ಸಾರಾಂಶ
ಮದ್ದೂರು : ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾವು ಮಾತನಾಡಬಾರದು. ಬೇರೊಂದು ಭಾಷೆಯ ಜನರ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು. ಭಾಷೆಯ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಕಮಲ್ ಹಾಸನ್ ಹೇಳಿಕೆಯನ್ನು ನಾವು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಹೇಳಿದರು.
ಕಮಲ್ ಹಾಸನ್ ಕನ್ನಡದ ವಿಚಾರದಲ್ಲಿ ಆ ರೀತಿ ಮಾತನಾಡಿರುವುದು ತಪ್ಪು. ಅವರು ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ನಮ್ಮ ಭಾಷೆಗೇನೂ ಧಕ್ಕೆ ಬರುವುದಿಲ್ಲ. ಅವರ ಹೇಳಿಕೆಯನ್ನು ನಾವು ಒಪ್ಪುವುದಕ್ಕೂ ಸಾಧ್ಯವಿಲ್ಲ. ಇದು ನಮ್ಮ ಸ್ಪಷ್ಟ ಅಭಿಪ್ರಾಯ ಎಂದು ತಾಲೂಕಿನ ಗೊರವನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಾವಿರಾರು ವರ್ಷಗಳ ಹಿಂದೆ ಯಾವ ಭಾಷೆಯಿಂದ ಯಾವ ಭಾಷೆ ಬಂತು ಅಂತ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ತಪ್ಪು. ಭಾಷೆಯ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಕಮಲ್ ಹಾಸನ್ ಅವರು ಆ ರೀತಿ ಮಾತನಾಡಬಾರದಿತ್ತು ಎಂದು ನುಡಿದರು.
ಕಮಲ್ ಹಾಸನ್ ಚಿತ್ರಗಳನ್ನು ನಿಷೇಧಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ಸಿನಿಮಾ ಅನ್ನೊದು ಒಬ್ಬರಿಂದ ಆಗುವುವಂತಹದ್ದಲಲ್ಲ. ನೂರಾರು ಜನ ಸೇರಿದರೆ ಮಾತ್ರ ಸಿನಿಮಾ ಆಗಲು ಸಾಧ್ಯ. ಸಿನಿಮಾ ಅಂದಮೇಲೆ ಕನ್ನಡ, ತಮಿಳು, ತೆಲುಗು ಎಲ್ಲರೂ ಇರುತ್ತಾರೆ. ಒಬ್ಬರಿಂದ ಸಿನಿಮಾಗೆ ಅನ್ಯಾಯ ಮಾಡಬೇಕಾ ಎಂಬ ಬಗ್ಗೆ ಯೋಚನೆ ಮಾಡಬೇಕು. ಈ ವಿಚಾರವನ್ನು ನಾನು ವಿವಾದ ಮಾಡುವುದಿಲ್ಲ. ಜನರ ಭಾವನೆಗೆ ಧಕ್ಕೆಯಾದರೆ ಜನರೇ ಎದ್ದು ನಿಲ್ಲುತ್ತಾರೆ. ಕಮಲ್ ಹಾಸನ್ ಕ್ಷಮೆಯಾಚಿಸಿದ್ದರೆ ಸರಿ ಇರುತ್ತಿತ್ತು ಎಂದರು.