ಕ್ರಿಯಾಶೀಲ ಬೋಧನೆ ಕಲಿಕಾ ಪ್ರಗತಿಗೆ ಪರಿಣಾಮಕಾರಿ

| Published : Oct 08 2024, 01:07 AM IST

ಸಾರಾಂಶ

ಶಿಕ್ಷಕರು ವೃತ್ತಿ ಬದ್ಧತೆ ಬೆಳೆಸಿಕೊಂಡು ಕ್ರಿಯಾಶೀಲರಾಗಿ ಬೋಧಿಸಿದಾಗ ಮಾತ್ರ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಶಿಕ್ಷಕರು ವೃತ್ತಿ ಬದ್ಧತೆ ಬೆಳೆಸಿಕೊಂಡು ಕ್ರಿಯಾಶೀಲರಾಗಿ ಬೋಧಿಸಿದಾಗ ಮಾತ್ರ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.

ನಗರದ ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಚಿತ್ರದುರ್ಗ ಡಯಟ್‍ನಲ್ಲಿ ಗುಣಮಟ್ಟದ ಶಿಕ್ಷಣ, ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಡಯಟ್‍ನ ಪಾತ್ರ ವಿಷಯದ ಕುರಿತು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು. ಮಕ್ಕಳಲ್ಲಿ ಸ್ಪಷ್ಟ ಓದು, ಶುದ್ಧ ಬರಹ, ಸಂಖ್ಯಾ ಜ್ಞಾನ ಸಾಮರ್ಥ್ಯ ಬೆಳೆಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಉಪನ್ಯಾಸಕ ಎಸ್. ಬಸವರಾಜು ಮಾತನಾಡಿ, ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣ ಸೃಷ್ಟಿಸಿ ಮಾತೃಭಾವನೆಯಿಂದ ಬೋಧನೆ ಮಾಡಬೇಕು. ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಲು ಶಿಕ್ಷಕರಿಗೆ ಸಹಾನುಭೂತಿ, ಸಂವೇದನಾಶೀಲತೆ ಅಗತ್ಯವಾಗಿದೆ ಎಂದರು.

ಮಕ್ಕಳ ಮನಸ್ಥಿತಿ ಅರ್ಥೈಸಿಕೊಂಡು ಪೂರಕ ಚಟುವಟಿಕೆ ಬಳಸಿ, ಬೋಧಿಸುವುದರಿಂದ ಕಲಿಕಾ ಪ್ರಗತಿ ಆಗುತ್ತದೆ. ನಮ್ಮ ವೃತ್ತಿ ಪ್ರೀತಿಸಬೇಕು. ಪೂರ್ವ ಸಿದ್ಧತೆಯಿಂದ ತರಗತಿ ನಿರ್ವಹಣೆ ಮಾಡಬೇಕು. ಹೊಸ ಚಿಂತನೆಯೊಂದಿಗೆ ನಾವೀನ್ಯ ಚಟುವಟಿಕೆ ಅಳವಡಿಸಿಕೊಂಡು ಪಠ್ಯ ವಿಷಯ ಬೋಧಿಸುವುದರ ಜತೆಗೆ ಜೀವನ ಮೌಲ್ಯ ಬೆಳೆಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಉಪನ್ಯಾಸಕ ಯು. ಸಿದ್ದೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಗುಣವನ್ನುಅನುಕರಣೆ ಮಾಡಬೇಕು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಗುರುತಿಸಿ ಬುದ್ಧಿಮಟ್ಟ ಅರಿತು ಬೋಧಿಸಬೇಕು. ಪಾಠ ಬೋಧನೆಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಕಲಿಕೆ ಸುಲಭಗೊಳಿಸಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಿ.ಎಸ್. ಲೀಲಾವತಿ, ವಿ. ಕನಕಮ್ಮ, ಗಿರೀಶ ಬಿ. ಇಡಿ ಕಾಲೇಜಿನ ಉಪನ್ಯಾಸಕ ಡಿ. ವೇದಾ, ಎಸ್. ನಿಜಲಿಂಗಪ್ಪ, ಎಂ.ಲೋಕೇಶ್, ಪ್ರಮೋದ್, ನಾಗರಾಜು, ವನಿತ, ಮಂಜು ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.