುತ್ತಾರೆ. ಬಿಎ, ಬಿಎಸ್ಸಿ, ಬಿಕಾಂ ಶಿಕ್ಷಣ ಮುಗಿಸಿದ ಮಾತ್ರಕ್ಕೆ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.ಪದವಿ ನಂತರ ಸ್ವಂತ ಶಕ್ತಿಯಿಂದ ಮತ್ತಷ್ಟು ಪರಿಶ್ರಮ ಹಾಕಿ ಉನ್ನತ ವ್ಯಾಸಂಗ ಮಾಡಿದರೆ ಮಾತ್ರ ಪೋಷಕರ ಕನಸುಗಳನ್ನು ನನಸು ಮಾಡುವ ಜೊತೆಗೆ ಉತ್ತಮ ಭವಿಷ್ಯ ರೂಪಿಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಿ ಸಾಧನೆ ಮಾಡಬಹುದು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದಿರುವ ನಾನು, ಬಿಎಸ್ಸಿ ನಂತರ ಉನ್ನತ ವ್ಯಾಸಂಗಕ್ಕೆ ಪೋಷಕರನ್ನು ಅವಲಂಬಿಸದೆ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಕನಸು, ಗುರಿಯೊಂದಿಗೆ ಏಳು ವರ್ಷಕಾಲ ಬಹಳ ಕಷ್ಟಪಟ್ಟು, ಸತತ ಪರಿಶ್ರಮದಿಂದ ಈ ಹಂತಕ್ಕೆ ಬಂದಿದ್ದೇನೆ ಎಂದರು.
ವಿದ್ಯಾರ್ಥಿಗಳಾದ ತಾವೂ ಸಹ ಸಾಧ್ಯವಾದಷ್ಟು ಉದಾತ್ತ ಕನಸುಗಳನ್ನು ಕಾಣಬೇಕು. ಜೀವನ ಎಂದರೇನು ಎಂಬುದನ್ನು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡು ಸಮಾಜದ ದೊಡ್ಡ ಶಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವೈ.ಸಿ.ನೇತ್ರಾವತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಶ್ರದ್ಧೆ, ತಾಳ್ಮೆ ಮತ್ತು ಸಂಯಮ ಬಹಳ ಮುಖ್ಯ. ಪದವಿ ಮುಗಿಸುವ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡುವ ದಾಹವಿರಬೇಕು. ಸಾಧನೆ ಮಾಡುವ ಗುರಿ, ಛಲ, ಆತ್ಮಸಾಕ್ಷಿ ನಿಮ್ಮಲ್ಲಿದ್ದರೆ ಪೋಷಕರ ಕೀರ್ತಿ ಹೆಚ್ಚಿಸುವಂತಹ ಸಮಾಜದ ಸತ್ಪ್ರಜೆಗಳಾಗಿ ರೂಪುಗೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದರು.ಚನ್ನರಾಪಟ್ಟಣ ತಾಲೂಕಿನ ಖ್ಯಾತ ಯೋಗಪಟು ಚಿಕ್ಕೇಗೌಡ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ, ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಣ್ಣಗೌಡ, ಸಿಬ್ಗತ್ ಅಲಿಖಾನ್, ಕೆ.ಸೀತಾರಾಮು, ನೀಲಾಮೂರ್ತಿ, ಅಧ್ಯಾಪಕರಾದ ಹನುಮಂತಯ್ಯ, ಕೋಮಲ, ಶರ್ಮಿಳ, ಎ.ಬಿ.ಗಂಗು, ಅರವಿಂದ್ ಮಿತ್ರ, ಅಕ್ರಂಪಾಷ, ಶ್ರೀನಿವಾಸ್, ಗ್ರಂಥಪಾಲಕ ಮಂಜುನಾಥ್ ಸೇರಿ ಅತಿಥಿ ಉಪನ್ಯಾಸಕರು ಇದ್ದರು.