ಧಾರವಾಡ:

ಜಿಪಂ ಸದಸ್ಯ ಯೋಗೇಶಗೌಡ ಹತ್ಯೆಯ ಎ-1 ಆರೋಪಿ, ಮಾಫಿ ಸಾಕ್ಷಿಯಾಗಿರುವ ಬಸವರಾಜ ಮುತ್ತಗಿ ಅವರ ಮನೆಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

ಶಾಸಕ ವಿನಯ್‌ ಕುಲಕರ್ಣಿ ಪರಮಾಪ್ತನಾಗಿದ್ದ ಮುತ್ತಗಿ, ವಿನಯ್‌ ವಿರುದ್ಧವಾಗಿ ಮಾಫಿ ಸಾಕ್ಷಿಯಾಗಿದ್ದಾರೆ. ಹೀಗಾಗಿ ಅವವರು ತಮಗೆ ಜೀವ ಬೆದರಿಕೆ ಇದೆ ಎಂದು ಕೋರ್ಟ್‌ಗೆ ತಿಳಿಸಿದ್ದರು. ಅದರಂತೆ ಭದ್ರತೆ ಒದಗಿಸಲಾಗಿತ್ತು. ಬುಧವಾರ ವಿನಯ್‌ ಸೇರಿದಂತೆ 17 ಜನ ಅಪರಾಧಿಗಳು ಎಂದು ಘೋಷಿಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಮುತ್ತಗಿ ನಿವಾಸಕ್ಕೆ ಸಿಆರ್‌ಫಿಎಫ್‌ನ 12 ಸಿಬ್ಬಂದಿ, ಒಂದು ಸಿಎಆರ್ ತುಕಡಿ ನಿಯೋಜಿಸಲಾಗಿದೆ.

ನಿಜವಾದ ಹೋರಾಟ:

ಈ ನಡುವೆ ತೀರ್ಪು ಬಂದ ಬಳಿಕ ದೇವಸ್ಥಾನಕ್ಕೆ ಮುತ್ತಗಿ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆ ನಡೆದಾಗಲೂ ಇದೇ ದೇವಸ್ಥಾನಕ್ಕೆ ಬಂದಿದ್ದೆ. ಬಳಿಕ ಸತ್ಯ ಹೇಳಲು ಸಿದ್ಧನಾಗಿದ್ದ ವೇಳೆಯಲ್ಲೂ ಇಲ್ಲೇ ಬಂದು ದೇವರ ದರ್ಶನ ಪಡೆದಿದ್ದೆ. ಇದೀಗ ತೀರ್ಪು ಬಂದಿದೆ. ಈಗಲೂ ಇಲ್ಲಿಗೆ ಬಂದು ಪ್ರಾರ್ಥಿಸಿಕೊಂಡಿದ್ದೇನೆ. ಹೋರಾಟ ಇನ್ನು ಮುಗಿದಿಲ್ಲ. ಮುಂದುವರಿಯುತ್ತದೆ. ಅದಕ್ಕೆ ಹೋರಾಟ ನಡೆಸಲು ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.


ನನಗೆ ಪಾಪ ಪ್ರಜ್ಞೆ ಕಾಡುತ್ತಿತ್ತು. ತಂದೆ-ತಾಯಿಗೆ ಭೇಟಿಯಾಗುತ್ತೇನೆ. ಅವರ ಆಶೀರ್ವಾದವನ್ನೂ ಪಡೆಯುತ್ತೇನೆ ಎಂದ ಅವರು, ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂಬುದು ತೀರ್ಪಿನಿಂದ ಸಾಬೀತಾಗಿದೆ. ರಾಜಕಾರಣಿಗಳು ಯುವಕರನ್ನು ಬರೀ ಬಳಸಿಕೊಳ್ಳುತ್ತಾರೆ. ಆದಕಾರಣ ಯುವಕರು ಎಚ್ಚೆತ್ತುಕೊಳ್ಳಬೇಕಿದೆ. ಯಾರು ಕೂಡ ಯಾರದೋ ಮಾತು ಕೇಳಿ ಕ್ರಿಮಿನಲ್‌ಗಳಾಗಬೇಡಿ. ಮಾಡಿರುವ ತಪ್ಪು ಸುಧಾರಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿದೆ. ಆದರೆ, ಎಲ್ಲರಿಗೂ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ನಿಮ್ಮ ಕುಟುಂಬಗಳು ಬೀದಿಗೆ ಬರುತ್ತವೆ. ಆದಕಾರಣ ಯಾರೂ ತಪ್ಪು ಮಾಡಬೇಡಿ ಎಂದು ಹೇಳಿದರು.

ಸಹೋದರ ಸಾವಿಗೆ ನ್ಯಾಯ ಸಿಕ್ಕಿದೆನನ್ನ ಸಹೋದರ ಸಾವಿಗೆ ಈಗ ನ್ಯಾಯ ಸಿಕ್ಕಂತಾಗಿದೆ. ಆತನ ಆತ್ಮಕ್ಕೆ ಶಾಂತಿ ಲಭಿಸಿದೆ ಎಂದು ಯೋಗೇಶಗೌಡ ಸಹೋದರಿ ಅಕ್ಕಮಹಾದೇವಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸಹೋದರ ಯೋಗೇಶಗೌಡ ಹತ್ಯೆಯಾಗಿ ಬರೋಬ್ಬರಿ 10 ವರ್ಷಗಳಾದವು. ಶಾಸಕ ವಿನಯ್‌ ಕುಲಕರ್ಣಿ ಸೇರಿದಂತೆ 17 ಜನ ಅಪರಾಧಿಗಳು ಎಂದು ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿತ್ತು ಎಂದರು. ಸಿಬಿಐಗೆ ಕೇಸ್‌ ಕೊಟ್ಟಿದ್ದರಿಂದ ಪಾರದರ್ಶಕವಾಗಿ ತನಿಖೆಯಾಗಿದೆ. ಸಿಬಿಐಗೆ ಕೊಟ್ಟಿದ್ದರಿಂದಲೇ ತಮಗೆ ನ್ಯಾಯ ಸಿಕ್ಕಿದೆ. ನಮ್ಮ ತಮ್ಮನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ. ಕಾನೂನು ಎಲ್ಲರಿಗೂ ಒಂದೇ ಎಂದರು.