ಸಾರಾಂಶ
ಧಾರವಾಡ: ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಸಿಕೊಂಡಲ್ಲಿ ಉತ್ಪಾದಕೆ ಹೆಚ್ಚುವುದರೊಂದಿಗೆ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಲಿದೆ ಎಂದು ನಿವೃತ್ತ ಕೃಷಿ ಅಭಿಯಂತರ ಡಾ. ಸತೀಶ ದೇಸಾಯಿ ಹೇಳಿದರು.
ಅವರು ಇಲ್ಲಿನ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಅಭಿಯಂತರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಎಂಜಿನೀಯರಿಂಗ್ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಸಿಕೊಂಡಲ್ಲಿ ಉತ್ಪಾದಕತೆಯಲ್ಲಿ ಹೆಚ್ಚಳವಾಗಲಿದೆ. ಪೂರಕವಾಗಿ ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯವೂ ಇದೆ ಎಂದರು.
ನಿವೃತ್ತ ಮುಖ್ಯ ಎಂಜಿನೀಯರ್ ಇ.ಎಂ. ನಾರಾಯಣ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಸ್ಮರಿಸಿ, ಅವರು ತಮ್ಮ ಕೊನೆಯುಸಿರು ಇರುವ ವರೆಗೂ ಅತ್ಯುನ್ನತ ಸೇವೆಯನ್ನು ದೇಶಕ್ಕಾಗಿ ಕೊಡುಗೆ ನೀಡಿ ಶತಮಾನದ ಮಹಾನ್ ಯುಗ ಪುರಷರು ಎಂದು ಅವರ ಕೆಲಸದ ನಿಷ್ಠೆ ಮತ್ತು ದೂರದೃಷ್ಟಿ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ಗಿರೀಶ್ ಮರಡ್ಡಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ರವರ ೧೯೧೨ ರಿಂದ ೧೯೧೮ರ ವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗ ಕೈಗೊಂಡ ಕೆ.ಆರ್.ಎಸ್. ಡ್ಯಾಂ, ಕೈಗಾರಿಕರಣ, ಮೂಲಭೂತ ಸೌಕರ್ಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ದೇಶಕ್ಕೆ ನೀಡಿದ ಹಲವಾರು ಕೊಡುಗೆಗಳಿಂದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿ ದೊರೆತಿದೆ. ಇಂದಿನ ಯುವಕರು ಅವರ ಸಾಧನೆ ಮತ್ತು ಜೀವನ ಶೈಲಿಯ ಬಗ್ಗೆ ಅರಿತು ಅನುಸರಿಸಿ ನಮ್ಮ ದೇಶವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದರು.
ವಾಲ್ಮಿಯ ಪ್ರಾಧ್ಯಾಪಕ ಬಿ.ವೈ. ಬಂಡಿವಡ್ಡರ, ಪ್ರಾಧ್ಯಾಪಕ ಜಿ. ಭೀಮಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಭುಲಿಂಗ ಹೇರೂರು, ಮಲ್ಲಿಕಾರ್ಜುನ ಭಂಡಿವಾಡ ಸೇರಿದಂತೆ ವಾಲ್ಮಿ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು ಮತ್ತು ಎಸ್.ಡಿ.ಎಂ. ಕಾಲೇಜ್ ಆಫ್ ಎಂಜಿನೀಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಧೀಂದ್ರ ಕೆ.ಎಸ್. ವಂದಿಸಿದರು. ಅನುರಾಧಾ ಮಳಗಿ ನಿರೂಪಿಸಿದರು.