ಕಮಲಹಾಸನ್ ಕನ್ನಡ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

| Published : May 30 2025, 12:26 AM IST / Updated: May 30 2025, 12:27 AM IST

ಸಾರಾಂಶ

ತಮಿಳು ನಟ ಕಮಲಹಾಸನ್ ಒಬ್ಬ ಸ್ಟಾರ್ ಆಗಿ ಬೆಳೆಯುವುದಕ್ಕೆ ಕೇವಲ ಒಂದು ಭಾಷೆ ಕಾರಣವಾಗಿರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.

ಹಾವೇರಿ: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ತಮಿಳು ನಟ ಕಮಲಹಾಸನ್ ವಿವಾದಿತ ಹೇಳಿಕೆಯನ್ನು ಖಂಡಿಸಿ ಹಾಗೂ ಕನ್ನಡಿಗರ ಕ್ಷಮೆ ಕೇಳುವಂತೆ ಆಗ್ರಹಿಸಿ ಕರವೇ ಪ್ರವೀಣಶೆಟ್ಟಿ ಬಣದ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಹನುಮಂತ ಭೋವಿ ಮಾತನಾಡಿ, ತಮಿಳು ನಟ ಕಮಲಹಾಸನ್ ಒಬ್ಬ ಸ್ಟಾರ್ ಆಗಿ ಬೆಳೆಯುವುದಕ್ಕೆ ಕೇವಲ ಒಂದು ಭಾಷೆ ಕಾರಣವಾಗಿರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ವಿವಾದಿತ ಹೇಳಿಕೆಯಿಂದಾಗಿ ರಾಜ್ಯದಲ್ಲಿರುವ ಆರೂವರೆ ಕೋಟಿ ಕನ್ನಡಾಭಿಮಾನಿಗಳ ಮನಸ್ಸಿಗೆ ತುಂಬಾ ನೋವುಂಟಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೋಸ್ಕರ ಈ ರೀತಿ ಅಸಂಬದ್ಧ ಹೇಳಿಕೆ ನೀಡಿರುವುದು ಖಂಡನೀಯವಾದದ್ದು. ಈ ಕೂಡಲೇ ನಟ ಕಮಲಹಾಸನ್ ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಜೂ. 6ಕ್ಕೆ ಬಿಡುಗಡೆಯಾಗುವ ಚಿತ್ರವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಮಾದೇವಪ್ಪ ಹೆಡಿಗ್ಗೊಂಡ, ರಮೇಶ್ ಸುಂಕದ, ಯುವರಾಜ್ ನವಲಗುಂದ, ರಮೇಶ ದಾಸಪ್ಪನವರ, ಭರಮಪ್ಪ ಡಮ್ಮಳ್ಳಿ, ಮಾಲತೇಶ ಹೆಬ್ಬಸೂರ, ಕಾಂತೇಶ ಕುರುಡೆರ, ಕುಮಾರ ಮಂಚಿಕೊಪ್ಪ ನವರ, ಅಶೋಕ ಗದಗ, ರಾಜಶೇಖರ ಬಳ್ಳಾರಿ, ಅರ್ಜುನ ಕೊರವರ, ರತ್ನಮ್ಮ ಸಂಗಪ್ಪನವರ, ದ್ಯಾಮವ್ವ ಮಾದಣ್ಣನವರ, ಕಮಲವ್ವ ಮುದಕಮ್ಮನವರ, ಗಿರಿಜಮ್ಮ ಹೊಸಮನಿ, ಗೀತಾ ಕನಕಪ್ಪನವರ, ಫಕೀರೇಶ ಭಜಂತ್ರಿ, ಮುಕೇಶ ಪಾಟೀಲ, ರವಿ ಕೊರವರ, ಶಾಂತಪ್ಪ ಕೊರವರ, ನಾಗರಾಜ ಮಚ್ಚಿಗಾರ, ಹರೀಶ ಮಳಗಾವಿ, ಮಂಜಪ್ಪ ಬುಳ್ಳಪ್ಪನವರ, ಸಂತೋಷ ವರವಜ್ಜಿ, ಕಿರಣ ಹುಚ್ಚಪ್ಪನವರ, ಲಕ್ಷ್ಮಣ್ ಕಟಿಗಿ, ಬಸಪ್ಪ ಕೊಡಬಾಳ, ಮಾಲತೇಶ ಓಲೇಕಾರ, ನಿಂಗಪ್ಪ ಓಲೇಕಾರ ಇದ್ದರು.ಕಮಲಹಾಸನ್ ಕ್ಷಮೆ ಯಾಚನೆಗೆ ಆಗ್ರಹ

ರಾಣಿಬೆನ್ನೂರು: ಕನ್ನಡ ಭಾಷೆಯ ಕುರಿತು ತಮಿಳು ನಟ ಕಮಲಹಾಸನ್ ನೀಡಿರುವ ಹೇಳಿಕೆ ಖಂಡಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಉಪತಹಸೀಲ್ದಾರ್ ಕೆ. ಶಾಮ ಗೊರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮಾತನಾಡಿ, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ತಮಿಳು ನಟ ಕಮಲಹಾಸನ್ ನೀಡಿರುವ ಹೇಳಿಕೆ ಖಂಡನೀಯ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಸಮಸ್ತ ಕನ್ನಡಿಗರ ಕ್ಷಮೇ ಕೇಳಬೇಕು. ಇಲ್ಲವಾದಲ್ಲಿ ಜೂ. 6ರಂದು ರಾಜ್ಯದಲ್ಲಿ ತೆರೆಗೆ ಬರಲಿರುವ ಕಮಲಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಬಿಡುಗಡೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಕಮಲಹಾಸನ್ ಒಬ್ಬ ನಟನಾಗಿ ಇಂತಹ ಮಾತು ಆಡಬಾರದು. ಇದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ. ಅವರು ಬಹಿರಂಗವಾಗಿ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲುವುದಿಲ್ಲ ಎಂದರು.

ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ಪರಶುರಾಮ ಕುರುವತ್ತಿ ರಿಯಾಜ್ ದೊಡ್ಡಮನಿ, ಮೃತುಂಜಯ ಕರಿಯಜ್ಜಿ, ಗೋಪಿ ಕುಂದಾಪುರ, ಶೋಭಾ ಮುದೇನೂರ, ಮರಡೆಪ್ಪ ಚಳಗೇರಿ, ಅಬ್ದುಲ್ ಎನ್.ಕೆ., ನಿಂಗಪ್ಪ, ಹೊನ್ನಪ್ಪ, ಮಾರುತಿ ಮಳಿಯಮ್ಮನವರ, ದಿವಾಕರ್, ರೇಖಾ ಬನ್ನಿಕೊಪ್ಪ ಮತ್ತಿತರರಿದ್ದರು.