12ನೇ ಶತಮಾನದ ಶರಣರ ತತ್ವಾದರ್ಶಗಳನ್ನು ನೂತನ ದಂಪತಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರ, ಪ್ರೀತಿ ವಿಶ್ವಾಸದೊಂದಿಗೆ ಜೀವನ ಸಾಗಿಸಬೇಕು.

ಕನ್ನಡಪ್ರಭ ವಾರ್ತೆ ಗದಗ

12ನೇ ಶತಮಾನದ ಶರಣರ ತತ್ವಾದರ್ಶಗಳನ್ನು ನೂತನ ದಂಪತಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರ, ಪ್ರೀತಿ ವಿಶ್ವಾಸದೊಂದಿಗೆ ಜೀವನ ಸಾಗಿಸಬೇಕು ಎಂದು ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿದ್ದ ಶರಣರ ತತ್ವ ಚಿಂತನೆ ಪ್ರವಚನ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀಮಠ ನಿರ್ಮಾಣ ಮಾಡುವಾಗ ಈ ಸ್ಥಳದಲ್ಲಿ ಮೂವರು ಶರಣರ ಅಸ್ತಿ ಪಂಜರು ಪತ್ತೆಯಾದವು. ಸಂಶೋಧನೆ ಮಾಡಲಾಗಿ ಆ ಅಸ್ಥಿಗಳು ಸುಮಾರು 400 ವರ್ಷಗಳ ಹಳೆಯದು ಎಂದು ಗೊತ್ತಾಯಿತು. ಹೀಗಾಗಿ ಈ ಶಾಖಾ ಮಠದ ಗದ್ದುಗೆಯು ಶಕ್ತಿಯುತವಾಗಿದೆ. ಇನ್ನೂ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠವು ತ್ರಿವಿಧ ದಾಸೋಹ ಪರಂಪರೆಯುಳ್ಳದಾಗಿದೆ. ನಾಡಿನಲ್ಲಿ ಅಧಿಕವಾಗಿ ಶಿಕ್ಷಣದ ಅಭಿವೃದ್ಧಿಗಾಗಿ ಭೂ ದಾನ, ಧನ ಸಹಾಯ ಮಾಡಿದೆ. ಆದ್ದರಿಂದ ಜನಪ್ರತಿನಿಧಿಗಳು ಲಕ್ಕುಂಡಿ ಶಾಖಾ ಮಠದ ಅಭಿವೃದ್ಧಿಗಾಗಿ ಅನುದಾನ ಒದಗಿಸಬೇಕು ಎಂದರು.

ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ಶರಣ ತತ್ವ, ಬೋಧನೆಗಳ ಪುರಾಣ, ಪ್ರವಚನಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ಉತ್ತಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ಶ್ರೀಮಂತಿಕೆಯನ್ನು ಹೊಂದಿರುವ ದೇಶ ಭಾರತವಾಗಿದೆ. ಇಲ್ಲಿಯ ಹಲವಾರು ಶರಣರು ತಾವು ನುಡಿದಂತೆ ನಡೆದು ನಮಗೆಲ್ಲಾ ಮಾರ್ಗದರ್ಶಕರಾಗಿದ್ದಾರೆ. ಅವರ ತತ್ವಾದರ್ಶಗಳ ಪ್ರವಚನ, ಪುರಾಣಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ನಮ್ಮಲ್ಲಿಯ ಸ್ವಾರ್ಥ, ಅಹಂಕಾರಗಳು ಕ್ಷೀಣಿಸುತ್ತವೆ ಎಂದು ತಿಳಿಸಿದರು.

ಹರ್ಲಾಪೂರದ ಡಾ. ಕೊಟ್ಟೂರೇಶ್ವರ ಸ್ವಾಮೀಜಿ, ಕುಕನೂರಿನ ಡಾ. ಮಹಾದೇವ ಸ್ವಾಮೀಜಿ ಮಾತನಾಡಿದರು. ಡಾ. ಗಿರಿಜಾ ಹಸಬಿ, ಷಡಕ್ಷರಯ್ಯ ಬದ್ನಿಮಠ, ವೀರಣ್ಣ ಕರಿಯಲ್ಲಪ್ಪನವರ ಸಂಗೀತ ಸೇವೆ ನೀಡಿದರು. ಪ್ರವಚನ ಕಾರ್ಯದಲ್ಲಿ ಸೇವೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು.

ಶಂಕ್ರಯ್ಯ ಹಿರೇಮಠ, ಯುವ ಧುರೀಣ ವೀರಯ್ಯ ಗಂಧದ, ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಪೂಜಾರ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಪ್ರಕಾಶ ಅರಹುಣಶಿ, ನಿಂಗಪ್ಪ ಗುಂಜಳ, ಚನ್ನಪ್ಪ ಹೂಗಾರ ಇದ್ದರು. ಮುತ್ತಪ್ಪ ನೋಟಗಾರ ಸ್ವಾಗತಿಸಿದರು. ಅಂಬರೀಶ ಕರೆಕಲ್ಲ ನಿರೂಪಿಸಿದರು. ಶಿಕ್ಷಕ ಬಸವರಾಜ ಕಣವಿ ವಂದಿಸಿದರು.