ಕಾರ್ಯಕರ್ತರಲ್ಲಿ ಪ್ರಶ್ನಿಸುವ ದಮ್ಮಿರಬೇಕು: ಉಗ್ರಪ್ಪ

| Published : Aug 08 2024, 01:34 AM IST

ಕಾರ್ಯಕರ್ತರಲ್ಲಿ ಪ್ರಶ್ನಿಸುವ ದಮ್ಮಿರಬೇಕು: ಉಗ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ಬಗ್ಗೆ ಸತ್ಯಶೋಧನ ಸಭೆಯಲ್ಲಿ ಮಾಜಿ ಸಂಸದ, ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ಸಮಾಜವಾದಿ ನೆಲೆಯಲ್ಲಿ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಕ್ಷದ ನಿಷ್ಠವಂತ ಕಾರ್ಯಕರ್ತನಾದವನು ಪಕ್ಷದ ನಾಯಕರೇ ತಪ್ಪು ಮಾಡಿದಲ್ಲಿ ಮುಲಾಜಿಲ್ಲದೆ ಎಚ್ಚರಿಕೆ ನೀಡಿ, ನಾನು ಕಾರ್ಯಕರ್ತ ನನ್ನಿಂದಲೇ ನೀನು ನಾಯಕನಾಗಿದ್ದು, ಎಂಬುವುದನ್ನು ಎಚ್ಚರಿಸಬೇಕು ಎಂದು ಮಾಜಿ ಸಂಸದ, ಸತ್ಯಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆಯ ಬಗ್ಗೆ ಸತ್ಯಶೋಧನ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಶ್ನೆ ಮಾಡುವ ದಮ್ಮು ಕಾರ್ಯಕರ್ತರಲ್ಲಿ ಇರಬೇಕು. ಸಮಾಜವಾದಿ ನೆಲೆಯಲ್ಲಿ ನಾಯಕತ್ವ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಅದನ್ನು ವಿಫಲ ಮಾಡಬೇಕು. ನಿಮ್ಮೆಲ್ಲರ ಅಭಿಪ್ರಾಯ ಪಡೆದು, ಹೈಕಮಾಂಡ್‍ಗೆ ವರದಿ ನೀಡುತ್ತೇವೆ ಎಂದರು.

ಚುನಾವಣೆಯಲ್ಲಿ ಆದ ಲೋಪಗಳನ್ನು ಸರಿಪಡಿಸಬೇಕು. ಸಂಘಟನೆ ಮಾಡಬೇಕು ಎಂದು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರ ಆದೇಶದ ಹಿನ್ನೆಲೆಯಲ್ಲಿ ನಾವು ಬಂದಿದ್ದೇವೆ. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಫಲಿತಾಂಶ ಬಂದಿದೆ. ಇದಕ್ಕೆ ಕಾರಣವನ್ನು ಹುಡುಕುತ್ತೇವೆ. ವೈಚಾರಿಕತೆಯ ಶಿವಮೊಗ್ಗ ಜಿಲ್ಲೆಯಲ್ಲೇ ಮತೀಯ ವಾದಿಗಳು ವಿಜೃಂಭಿಸುತ್ತಿದ್ದಾರೆ. ಆದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಸತ್ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು. ಜಾತಿ, ಹಣ, ಧರ್ಮಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಬಲಿಯಾಗಿದ್ದಾರೆ ಎಂಬ ಬಗ್ಗೆ ಸತ್ಯಶೋಧನಾ ಸಮಿತಿ ಮಾಹಿತಿ ಪಡೆದು ವರದಿ ನೀಡಲಿದೆ ಎಂದರು.

ಪಕ್ಷದಲ್ಲಿ ಮೂರು ವರ್ಗದ ಕಾರ್ಯಕರ್ತರಿದ್ದಾರೆ. ಒಂದು ವರ್ಗ ನಾಯಕರ ಹಿಂದೆಯೇ ಪ್ರದಕ್ಷಿಣೆ ಹಾಕುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಾಕಿ ಸಂದರ್ಭದಲ್ಲಿ ಅವರು ಕಾಣುವುದಿಲ್ಲ. ಇನ್ನೊಂದು ವರ್ಗ ಕೇವಲ ಪೋಟೋಗಾಗಿ ಮಾತ್ರ ಓಡಾಡುತ್ತದೆ. ಮತ್ತೊಂದು ವರ್ಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸುತ್ತ ಜನರ ನಡುವೆಯೇ ಇದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ, ಕಾರ್ಯನಿರ್ವಹಿಸುತ್ತ ನಾಯಕರೆನ್ನಿಸಿಕೊಂಡಿರುತ್ತಾರೆ. ನಾಯಕನಾಗಬೇಕಾದರೆ, ಆತ ಜನರ ಮಧ್ಯೆ ಇದ್ದು, ಸ್ಪಂದಿಸಬೇಕು ಮಾಧ್ಯಮದವರೊಂದಿಗೆ ನಿಕಟ ಸಂಪರ್ಕ ಹೊಂದಿ ಪಕ್ಷದ ಗುಣಾತ್ಮಕ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ಮಾಡಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಆಂಜನೇಯ ಮಾತನಾಡಿ, ಪಕ್ಷದ ಸಂಘಟನೆಗೆ ಹಾಗೂ ಮುಂಬರುವ ಜಿ.ಪಂ., ತಾ.ಪಂ. ಹಾಗೂ ಸ್ಥಳೀಯ ಚುನಾವಣೆಗಳಿಗೆ ಪಕ್ಷವನ್ನು ಬಲ ಪಡಿಸಲು ಈ ಸಭೆ ನಡೆಯುತ್ತಿದೆ. ಗೀತಾ ಶಿವರಾಜ್‍ಕುಮಾರ್ ಒಳ್ಳೆಯ ಅಭ್ಯರ್ಥಿ ಶೇ.100ರಷ್ಟು ಗೆಲುವಿನ ನಿರೀಕ್ಷೆಯಲ್ಲಿದ್ದೆವು. ಆದರೆ, ಸೋಲಾಗಿದೆ. ಹಿನ್ನಡೆಗೆ ಕಾರಣವನ್ನು ತಿಳಿದುಕೊಳ್ಳುತ್ತೇವೆ. ಪಕ್ಷ ತಾಯಿ ಇದ್ದಹಾಗೆ, ಪಕ್ಷಕ್ಕೆ ದ್ರೋಹ ಮಾಡಿದರೆ, ಹೆತ್ತ ತಾಯಿಗೆ ದ್ರೋಹ ಮಾಡಿದಂಗೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಗಳನ್ನು ಯಾವುದೇ ಕಾರಣಕ್ಕೂ ಬಲಿಕೊಡಬಾರದು. ಸಂಜೆಯವರೆಗೆ ಚರ್ಚೆ ಮಾಡಿ ಮಾಹಿತಿ ಪಡೆಯುತ್ತೇವೆ ಎಂದರು.

ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ, ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಅಹಮ್ಮದ್, ಶಾಸಕಿ ಬಲ್ಕಿಶ್ ಬಾನು, ಪ್ರಮುಖರಾದ ಆಯನೂರು ಮಂಜುನಾಥ್, ಎಂ.ಶ್ರೀಕಾಂತ್, ಎನ್.ರಮೇಶ್, ಹೆಚ್.ಎಸ್.ಸುಂದರೇಶ್, ಹೆಚ್.ಸಿ.ಯೋಗೀಶ್, ಕಲ್ಗೋಡು ರತ್ನಾಕರ್, ಮೋಹನ್‍ಕುಮಾರ್, ಇಕ್ಕೇರಿ ರಮೇಶ್ ಎಸ್.ಟಿ. ಚಂದ್ರಶೇಖರ್, ಡಾ.ಶ್ರೀನಿವಾಸ್ ಕರಿಯಣ್ಣ, ಖಲೀಂ ಪಾಷಾ, ವಿಶ್ವನಾಥ್ ಕಾಶಿ, ನಗರದ ಮಹಾದೇವಪ್ಪ, ಗೋಣಿ ಮಾಲತೇಶ್ ಮತ್ತಿತರರಿದ್ದರು.