ಮಹಿಳಾ ಸಬಲೀಕರಣಕ್ಕೆ ಕ್ರೀಡೆ ಮತ್ತು ಸಂಸ್ಕೃತಿಯೇ ಬಲವಾದ ಮಾಧ್ಯಮ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಅರಸೀಕೆರೆ ತಾಲೂಕಿನ ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ರಾಜ್ಯ ಮಟ್ಟದ ವೇದಿಕೆಯಲ್ಲಿ ಹಾಸನ ಜಿಲ್ಲೆಗೆ ಗೌರವ ತಂದಿದ್ದಾರೆ. ಮಂಗಳೂರು ಮಹಿಳಾ ಮಂಡಳಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ‘ಮಹಿಳಾ ವೈಭವ’ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡವು ಗಮನಾರ್ಹ ಸಾಧನೆ ಮಾಡಿ ಪ್ರಶಸ್ತಿಗೆ ಭಾಜನವಾಗಿದೆ. ದೃಢ ಸಂಕಲ್ಪವಿದ್ದರೆ ಮಹಿಳೆಯರು ಯಾವುದೇ ಶಿಖರವನ್ನು ತಲುಪಬಹುದು. ಮುಂದಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದು ಹಾರೈಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆಮಹಿಳಾ ಸಬಲೀಕರಣಕ್ಕೆ ಕ್ರೀಡೆ ಮತ್ತು ಸಂಸ್ಕೃತಿಯೇ ಬಲವಾದ ಮಾಧ್ಯಮ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಅರಸೀಕೆರೆ ತಾಲೂಕಿನ ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ರಾಜ್ಯ ಮಟ್ಟದ ವೇದಿಕೆಯಲ್ಲಿ ಹಾಸನ ಜಿಲ್ಲೆಗೆ ಗೌರವ ತಂದಿದ್ದಾರೆ. ಮಂಗಳೂರು ಮಹಿಳಾ ಮಂಡಳಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ‘ಮಹಿಳಾ ವೈಭವ’ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡವು ಗಮನಾರ್ಹ ಸಾಧನೆ ಮಾಡಿ ಪ್ರಶಸ್ತಿಗೆ ಭಾಜನವಾಗಿದೆ.ಒಕ್ಕೂಟದ ಅಧ್ಯಕ್ಷೆ ನಾಗರತ್ನಮ್ಮ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ತಂಡವು, ಸಮಾಜದಲ್ಲಿನ ಬಾಲ್ಯವಿವಾಹದ ದುಷ್ಪರಿಣಾಮಗಳನ್ನು ಬಿಂಬಿಸುವ ಜಾನಪದ ನೃತ್ಯ ರೂಪಕವನ್ನು ಮನೋಜ್ಞವಾಗಿ ಪ್ರದರ್ಶಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಈ ಮೂಲಕ 50 ಸಾವಿರ ರು. ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ಸ್ವೀಕರಿಸಿ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದೆ. ಸ್ಪರ್ಧೆಯಲ್ಲಿ ವಿಜೇತರಾದ ತಂಡದ ಸದಸ್ಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೀಶ್ ಅವರನ್ನು ಭೇಟಿ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡರು. ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಯೋಗೀಶ್ ಮಹಿಳೆಯರು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿರುವುದು ಅತ್ಯಂತ ಹೆಮ್ಮೆಯ ವಿಷಯ. ದೃಢ ಸಂಕಲ್ಪವಿದ್ದರೆ ಮಹಿಳೆಯರು ಯಾವುದೇ ಶಿಖರವನ್ನು ತಲುಪಬಹುದು. ಮುಂದಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದು ಹಾರೈಸಿದರು.ಒಕ್ಕೂಟದ ಕಾರ್ಯದರ್ಶಿ ವೀಣಾ ಮಾತನಾಡಿ, ಇಲಾಖೆಯ ಮಾರ್ಗದರ್ಶನ ಮತ್ತು ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ದೊರೆತ ಪ್ರಶಸ್ತಿಯನ್ನು ಜಿಲ್ಲೆಯ ಜನತೆಗೆ ಸಮರ್ಪಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಂಜುಳಾ ಚಂದ್ರನಾಯ್ಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಕಮಲಮ್ಮ , ಶೋಭರಾಣಿ, ಆಶಾರಾಣಿ, ಪುಷ್ಪಾವತಿ ಸೇರಿದಂತೆ ಸಂಘದ ಅನೇಕ ಸದಸ್ಯರು ಉಪಸ್ಥಿತರಿದ್ದರು.