ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ 12ನೇ ಶತಮಾನದ ಶಿವ ಶರಣರು ಹೇಳಿ ಕೊಟ್ಟ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕಪಡಿಸಿಕೊಳ್ಳಬೇಕು ಎಂದು ಮಹಾಲಿಂಗಪೂರದ ಮಹಾಲಿಂಗೇಶ್ವರ ಮಠದ ಚನ್ನವೀರ ಸ್ವಾಮಿಗಳು ಹೇಳಿದರು.ತಾಲೂಕಿನ ಹರ್ಲಾಪೂರದ ಕೊಟ್ಟೂರೇಶ್ವರ ಮಠದ ಜಾತ್ರಾಮಹೋತ್ಸವ ಹಾಗೂ ಹಠಯೋಗಿ ಕೊಟ್ಟೂರೇಶ್ವರ ಪುರಾಣ ಪ್ರಾರಂಭೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.ಇಂದಿನ ಒತ್ತಡಯುಕ್ತ ಬದುಕಿಗೆ ಶರಣರ ತತ್ವಗಳು ಪೂರಕವಾಗಿದ್ದು, ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಅವುಗಳನ್ನು ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಡಾ. ಕೊಟ್ಟೂರೇಶ್ವರ ಸ್ವಾಮಿಗಳು ಮಾತನಾಡಿ, ಶ್ರೀಮಠದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿಗೆ ಗುರು ಶಿಷ್ಯರ ಸಂಬಂಧಗಳು ಅನೋನ್ಯವಾಗಿರಬೇಕು. ಇಂತಹ ಕಾರ್ಯಕ್ರಮಗಳಿಂದಲೇ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಪರಸ್ಪರ ಸಹಾಯ, ಸಹಕಾರ ಪ್ರಮುಖ ಸ್ಥಾನ ವಹಿಸುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯ ಒಬಿಸಿ ಘಟಕದ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಈ ಭಾಗದಲ್ಲಿ ಡಾ. ಕೊಟ್ಟೂರೇಶ್ವರ ಶ್ರೀಗಳು ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸುವದರೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮಸ್ಥರು ತಮಲ್ಲಿಯ ತಮೋ ಗುಣಗಳನ್ನು ತ್ಯಜಿಸಿ ಶ್ರೀಮಠದಲ್ಲಿ ನಡೆಯುವ ಪ್ರತಿಯೊಂದು ಕಾರ್ಯದಲ್ಲಿ ಪಾಲ್ಗೊಂಡು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಆನಂತರ ಖೇಳಗಿಮಠದ ಮಲ್ಲಿಕಾರ್ಜುನ ಶಾಸ್ತ್ರಿಗಳು ಹಿರೇಮಠ ಅವರು ಪುರಾಣ ಆರಂಭಿಸಿದರು. ಕೆ.ಬಿ. ವೀರಾಪೂರ, ಮಂಜುನಾಥ ಅರ್ಕಸಾಲಿ ಅವರು ಸಂಗೀತ ಸೇವೆ ನೀಡಿದರು.ಈ ವೇಳೆ ಗುರುಸಿದ್ಧ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮೀಜಿಗಳು, ಒಪ್ಪತ್ತೇಶ್ವರ ಶ್ರೀಗಳು, ಕೈಲಾಸಲಿಂಗ ಶಿವಾಚಾರ್ಯರು, ಗ್ರಾಪಂ ಸದಸ್ಯರಾದ ಸಿದ್ಧಲಿಂಗೇಶ ಯಾಳವಾಡ, ಶಿವಾನಂದ ಪಟ್ಟೇದ, ಸೋಮನಗೌಡ ಕೆಂಚನಗೌಡ, ಅಕ್ಕಮ್ಮ ಕೋಗಿಲೆ, ಫಕ್ಕೀರಪ್ಪ ಹುಯಿಲಗೋಳ, ಶರಣಪ್ಪಗೌಡ ಪಾಟೀಲ, ಮಲ್ಲಪ್ಪ ಕೀಂದ್ರಿ, ರಾಮಣ್ಣ ಬೆಳಧಡಿ, ಡಾ. ಎಸ್.ಸಿ. ಸರ್ವಿ, ವೀರಯ್ಯ ಕವಲೂರು, ಸಿದ್ದಪ್ಪ ಮಂಗಳೂರು ಉಪಸ್ಥಿತರಿದ್ದರು. ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವೆಂಕಟೇಶ ಜುಂಜಣ್ಣಿ ನಿರೂಪಿಸಿದರು. ಕೆ.ಆರ್. ಕೋರಿ ವಂದಿಸಿದರು.