ಈಗಾಗಲೇ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿನ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಹತ್ತು ಹಾಸಿಗೆಗಳ ಯೂನಿಟ್, 15 ಹಾಸಿಗೆಗೆಳ ತುರ್ತು ನಿಗಾ ಘಟಕ ಇದ್ದು ಈಗ ಈ ಹೆಚ್ಚುವರಿ ಹತ್ತು ಹಾಸಿಗೆಗಳ ತೀವ್ರ ನಿಗಾ ಘಟಕ ಸಹ ಸೇರ್ಪಡೆಯಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿನ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಹತ್ತು ಹಾಸಿಗೆಗಳ ತೀವ್ರ ನಿಗಾ ಘಟಕ ( ಹೈಡಿಪೆನ್ಡೆನ್ಸಿ ಬೆಡ್ ಯೂನಿಟ್ ) ವನ್ನು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ಧೇಶಕ ಡಾ.ಎಂ.ಎಲ್.ಮಂಜುನಾಥ್ ರವರು ಲೋಕಾರ್ಪಣೆ ಮಾಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿನ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಹತ್ತು ಹಾಸಿಗೆಗಳ ಯೂನಿಟ್, 15 ಹಾಸಿಗೆಗೆಳ ತುರ್ತು ನಿಗಾ ಘಟಕ ಇದ್ದು ಈಗ ಈ ಹೆಚ್ಚುವರಿ ಹತ್ತು ಹಾಸಿಗೆಗಳ ತೀವ್ರ ನಿಗಾ ಘಟಕ ಸಹ ಸೇರ್ಪಡೆಯಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ತುರ್ತು ಸಮಯದಲ್ಲಿ ರೋಗಿಯನ್ನು ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸದೇ ಇಲ್ಲಿಯೇ ಚಿಕಿತ್ಸೆ ಮತ್ತು ಆರೈಕೆ ಮಾಡ ಬಹುದಾಗಿದೆ. ಇದರಿಂದ ರೋಗಿಯ ಜೀವ ಉಳಿಸುವ ಸಮಯ ಹೆಚ್ಚಿಗೆ ಸಿಗುತ್ತದೆ. ರೋಗಿಯನ್ನು ಸಾಗಿಸುವಾಗ ಮಾರ್ಗ ಮದ್ಯೆ ಟ್ರಾಫಿಕ್ ಕಿರಿಕಿರಿಯಿಂದ ಸಮಯ ಹಾಗೂ ಜೀವ ಉಳಿಸುವ ಕಾರ್ಯ ಸುಗಮವಾಗುತ್ತದೆ ಎಂದರು.
ಈ ಘಟಕಗಳು ವೆಂಟಿಲೇಟರ್ಗಳು, ಕೇರ್ ಸಾಫ್ಟ್ವೇರ್ ಮತ್ತು ಟೆಲಿ-ಐಸಿಯು ತಂತ್ರಜ್ಞಾನವನ್ನು ಹೊಂದಿದ್ದು, ನಂದಿ ಮೆಡಿಕಲ್ ಕಾಲೇಜಿನ ಜಿಲ್ಲಾ ಬೋಧನಾ ಆಸ್ಪತ್ರೆಯಡಿ ಕಾರ್ಯನಿರ್ವಹಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದ್ದು, 10 ಹಾಸಿಗೆಗಳೊಂದಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನ ಅಳವಡಿಕೆ ಸೌಲಭ್ಯಗಳನ್ನು ಒಳಗೊಂಡಿದೆ. ಅಗತ್ಯವಿದ್ದಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ದೂರಸಂಪರ್ಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುವುದರಿಂದ ಈ ಉಪಕ್ರಮವು ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಜನರಿಗೆ ಸಹಾಯ ಮಾಡುತ್ತದೆ. ಈ ಘಟಕದ ಉಧ್ಘಾಟನೆ ನನಗೆ ಹೆಮ್ಮೆ ಎನಿಸುತ್ತದೆ. ಏಕೆಂದರೆ ರೋಗಿಯ ಜೀವ ಉಳಿದು ಆತ ಆರೋಗ್ಯವಂತಾನಾಗಿ ಮನೆಗೆ ಮರಳುತ್ತಾನೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಉಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು.ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್, ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ.ರಮೇಶ್, ವೈದ್ಯರಾದ ಡಾ.ವೆಂಕಟೇಶ ಮೂರ್ತಿ, ಡಾ.ಕೆ.ಆರ್.ಅನಂತು,ನರ್ಸಿಂಗ್ ವಿಭಾಗದ ಭೋಧಕಿ ವಿಜಯಲಕ್ಷ್ಮಿ, ಸಿಬ್ಬಂದಿ ರಂಜಿತ್, ಉಪ್ಪಿ ಇದ್ದರು.
ಸಿಕೆಬಿ-4 ನಗರದ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿನ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಹತ್ತು ಹಾಸಿಗೆಗಳ ತೀವ್ರ ನಿಗಾ ಘಟಕವನ್ನು ಡೀನ್ ಡಾ.ಎಂ.ಎಲ್.ಮಂಜುನಾಥ್ ಉದ್ಘಾಟಿಸಿದರು.