ಯಲಬುರ್ಗಾ: ರೈತರು ಹತ್ತಿ ಕೃಷಿಯಲ್ಲಿ ವಿನೂತನ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಇಳುವರಿ ಹೆಚ್ಚಿಸಬಹುದಾಗಿದೆ ಎಂದು ಕೃಷಿ ವಿವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ಜಯಪ್ರಕಾಶ ಮೋಹನ ನಿಡಗುಂದಿ ಹೇಳಿದರು.

ಪಟ್ಟಣದ ಕಂದಾಯ ಭವನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಖೇತ್ ಬಚಾವೊ ಅಭಿಯಾನ ಹಾಗೂ ಹತ್ತಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹವಾಮಾನ ವೈಪರೀತ್ಯ ಹಾಗೂ ಕೀಟ ಬಾಧೆಯನ್ನು ಸಮರ್ಥವಾಗಿ ಎದುರಿಸಲು ರೈತರು ಕೃಷಿ ತಜ್ಞರ ಸಲಹೆ ಅನುಸರಿಸಬೇಕು ಎಂದರು.

ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ. ಬದರಿ ಪ್ರಸಾದ ಮಾತನಾಡಿ, ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಕೊಡುವ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ತಳಿ ಆಯ್ಕೆ ಮಾಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಬೀಜ ಬಳಕೆಯಿಂದ ಉತ್ಪಾದನೆ ಹೆಚ್ಚಿಸುವ ಜತೆಗೆ ಕೃಷಿ ವೆಚ್ಚ ನಿಯಂತ್ರಿಸಬಹುದಾಗಿದೆ. ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದೆ ಹೆಚ್ಚು ಸಾವಯವ ಪದ್ಧತಿ ಅನುಸರಿಸಬೇಕು. ಮಣ್ಣಿನ ಪರೀಕ್ಷಾ ವರದಿ ಆಧರಿಸಿ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ರೈತರು ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಕಾರ್ಯ ನಡೆಸಬೇಕು ಎಂದರು.


ಕಾರ್ಯಾಗಾರದಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಬೆಳೆಗಳ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿ ತಜ್ಞರು ಹಂಚಿಕೊಂಡರು.

ಈ ಸಂದರ್ಭ ತಾಂತ್ರಿಕ ಕೃಷಿ ಅಧಿಕಾರಿ ಮಾರುತಿ, ಕೃಷಿ ಅಧಿಕಾರಿ ಶಿವಪ್ಪ ಕೊಂಡಗುರಿ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಜ್ಯೋತಿ ಕೊಪ್ಪದ, ಸಿಬ್ಬಂದಿ ಅರ್ಪಿತಾ ಮತ್ತು ರೈತರು ಭಾಗವಹಿಸಿದ್ದರು.