ಶಿವಕುಮಾರ ಶ್ರೀಗಳ ಆದರ್ಶ ಅಳವಡಿಸಿಕೊಳ್ಳಿ: ವೀರಶೈವ ಮಹಾಸಭಾದ ನಿಂಗರಾಜ್

| Published : Apr 02 2024, 01:10 AM IST / Updated: Apr 02 2024, 08:01 AM IST

ಶಿವಕುಮಾರ ಶ್ರೀಗಳ ಆದರ್ಶ ಅಳವಡಿಸಿಕೊಳ್ಳಿ: ವೀರಶೈವ ಮಹಾಸಭಾದ ನಿಂಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗಳ ಅದರ್ಶ ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಟ್ಟಣದ ಯಾವುದಾದರೂ ವೃತ್ತ ಅಥವಾ ರಸ್ತೆಗೆ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು.

  ಬೇಲೂರು :  ತಾಲೂಕು ಶ್ರೀ ಶಿವಕುಮಾರ ಸ್ವಾಮೀಜಿ ಟ್ರಸ್ಟ್ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಜಿಯವರ 117  ನೇ ಜಯಂತಿಯನ್ನು ಆಚರಿಸಲಾಯಿತು.

ವೀರಶೈವ ಸಂಘದ ಮಹಾಸಭಾ ಮಾಜಿ ಅಧ್ಯಕ್ಷ ಸಿ.ಎಂ.ನಿಂಗರಾಜ್ ಮಾತನಾಡಿ, ಸಿದ್ದಗಂಗಾ ಶಿವಕುಮಾರ ಶ್ರೀಗಳು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಾಮಾನ್ಯ ಸಾಧನೆಗೈದ ಮಹಾನುಭಾವರು.ಇಂತಹ ಶ್ರೀಗಳ‌ ಆದರ್ಶ ಮತ್ತು ಬದುಕು - ಬರಹಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, 111  ವರ್ಷ ಬಾಳಿದ ಶ್ರೀಗಳು ತಮ್ಮ ಜೀವಾವಧಿತನಕ ಕಾಯಕದ ಮಹತ್ವದ ಕುರಿತು ನಾಡಿಗೆ ತಮ್ಮ ಸಂದೇಶವನ್ನು ನೀಡಿದ್ದಾರೆ. ಇಂತಹ ಪೂಜ್ಯರು ಯಾವುದೇ ಜಾತಿ,ಧರ್ಮ, ಭೇದವಿಲ್ಲದೆ ಶಿಕ್ಷಣ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ , ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ, ಶಿಕ್ಷಣ ನೀಡುವ ಮೂಲಕ ಸರ್ಕಾರ ನಡೆಸುವ ಕಾರ್ಯವನ್ನು ಮಾಡಿದ್ದಾರೆ. ಇವರ ಹಾದಿಯಲ್ಲಿ ನಾಡಿನ ನೂರಾರು ಮಠ, ಮಾನ್ಯಗಳು ಇಂದಿಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿವೆ. ಸಿದ್ದಗಂಗಾ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದ ಅವರು, ಬೇಲೂರು ಪಟ್ಟಣದ ವೃತ್ತ ಅಥವಾ ರಸ್ತೆಗೆ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು ಮತ್ತು ಅವರ ಹೆಸರಿನಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಬೇಕೆಂದು ಮನವಿ ಮಾಡಿದರು.

ಹಾಸನ ಜಿಲ್ಲಾ ಕದಳಿ‌ ಮಹಿಳಾ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಶ್ರೀಗಳ ಅದರ್ಶ ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಟ್ಟಣದ ಯಾವುದಾದರೂ ವೃತ್ತ ಅಥವಾ ರಸ್ತೆಗೆ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು, ಚುನಾವಣೆ ನೀತಿ ಸಂಹಿತೆ ‌ಮುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ತೊ.ಚ.ಅನಂತ ಸುಬ್ಬರಾಯ, ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಹೇಮಾ ವಿರೂಪಾಕ್ಷ, ಖಜಾಂಚಿ ಉಮೇಶ್, ನಿವೃತ್ತ ಶಿಕ್ಷಕ ಧನಂಜಯ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತ ಧನಂಜಯ, ವಿಜಯಲಕ್ಷ್ಮೀ, ವಿರೂಪಾಕ್ಷ, ಉಪನ್ಯಾಸಕ ಧನಂಜಯ, ಲಯನ್ಸ್ ಸಂಸ್ಥೆ ಅಧ್ಯಕ್ಷ ವೈ.ಬಿ.ಸುರೇಶ್, ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಚಂದ್ರಮೌಳಿ, ತಾಲೂಕು ವೀರಶೈವ ಸಂಘದ ಅಧ್ಯಕ್ಷ ರವಿಕುಮಾರ್, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಚಂದ್ರಣ್ಣ, ಶೇಖರಣ್ಣ, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಇತರರು ಇದ್ದರು.