ಸಾರಾಂಶ
ಕುಡಿತ ಮತ್ತಿತರ ವ್ಯಸನಗಳಿಗೆ ಒಳಗಾದ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ದುಶ್ಚಟಗಳಿಗೆ ಒಳಗಾದ ವ್ಯಕ್ತಿಯ ಕುಟುಂಬಗಳೂ ಸಾಮಾಜಿಕವಾಗಿ ಕುಗ್ಗಿ ಹೋಗುತ್ತವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಕುಡಿತ ಮತ್ತಿತರ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಅರಿವು ಮೂಡಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವ್ಯಸನ ಮುಕ್ತ ಸಮಾಜದಿಂದ ಮಾತ್ರ ಆರೋಗ್ಯಕರ ವಾತಾವರಣ ನಿರ್ಮಾಣ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್ ಅಭಿಪ್ರಾಯಪಟ್ಟರು.ತಾಲೂಕಿನ ಬಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೂಕನಕೆರೆ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದ ಒತ್ತಡಗಳು, ಕೌಟುಂಬಿಕ ಕಾರಣಗಳು, ದುಷ್ಟರ ಸಹವಾಸ, ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆ ಸೇರಿದಂತೆ ಬದುಕಿನ ಹಲವು ನಕಾರಾತ್ಮಕ ಚಿಂತನೆಗಳು ಮನುಷ್ಯನ ದುಶ್ಚಟಗಳಿಗೆ ಕಾರಣವಾಗುತ್ತವೆ ಎಂದು ಎಚ್ಚರಿಸಿದರು.ಕುಡಿತ ಮತ್ತಿತರ ವ್ಯಸನಗಳಿಗೆ ಒಳಗಾದ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ದುಶ್ಚಟಗಳಿಗೆ ಒಳಗಾದ ವ್ಯಕ್ತಿಯ ಕುಟುಂಬಗಳೂ ಸಾಮಾಜಿಕವಾಗಿ ಕುಗ್ಗಿ ಹೋಗುತ್ತವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಕುಡಿತ ಮತ್ತಿತರ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಅರಿವು ಮೂಡಿಸಬೇಕು ಎಂದರು.
ತಂದೆ- ತಾಯಿಗಳು ತಮ್ಮ ಮಕ್ಕಳ ಚಲನವಲನ ಸ್ನೇಹ ವಲಯದ ಬಗ್ಗೆ ಎಚ್ಚರಿಕೆ ವಹಿಸಿ ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ದಾರಿ ತಪ್ಪದಂತೆ ಎಚ್ಚರ ವಹಿಸಬೇಕು. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಸಂಸ್ಕಾರಯುತ ಬದುಕಿನ ದಾರಿಯನ್ನು ತೋರಿಸುವ ಮೂಲಕ ಅವರು ದಾರಿತಪ್ಪದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಬದುಕಿನ ಮಹತ್ವವನ್ನು ಬೋಧಿಸುವುದರ ಜೊತೆ ಜೊತೆಯಲ್ಲಿಯೇ ಸಾಮಾಜಿಕ ಚಿಂತನೆಗಳನ್ನು ಬೆಳೆಸಬೇಕು. ಶಾಲಾ ಮಕ್ಕಳಿಗೆ ದುಶ್ಚಟಗಳಿಂದ ದೂರವಿರುವ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಅರುಣ್ ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶಿಮುರುಕನಹಳಿ ಪ್ರೀತಮ್, ವಲಯದ ಮೇಲ್ವಿಚಾರಕ ಪ್ರಕಾಶ್ ಆಚಾರ್ಯ, ಶಾಲಾ ಶಿಕ್ಷಕ ವೃಂದ ಮತ್ತು ಧರ್ಮಸ್ಥಳ ಸಂಸ್ಥೆಯ ಸೇವಾಪ್ರತಿನಿಧಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.