ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದಲ್ಲಿ ಪರವಾನಗಿ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಆಟೋ ರಿಕ್ಷಾಗಳನ್ನು ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕ ರೇವಣ್ಣ ಎಚ್ಚರಿಕೆ ನೀಡಿದರು.ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಹಕಾರದೊಂದಿಗೆ ಎಲ್ಲಾ ಆಟೋಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಪರಿಶೀಲನಾ ವೇಳೆ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ವಾಹನದ ನೋಂದಣಿ ಪತ್ರ (ಆರ್‌ಸಿ), ವಿಮೆ, ಫಿಟ್ನೆಸ್ ಪ್ರಮಾಣಪತ್ರ, ಪರ್ಮೀಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದು. ಅಗತ್ಯ ದಾಖಲೆಗಳಿಲ್ಲದೆ, ನಿಯಮ ಉಲ್ಲಂಘನೆ ಮಾಡಿಕೊಂಡು ವಾಹನ ಚಲಾಯಿಸುತ್ತಿರುವುದು ಕಂಡುಬಂದರೆ ಅಂಥ ಆಟೋಗಳನ್ನು ತಕ್ಷಣ ಜಪ್ತಿ ಮಾಡುವುದರ ಜೊತೆಗೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಿಯಮಾನುಸಾರವಾಗಿ ವಾಹನಗಳನ್ನು ಚಲಾಯಿಸುವುದು ಪ್ರತಿಯೊಬ್ಬ ಚಾಲಕರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಕೆಲವು ಆಟೋಗಳಲ್ಲಿ ಮೀಟರ್‌ ಬಳಕೆ ಮಾಡದಿರುವುದು, ಹೆಚ್ಚು ಪ್ರಯಾಣಿಕರನ್ನು ಕೂರಿಸುವುದು ಹಾಗೂ ನಿಗದಿತ ಮಾರ್ಗದ ಹೊರತಾಗಿ ಸಂಚರಿಸುವುದು ಕಂಡುಬಂದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಪಿಎಸ್‌ಐ ಎಸ್‌ಜಿ ಪಾಟೀಲ್ ಮಾತನಾಡಿ ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಹತ್ತಿರ ಬರುತ್ತಿದ್ದು, ಆಟೋ ಚಾಲಕರ ಮತ್ತು ಆಟೋ ಚಾಲಕರ ಸಹಕಾರ ಅತಿ ಮುಖ್ಯವಾಗಿದ್ದು ಪ್ರತಿಯೊಬ್ಬರು ಸಹ ದಾಖಲಾತಿ ಇಟ್ಟುಕೊಂಡ ಇರಬೇಕು ಹಾಗು ಸುಮಾರು ಎಲ್ಲಾ ಆಟೋಗಳಿಗೆ ದಾಖಲಾತಿ ಪರಿಶೀಲಿಸಿ ನಂಬರ್‌ ವಿತರಿಸಲಾಗಿತ್ತು. ಆದರೆ ಕೆಲವು ಆಟೋಗಳು ಮಾರಾಟವಾಗಿರುವುದರಿಂದ ಮತ್ತೆ ನಂಬರ್ ಚಾಲಕರ ಸಂಘದ ಅದ್ಯಕ್ಷರು ಮನವಿ ಮಾಡಿದ ಹಿನ್ನಲೆ ಮತ್ತೆ ಅವರಿಗೆ ಕಡ್ಡಾಯವಾಗಿ ನಂಬರ್ ಗಳನ್ನು ನೀಡಲಾಗುವುದು ಎಂದರು.ಆಟೋ ಚಾಲಕರ ಸಂಘದ ಅಧ್ಯಕ್ಷ ದೀಪು ಮಾತನಾಡಿ, ಬೇಲೂರು ತಾಲೂಕಿನಲ್ಲಿ ಸುಮಾರು 500 ಆಟೋಗಳು, 500 ಸಣ್ಣ ಗಾಡಿಗಳು ಹಾಗೂ 300–400 ಆಪೆ ವಾಹನಗಳು ಸಂಚರಿಸುತ್ತಿವೆ ಎಂದು ಹೇಳಿದರು. ಹಿಂದಿನ ಶಿಕ್ಷಣ ನಿಯಮದ ಕಾರಣ ಹಲವರಿಗೆ ಡಿಎಲ್ ಮಾಡಿಸಿರಲಿಲ್ಲ, ಆದರೆ ಈಗ 7ನೇ, 9ನೇ ತರಗತಿ ಓದಿದವರಿಗೂ ಡಿಎಲ್ ನೀಡಲಾಗುತ್ತಿದ್ದು ಎಲ್ಲರೂ ಅರ್ಜಿ ಹಾಕಿದ್ದಾರೆ ಎಂದರು.ಎಫ್ಸಿ ಮತ್ತು ಇನ್ಸೂರೆನ್ಸ್ ಮಾಡಿಸಿಕೊಳ್ಳಲು ಮಾರ್ಚ್‌ 1ರಿಂದ ಏಪ್ರಿಲ್ 1ರವರೆಗೆ ಒಂದು ತಿಂಗಳ ಗಡುವು ಕೇಳಲಾಗಿದೆ. ಮಾರ್ಚ್ 8 ಮತ್ತು 28ರಂದು ವಿಶೇಷ ಕ್ಯಾಂಪ್ ನಡೆಯಲಿದೆ ಎಂದು ತಿಳಿಸಿದರು.ಈ ವೇಳೆ ಪೊಲೀಸ್ ಇಲಾಖೆಯ ದೇವರಾಜು, ಪ್ರವೀಣ್ ಹಾಜರಿದ್ದರು