ರಾಮನಗರ: ನಗರಸಭೆ ವ್ಯಾಪ್ತಿಯ 17ನೇ ವಾರ್ಡಿನಲ್ಲಿ ಯುಐಡಿಎಫ್ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಶುಕ್ರವಾರ ಪರಿಶೀಲನೆ ನಡೆಸಿ, ವಾರ್ಡಿನ ಸಮಸ್ಯೆಗಳನ್ನು ಆಲಿಸಿದರು.

ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಎಇಇಗಳಾದ ವಿಶ್ವನಾಥ್, ಸುಬ್ರಹ್ಮಣಿ ಹಾಗೂ ಎಂಜಿನಿಯರ್ ಪವಿತ್ರ ಅವರೊಂದಿಗೆ ವಾರ್ಡಿನ ವಿವಿಧ ರಸ್ತೆಗಳಲ್ಲಿ ಪ್ರದಕ್ಷಿಣೆ ಹಾಕಿದ ಅಧ್ಯಕ್ಷ ಕೆ.ಶೇಷಾದ್ರಿ ನಿವಾಸಿಗಳಿಂದ ಅಹವಾಲು ಆಲಿಸಿ ಬಗೆಹರಿಸುವ ಭರವಸೆ ನೀಡಿದರು.

ಬಳಿಕ ಮಾತನಾಡಿದ ಕೆ.ಶೇಷಾದ್ರಿ, ಬಾಲಗೇರಿ ಹಳೇ ಊರು. ಇಲ್ಲಿ ಹೆಚ್ಚಾಗಿ ಕುಡಿಯುವ ನೀರು, ಸ್ವಚ್ಛತೆ ಸಮಸ್ಯೆ ಕಂಡು‌ ಬಂದಿದೆ. ಮಾರ್ಚ್ 15ರೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಫಿಲೇಚರಿಗಳ ಕಲ್ಮಶ ಚರಂಡಿಯಲ್ಲಿ ಹಾಕುತ್ತಿರುವುದರಿಂದ ನೀರು‌ ಚರಂಡಿಯಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಕೂಡಲೇ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು ಎಂದರು.

ವಾರ್ಡಿನಲ್ಲಿ ಸೂರಿಲ್ಲದಿವರಿಗೆ ಮನೆ, ಚರಂಡಿಗಳ ಮೇಲೆ ಸ್ಲಾಬ್ ಅಳವಡಿಕೆ, ಸಮುದಾಯ ಭವನದ ಬಗ್ಗೆ ಸ್ಥಳೀಯರು ಗಮನ ಸೆಳೆದಿದ್ದಾರೆ. ನಗರಸಭೆ ನಿಮ್ಮಗಳ ಕಲ್ಯಾಣಕ್ಕೆ ಸದಾ ಸಿದ್ದವಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಶೇಷಾದ್ರಿ ಹೇಳಿದರು.

ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ವಾರ್ಡಿನ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದಿದ್ದೆವು. ಅದರಂತೆ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಬಂದು ಪರಿಶೀಲಿಸಿದ್ದು, ಸಮಸ್ಯೆ ಬಗೆಹರಿಸಬೇಕು. ಈ ವಾರ್ಡಿಗೆ ಹೆಚ್ಚಿನ ಅನುದಾನ ನೀಡಿ ಮಾದರಿ ವಾರ್ಡ್ ಆಗಿ ರೂಪಿಸುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಬಾಲಗೇರಿ ನಿವಾಸಿಗಳು ಬಾಲಗೇರಿ ಪ್ರಮುಖ, ಭಂಡಾರಮ್ಮ ಬೀದಿಯ ರಸ್ತೆ, ಚರಂಡಿ ನಿರ್ಮಾಣ, ಭಜನಾ ಮಂದಿರ ಹಾಗೂ ಮಸೀದಿ ರಸ್ತೆಯಲ್ಲಿ ಯುಜಿಡಿ ನಿರ್ಮಿಸುವುದು, ಬೀದಿ ದೀಪಗಳ ಅಳವಡಿಕೆ, ಅಂಬೇಡ್ಕರ್ ಭವನಕ್ಕೆ ಬಣ್ಣ, ಕ್ರೀಡಾ ಮೈದಾನ ನಿರ್ಮಾಣ, ಸರ್ಕಾರಿ ಶಾಲೆಯ ಕಾಂಪೌಂಡ್ ನವೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸದಸ್ಯೆ ನಾಗಮ್ಮ , ಕಂದಾಯ ಅಧಿಕಾರಿ ನಾಗರಾಜು, ಸಮುದಾಯ ಅಧಿಕಾರಿ ನಟರಾಜೇಗೌಡ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ವಕೀಲ ವಿನೋದ್ , ಮುಖಂಡರಾದ ಪ್ರಭು, ಶಂಕರಣ್ಣ, ಶ್ರೀನಿವಾಸ್, ಮುರುಗೇಶ್ ಮತ್ತಿತರರು ಹಾಜರಿದ್ದರು.

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶುಕ್ರವಾರ ಬಾಲಗೇರಿ ಬಡಾವಣೆಯಲ್ಲಿ ಯುಐಡಿಎಫ್ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.