ದೇವದಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಟ ಚೇತನ ಒತ್ತಾಯ

| Published : Apr 04 2024, 01:00 AM IST

ಸಾರಾಂಶ

ಕಲ್ಯಾಣ ಕರ್ನಾಟಕ ಹಿಂದುಳಿದ ಗಡಿಪ್ರದೇಶದಲ್ಲಿ ದೇವದಾಸಿ ಮಹಿಳೆಯರಿಗೆ ಇರುವ ಸರಕಾರದ ಸೌಲಭ್ಯಗಳು ಜೋಗುತಿ (ಪರಡಿ) ಮಹಿಳೆಯರಿಗೂ ನೀಡಬೇಕು. ಅವರು ಬದುಕು ಕಟ್ಟಿಕೊಳ್ಳುವುದಕ್ಕಾಗಿ ಮನೆ, ಮಾಶಾಸನ ಸೇರಿದಂತೆ ಮೂಲಸೌಕರ್ಯಗಳನ್ನು ನೀಡಬೇಕೆಂದು ನಟ ಚೇತನ್ ಅಹಿಂಸಾ ಸರಕಾರಕ್ಕೆ ಅಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕಲ್ಯಾಣ ಕರ್ನಾಟಕ ಹಿಂದುಳಿದ ಗಡಿಪ್ರದೇಶದಲ್ಲಿ ದೇವದಾಸಿ ಮಹಿಳೆಯರಿಗೆ ಇರುವ ಸರಕಾರದ ಸೌಲಭ್ಯಗಳು ಜೋಗುತಿ (ಪರಡಿ) ಮಹಿಳೆಯರಿಗೂ ನೀಡಬೇಕು. ಅವರು ಬದುಕು ಕಟ್ಟಿಕೊಳ್ಳುವುದಕ್ಕಾಗಿ ಮನೆ, ಮಾಶಾಸನ ಸೇರಿದಂತೆ ಮೂಲಸೌಕರ್ಯಗಳನ್ನು ನೀಡಬೇಕೆಂದು ನಟ ಚೇತನ್ ಅಹಿಂಸಾ ಸರಕಾರಕ್ಕೆ ಅಗ್ರಹಿಸಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನದಲ್ಲಿ ಯುನಿಟಿ ಆಪ್‌ ಮೂಲನಿವಾಸಿ ಬಹುಜನ ಸಂಘಟನೆ, ಬಾಮಸೇಫ ಭಾರತ ಮುಕ್ತಿ ಮೋರ್ಚಾ ಸಂಘಟನೆಗಳು ಆಯೋಜಿಸಿದ್ದ ದೇವದಾಸಿ (ಪರಡಿ) ಮಹಿಳೆಯರ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.

ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಬುರುಬುರೆ ಜನಾಂಗದವರು ಮತ್ತು ಪಟ್ಟಣದ ಮೌನೇಶ ದೇವಾಲಯ ಬಳಿ ಅಲೆಮಾರಿ ಜನರಿಗೆ ಸರಕಾರದಿಂದ ಸೌಲಭ್ಯಗಳು ಸಿಕ್ಕಿಲ್ಲ. ಸರಕಾರ ದೇವದಾಸಿಯರಿಗೆ ನಿಗಮ ಸ್ಥಾಪನೆ ಮಾಡಬೇಕು. ಪರಡಿ ಮಹಿಳೆಯರ ಏಳಿಗೆ ಆಗಬೇಕು. ೨೦೧೮ರ ದೇವದಾಸಿಯರ ಪುನರ ವಸತಿ ಕಾಯಿದೆ ಜಾರಿ ಮಾಡಿ ರಾಜ್ಯದಲ್ಲಿರುವ ಜೋಗುತಿಯವರ ಸಮೀಕ್ಷೆ ನಡೆಸಬೇಕು. ರಾಜ್ಯದಲ್ಲಿ ೫೦ಸಾವಿರ ದೇವದಾಸಿಯರು, ಪರಡಿ ಮತ್ತು ಜೋಗುತಿಯರು ಇದ್ದಾರೆ. ದೇವದಾಸಿಯವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಸಮಾವೇಶದಲ್ಲಿ ದೇವದಾಸಿ ಹೋರಾಟಗಾರ್ತಿ ಲಕ್ಷ್ಮಿ ಬಾವಗೆ, ಮಾರುತಿ ಗಂಜಗಿರಿ, ಸೂರ್ಯಕಾಂತ ಕಮಠಾಣ, ತುಕಾರಾಮ, ಸಾಗರ ಆನಂದಿ, ಗೋಪಾಲ ಪೂಜಾರಿ, ಮೌನೇಶಗಾರಂಪಳ್ಳಿ, ಮೋಹನ ಐನಾಪೂರ, ಸುಭಾಷ ತಾಡಪಳ್ಳಿ, ವಿಶ್ವನಾಥ ಹೊಡೇಬೀರನಳ್ಳಿ, ಮಹೇಶ ರಾಜಾಪುರ, ಪ್ರವೀಣ ಮೇತ್ರಿ ಇನ್ನಿತರಿದ್ದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ಭರವಸೆ: ತಾಲೂಕಿನಲ್ಲಿ ಚುನಾವಣಾ ನೀರಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ಭರವಸೆ ಕೊಡುವುದಕ್ಕೆ ಬರುವುದಿಲ್ಲ. ಜೋಗುತಿ, ಪರಡಿ, ದೇವದಾಸಿಯರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸರಕಾರದಿಂದ ಯಾವ ಯಾವ ಸೌಲಭ್ಯ ಬೇಕು ಎಂದು ಗಮನಹರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.