ಮಂಗಳೂರು: ಧಾರ್ಮಿಕ ವ್ರತಾಚರಣೆಯ ಸಂದರ್ಭದ ಆಹಾರಸೂತ್ರ ಆರೋಗ್ಯದಾಯಕ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಕಲ್ಕೂರ ಪ್ರತಿಷ್ಠಾನ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಹಲಸು ಮಾವು ಮೇಳದ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಸಾವಯವ ಜಾಗೃತ ಸಂದೇಶ ನೀಡಿದರು.ಮಳೆಗಾಲದಲ್ಲಿ ಮನುಷ್ಯನ ದೇಹ ಮಂದಸ್ಥಿತಿಯಲ್ಲಿರುವುದರಿಂದ ಚಾತುರ್ಮಾಸ್ಯ ವ್ರತದ ಸಂದರ್ಭ ಯತಿಗಳು ಬಳಸುವ ಆಹಾರ ಸೂತ್ರಗಳು ವೈಜ್ಞಾನಿಕವಾಗಿಯೂ ಹೆಚ್ಚು ಆರೋಗ್ಯಕರವಾಗಿರುತ್ತದೆ. ಸಾತ್ವಿಕವಾದ ಆಹಾರಗಳೆಲ್ಲವೂ ಮಾನವರ ಆರೋಗ್ಯ ವರ್ಧನೆಗೆ ತುಂಬಾ ಸಹಕಾರಿಯಾಗಿರುವುದಲ್ಲದೆ, ಇದಕ್ಕೆ ಯೋಗಾಭ್ಯಾಸವೂ ಪೂರಕವಾಗುವುದು ಎಂದರು.ಆರೋಗ್ಯ ಭಾಗ್ಯದ ಕುರಿತು ವೈಜ್ಞಾನಿಕ ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದ ಪ್ರಸಿದ್ಧ ಆಯುರ್ವೇದ ತಜ್ಞ ಪಡುಬಿದ್ರಿ ಡಾ.ಎನ್.ಟಿ.ಅಂಚನ್, ನಮ್ಮ ಪರಿಸರದಲ್ಲಿ ಉಪಲಬ್ಧವಿರುವ ನೂರಿನ್ನೂರು ಸಸ್ಯ ಪ್ರಬೇಧಗಳ ಪ್ರಯೋಜನ ಪಡೆದುಕೊಂಡಲ್ಲಿ ನಮ್ಮಲ್ಲಿನ ಆರೋಗ್ಯ ಧಾರಣಾ ಶಕ್ತಿ ವೃದ್ಧಿಸುವುದರಲ್ಲಿ ಸಂಶಯವಿಲ್ಲ ಎಂದರು.
ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ನೂರಾರು ಪ್ರತಿಭಾನ್ವಿತ ಕಲಾವಿದರಿಂದ ವಾದ್ಯಸಂಗೀತ, ಭಜನೆ, ಪ್ರವಚನ, ಏಕಪಾತ್ರಾಭಿನಯ, ತಾಳಮದ್ದಳೆ, ಗಮಕ ವಾಚನ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮ ಅನಾವರಣಗೊಂಡಿತು. ಸಾಧಕ ಪ್ರತಿಭೆಗಳಿಗೆ ಸನ್ಮಾನ ಗೌರವಾರ್ಪಣೆಯನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ನೆರವೇರಿಸಲಾಯಿತು.ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.