ಸಾರಾಂಶ
ಮಡಿಕೇರಿ : ಜಾತಿ ನಿಂದನೆ ಪ್ರಕರಣ ದಾಖಲಾಗುತ್ತಿದ್ದಂತೆ ಶಾಸಕ ಮುನಿರತ್ನ ಅವರಿಗೆ ನೊಟೀಸ್ ನೀಡಲಾಗಿದೆ. ಆದರೆ ಕಾಂಗ್ರೆಸ್ ಎಷ್ಟು ಜನರ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಲಿ. ಎಫ್ ಎಸ್ಎಲ್ ವರದಿಯಲ್ಲಿ ಜಾತಿ ನಿಂದನೆ ಸಾಬೀತಾದರೆ ಶಿಸ್ತು ಕ್ರಮ ಖಚಿತ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ 50 ಜನ ಕಾಂಗ್ರೆಸ್ ನಾಯಕರ ಮೇಲೆ ಸಿಬಿಐ ತನಿಖೆ ಆಗಿದೆ. ಅವರ ಮೇಲೆ ಏನಾದರೂ ಕ್ರಮ ತೆಗೆದುಕೊಂಡಿದ್ದಾರಾ? ಡಿ.ಕೆ. ಶಿವಕುಮಾರ್ ಮೇಲೂ ತನಿಖೆ ಇದೆ. ಕಾಂಗ್ರೆಸ್ ಏನಾದರೂ ಕ್ರಮ ತೆಗೆದುಕೊಂಡಿದೆಯಾ? ಆದರೆ ಬಿಜೆಪಿ ಹಾಗೆ ಅಲ್ಲ ಎಂದರು.
ಆರ್.ಆರ್. ನಗರದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಮುನಿರತ್ನ ಕಾರಣ,
ಅದಕ್ಕೆ ಆರ್. ಅಶೋಕ್ ಮತ್ತು ಎಚ್.ಡಿ.ಕುಮಾರಸ್ವಾಮಿ ಬೆಂಬಲವಿದೆ' ಎಂಬ ಸಚಿವ ಕೃಷ್ಣಭೈರೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಮುನಿರತ್ನ 30 ವರ್ಷ ಕಾಂಗ್ರೆಸ್ ನಲ್ಲಿ ಇದ್ದರು. ಜೀವನದ 90ರಷ್ಟು ಭಾಗ ಕಾಂಗ್ರೆಸ್ ನಲ್ಲಿ ಇದ್ದವರು. ಕಾಂಗ್ರೆಸ್ನಲ್ಲಿ ಇದ್ದಾಗಲೇ ಗುತ್ತಿಗೆದಾರರನಾಗಿದ್ದು, ಕಾರ್ಪೊರೇಟ್ ಆಗಿದ್ದು ಶಾಸಕ ಆಗಿದ್ದು, ನಮ್ಮ ಪಕ್ಷಕ್ಕೆ ಬಂದು ಐದು ವರ್ಷ ಆಗಿರಬಹುದು ಅಷ್ಟೇ. ಆಗ ಮುನಿರತ್ನ ಸತ್ಯ ಹರಿಶ್ಚಂದ್ರ ಆಗಿದ್ದರು, ಈಗ ಅವರು ಏಕಾಏಕಿ ದುಷ್ಮನ್ ಆಗಿದ್ದಾರೆ ಎಂದರು.
ರಾಯಚೂರಿನಲ್ಲಿ ಪಿಎಸ್ಐ ಒಬ್ಬರು ಸತ್ತರು, ಅವರ ಇಡೀ ಕುಟುಂಬ ಬೀದಿಗೆ ಬಂದಿದೆ.
ಅಲ್ಲಿನ ಶಾಸಕ, ಅವರ ಮಗ ರು.30 ಲಕ್ಷ ಕೇಳಿದ ಅಂತ ಹೇಳಿದರು. 18 ಗಂಟೆಗಳ ಕಾಲ ನಿರಂತರ ಪ್ರತಿಭಟನೆ ಮಾಡಿದರು. ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಒಬ್ಬ ಕೃಷಿ ಅಧಿಕಾರಿ ವಿಡಿಯೋ ಮಾಡಿ ತಮಗೆ ಲಂಚ ಕೇಳುತ್ತಿದ್ದಾರೆ ಎಂದು ವಿಡಿಯೋ ಮಾಡಿದ್ದರು.
ಸಚಿವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಕಾನೂನು ರೀತಿ ಕ್ರಮ ಕೈಗೊಂಡಿದ್ದರೆ ನಮ್ಮ ಯಾವುದೇ ತಕರಾರು ಇರಲಿಲ್ಲ. ಎಫ್ಎಸ್ಎಲ್ ವರದಿ ಬಳಿಕ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಒಬ್ಬರಿಗೆ ಒಂದು ಕಾನೂನು ಏಕೆ ಎಂದು ಆರ್ ಅಶೋಕ್ ಪ್ರಶ್ನಿಸಿದರು.
ವಿವಿಧೆಡೆ ಗಣೇಶೋತ್ಸವದಲ್ಲಿ ಗಲಭೆಯಾಗಲು ವಿಪಕ್ಷ ಕಾರಣ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಗಮಂಗಲದಲ್ಲಿ ಗಲಭೆಯಾಗಿರುವುದು ಕಾಂಗ್ರೆಸ್ ಆಡಳಿತದ ವಿಫಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಹೇಳಲು ಕಾಂಗ್ರೆಸ್ ಗೆ ನಾಚಿಕೆ ಆಗಬೇಕು.
ವಿವಿಧ ಇಲಾಖೆ ಸಿಬ್ಬಂದಿಗೆ ಸಂಬಳ ಕೊಡಲಾಗುತ್ತಿಲ್ಲ. ಹಾಲು ಉತ್ಪಾದನಾ ಮಂಡಳಿಗೆ ಸರ್ಕಾರ ರು.1000 ಕೋಟಿಗೂ ಹಚ್ಚು ಸಾಲ ಉಳಿಸಿಕೊಂಡಿದೆ.ಎಲ್ಲಾ ವಸ್ತುಗಳ ಬೆಲೆಯನ್ನು ಜಾಸ್ತಿ ಮಾಡಿದ್ದಾರೆ.ಗಾಳಿಯ ಬೆಲೆ ಜಾಸ್ತಿ ಮಾಡುವುದು ಮಾತ್ರ ಬಾಕಿ ಇದೆ ಎಂದು ವ್ಯಂಗ್ಯವಾಡಿದರು.
ಇದುವರೆಗೆ ಗಣೇಶನ ಹಬ್ಬವನ್ನು ಅಲ್ಲಿನ ಸಮಿತಿಗಳು ತೀರ್ಮಾನಿಸುತ್ತಿದ್ದವು.
ಆದರೆ ಈಗ ಪೊಲೀಸರು ನಿರ್ಧರಿಸುತ್ತಿದ್ದಾರೆ. ಗಣೇಶ ಅಂದರೆ ವಿಘ್ನ ನಿವಾರಕ. ಆದರೆ ಗಣೇಶನಿಗೆ ವಿಘ್ನಗಳನ್ನು ತರುವುದು ಕಾಂಗ್ರೆಸ್ ಸರ್ಕಾರ. ಇದೊಂದು ಧರ್ಮದ ಹಬ್ಬ. ಜನರಿಗೆ ಇದನ್ನು ಆಚರಿಸುವುದಕ್ಕೆ ಅವಕಾಶವಿದೆ.ಆದರೆ ಕಾಂಗ್ರೆಸ್ ಮುಸ್ಲಿಂರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮತ್ತಿತರರು ಹಾಜರಿದ್ದರು.