ನಾವು ಜೀವನದಲ್ಲಿ ಮುನ್ನಡೆ ಸಾಧಿಸಿ ನಮ್ಮೊಂದಿಗೆ ಇರುವವರನ್ನೂ ಕೂಡಿಕೊಂಡು ಬೆಳೆಯಬೇಕು. ನಾವು ಇಂದು ಸಮಾಜದಲ್ಲಿ ಸಾಧಕರು ಎಂದು ಹೆಸರಿಸುವ ಎಲ್ಲರೂ ಕಷ್ಟ, ಸವಾಲುಗಳನ್ನು ಎದುರಿಸಿ ಮುಂದೆ ಬಂದವರಾಗಿರುತ್ತಾರೆ. ಅವರ ಜೀವನದಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಪುತ್ತೂರು: ನಾವು ಜೀವನದಲ್ಲಿ ಮುನ್ನಡೆ ಸಾಧಿಸಿ ನಮ್ಮೊಂದಿಗೆ ಇರುವವರನ್ನೂ ಕೂಡಿಕೊಂಡು ಬೆಳೆಯಬೇಕು. ನಾವು ಇಂದು ಸಮಾಜದಲ್ಲಿ ಸಾಧಕರು ಎಂದು ಹೆಸರಿಸುವ ಎಲ್ಲರೂ ಕಷ್ಟ, ಸವಾಲುಗಳನ್ನು ಎದುರಿಸಿ ಮುಂದೆ ಬಂದವರಾಗಿರುತ್ತಾರೆ. ಅವರ ಜೀವನದಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ವಿವೇಕಾನಂದ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಣೇಶ ಸಂಜೀವ ಮಾತನಾಡಿ ವಿದ್ಯಾರ್ಥಿಗಳು ಅವರ ಕನಸುಗಳನ್ನು ನನಸು ಮಾಡುವುದನ್ನು ಮಾತ್ರ ಯೋಚಿಸದೇ ಹೆತ್ತವರ ಆಶಯಗಳನ್ನೂ ತಿಳಿದು ಪೂರೈಸಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ನಾವು ಮಾಡುವ ಕೆಲಸ ಸಮಾಜಕ್ಕೆ, ದೇಶಕ್ಕೆ ಒಳ್ಳೆಯದನ್ನು ಮಾಡುತ್ತದೆಯೇ ಎಂದು ಚಿಂತಿಸಿ ಕಾರ್ಯಪ್ರವೃತ್ತರಾಗುವುದು ಮುಖ್ಯ. ಹಾಗೆ ಚಿಂತಿಸಿದರೆ ನಮ್ಮ ಬದುಕು ಸಾರ್ಥಕ ಎಂದರು.ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹಾಗೂ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಶುಭಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಆಡಳಿತ ವಿಭಾಗದ ವಿಶೇಷಾಧಿಕಾರಿ ಡಾ. ಮನಮೋಹನ ಎಂ ವಂದಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಸಹಕರಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಮಧು ಕುಮಾರ್ ನಿರೂಪಿಸಿದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಣೇಶ್ ಸಂಜೀವ ಅವರನ್ನು ಗೌರವಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಬಹುಮಾನಗಳನ್ನು ನೀಡಲಾಯಿತು. ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಕ್ರಿಯವಾಗಿರುವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ರಾಯಭಾರಿ ಪುರಸ್ಕಾರ ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಧಕ ಅಧ್ಯಾಪಕರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.