ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಹೆಸರು ಇಲ್ಲ. ಈ ಭಾಗದಲ್ಲಿಯೂ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಈ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಸಹ ಪಟ್ಟಿಯಲ್ಲಿ ಹೆಸರು ಇಲ್ಲ. ಬರಪಟ್ಟಿಯಲ್ಲಿ ಸರ್ಕಾರ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ, ಕಂದಾಯ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯವುದಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಹೆಸರು ಇಲ್ಲ. ಈ ಭಾಗದಲ್ಲಿಯೂ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಈ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಸಹ ಪಟ್ಟಿಯಲ್ಲಿ ಹೆಸರು ಇಲ್ಲ. ಬರಪಟ್ಟಿಯಲ್ಲಿ ಸರ್ಕಾರ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ, ಕಂದಾಯ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯವುದಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಹೇಳಿದರು.ತಾಲೂಕಿನ ಕುದರಿಸಾಲವಾಡಗಿಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಹಿಪ್ಪರಗಿ ಮತಕ್ಷೇತ್ರ ನಾಲ್ಕು ತಾಲೂಕಿನ ಗ್ರಾಮಗಳನ್ನು ಒಳಗೊಂಡಿದೆ. ಈ ನಾಲ್ಕು ತಾಲೂಕಿನಲ್ಲಿ ನಿಡಗುಂದಿ ತಾಲೂಕು ಗ್ರಾಮಗಳು ಬರಪಟ್ಟಿಯಲ್ಲಿದೆ. ತಾಳಿಕೋಟೆ, ಬಸವನಬಾಗೇವಾಡಿ, ದೇವರಹಿಪ್ಪರಗಿ ತಾಲೂಕುಗಳು ಬರಪಟ್ಟಿಯಲ್ಲಿ ಇಲ್ಲ. ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಶೇ.75-80 ರಷ್ಚು ತೊಗರಿ, ಶೇ.75-80 ರಷ್ಟು ಹತ್ತಿ, ಶೇ.55-65ರಷ್ಟು ಕಬ್ಬು, ಶೇ.60-65ರಷ್ಟು ಮೆಕ್ಕೆಜೋಳ, ಶೇ.70-75ರಷ್ಟು ಸೂರ್ಯಕಾಂತಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಆವರಿಸಿದೆ. ಕಾಂಗ್ರೆಸ್ ಸರ್ಕಾರ ರೈತಪರ ಸರ್ಕಾರ ಎಂದು ಹೇಳುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ ಕೂಡಲೇ ಅವರ ನೆರವಿಗೆ ಧಾವಿಸಿ ಅವರ ಸಾಲ ಮನ್ನಾ ಮಾಡುವ ಜೊತೆಗೆ ಬರ ಪರಿಹಾರ ನೀಡಬೇಕು. ಒಂದು ವೇಳೆ ಸರ್ಕಾರ ದೇವರಹಿಪ್ಪರಗಿ ಮತಕ್ಷೇತ್ರವನ್ನು ಬರಪಟ್ಟಿಯಲ್ಲಿ ಸೇರ್ಪಡೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಗುಡುಗಿದರು.ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 22,964ಕ್ಕಿಂತಲೂ ಹೆಚ್ಚು ರೈತರು ಬೆಳೆವಿಮೆ ತುಂಬಿದ್ದಾರೆ. ವಿಮಾ ಕಂಪನಿಯವರು ಯಾರಿಗೂ ಅನ್ಯಾಯವಾಗದಂತೆ ಅವರಿಗೆ ಬೆಳೆವಿಮೆ ಬರುವಂತೆ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇನೆ. ನಮ್ಮ ಭಾಗದಲ್ಲಿ ಸಂಪೂರ್ಣ ನೀರಾವರಿ ಇಲ್ಲ. ತಾಳಿಕೋಟೆ ತಾಲೂಕಿನಲ್ಲಿ ಬರುವ ಪೀರಾಪುರ ಏತ ನೀರಾವರಿಯಿಂದ ರೈತರಿಗೆ ಸರಿಯಾಗಿ ನೀರು ಬರುತ್ತಿಲ್ಲ. ಈ ಕುರಿತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ರೈತರಿಗೆ ನೀರು ಸಿಗುವಂತೆ ಸಹಕಾರ ನೀಡುವಂತೆ ತಿಳಿಸಿದ್ದೇನೆ. ದೇವರಹಿಪ್ಪರಗಿ ಮತಕ್ಷೇತ್ರವನ್ನು ಸರ್ಕಾರಿ ಕೂಡಲೇ ಬರಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಆಗ್ರಹಿಸಿದರು. ಗೋಷ್ಠಿಯಲ್ಲಿ ಸಚೀನಗೌಡ ಪಾಟೀಲ, ಸಂಗನಗೌಡ ಪಾಟೀಲ, ಗುರನಗೌಡ ಪಾಟೀಲ ಇದ್ದರು.