ಸಾರಾಂಶ
ಲಾರಿ ಚಾಲಕ ಕಾರ್ತಿಕ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉಪ್ಪಿನಂಗಡಿ: ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಹೆದ್ದಾರಿ ಪಕ್ಕದ ಅಂಗಡಿಗೆ ನುಗ್ಗಿದ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಕೆಂಪು ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಗುಂಡ್ಯ ಸಮೀಪ ಶಿರಾಡಿ ಗ್ರಾಮದ ಅಡ್ಡಹೊಳೆ ಸೇತುವೆ ದಾಟಿ ಹೋಗುತ್ತಿದ್ದಂತೆ ಸ್ಟೇರಿಂಗ್ ತುಂಡಾಗಿದೆ. ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಪಕ್ಕದ ತಂಗಚ್ಚನ್ ಎಂಬವರ ಮಾಲಕತ್ವದ ಟಯರ್ ಪಂಕ್ಚರ್ ಅಂಗಡಿ ಹಾಗೂ ಹೋಟೆಲ್ಗೆ ನುಗ್ಗಿದೆ. ಈ ವೇಳೆ ಅಂಗಡಿಯಲ್ಲಿ ಇಬ್ಬರು ಮಹಿಳೆಯರಿದ್ದು ಓಡಿ ಹೋಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಎರಡು ಅಂಗಡಿಗಳಿಗೂ ಸಂಪೂರ್ಣ ಹಾನಿಯಾಗಿದೆ. ಲಾರಿ ಚಾಲಕ ಕಾರ್ತಿಕ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.