ಸಾರಾಂಶ
ಯಾವುದೇ ಉದ್ಯಮ ಯಶಸ್ಸು ಕಾಣಲು ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆ ಅವಶ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಯಾವುದೇ ಉದ್ಯಮ ಯಶಸ್ಸು ಕಾಣಲು ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆ ಅವಶ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ಬೆಳಗಾವಿಯಲ್ಲಿ ಶುಕ್ರವಾರ ಆದಿತ್ಯ ಮಿಲ್ಕ್ ನ ಕಿಂಗ್ ಬ್ರ್ಯಾಂಡ್ ಐಸ್ ಕ್ರೀಮ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಷ್ಟಪಟ್ಟು ದುಡಿದರೆ ಯಾವ ಮಟ್ಟಕ್ಕೂ ಏರಬಹುದು ಎನ್ನುವುದಕ್ಕೆ ವಿಆರ್ ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ ಅವರೇ ಉದಾಹರಣೆ ಎಂದು ಹೇಳಿದರು.
ವಿಜಯ ಸಂಕೇಶ್ವರ ಅವರು ನಿರಂತರ ಶ್ರಮದಿಂದ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಜಮ್ಮು -ಕಾಶ್ಮೀರದಲ್ಲೂ ಸಂಸ್ಥೆಯ ಕಾರ್ಯವ್ಯಾಪ್ತಿ ವಿಸ್ತಾರವಾಗಿರುವುದು ನಾವೆಲ್ಲ ಹೆಮ್ಮೆ ಪಡುವಂತದ್ದು ಎಂದವರು ಹೇಳಿದರು.ಆದಿತ್ಯ ಮಿಲ್ಕ್ ಆರಂಭವಾಗಿ 18 ವರ್ಷದಲ್ಲಿ 4 -5 ರಾಜ್ಯಗಳಲ್ಲಿ ಮನೆ ಮಾತಾಗಿದೆ. ಸಂಸ್ಥೆ ಅಳವಡಿಸಿಕೊಂಡಿರುವ ಶಿಸ್ತು ಮತ್ತು ಉತ್ಪನ್ನಗಳ ಗುಣಮಟ್ಟ ಇದಕ್ಕೆ ಕಾರಣ. ದೀಪಾ ಸಿದ್ನಾಳ ಮತ್ತು ಮಕ್ಕಳು ಉದ್ಯಮವನ್ನು ಮತ್ತು ಕಿಂಗ್ಐಸ್ ಕ್ರೀಂ ನ್ನು ಇಡೀ ರಾಷ್ಟ್ರದಲ್ಲಿ ಮನೆ ಮಾತಾಗುವಂತೆ ಬೆಳೆಸಲಿ. ಅವರ ಕಷ್ಟ, ಸುಖದಲ್ಲಿ ನಾನಿರುತ್ತೇನೆ ಎಂದು ಹೆಬ್ಬಾಳಕರ ಭರವಸೆ ನೀಡಿದರು.
ಮಾಜಿ ಸಂಸದ, ವಿಆರ್ ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ, ಸಂಸದ ಜಗದೀಶ ಶೆಟ್ಟರ್, ವಿಆರ್ ಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ, ರೋಹಿಣಿ ಪಾಟೀಲ, ಲಲಿತಾ ಸಂಕೇಶ್ವರ, ದೀಪಾ ಸಿದ್ನಾಳ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.