ಸರಳ ಜೀವನ, ಅಹಿಂಸೆ ತತ್ವವನ್ನು ಅಳವಡಿಸಿಕೊಳ್ಳಿ

| Published : May 22 2025, 12:51 AM IST

ಸಾರಾಂಶ

ಶಿವಮೊಗ್ಗ: ಪರಿಸರದ ಮೇಲಾಗುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಜ್ಞಾನಿಕ ಕ್ರಿಯಾ ಯೋಜನೆಗಳು ಹಾಗೂ ಸರಳ ಜೀವನ ನಮ್ಮದಾಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ ಹೇಳಿದರು.

ಶಿವಮೊಗ್ಗ: ಪರಿಸರದ ಮೇಲಾಗುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಜ್ಞಾನಿಕ ಕ್ರಿಯಾ ಯೋಜನೆಗಳು ಹಾಗೂ ಸರಳ ಜೀವನ ನಮ್ಮದಾಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ ಹೇಳಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಇವರ ಸಹಯೋಗದಲ್ಲಿ ಬುಧವಾರ ಎಂಎಡಿಬಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ರಾಜ್ಯ ಕ್ರಿಯಾ ಯೋಜನೆ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಪರಿಸರದ ಮೇಲಾಗುತ್ತಿರುವ ನಿರಂತರ ಒತ್ತಡ ಹಾಗೂ ಪರಿಸರ ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು, ಇದರಿಂದ ಮಾನವನ ಜೀವನದ ಮೇಲೆ ಅನೇಕ ದುಷ್ಟರಿಣಾಮಗಳೂ ಆಗುತ್ತಿದೆ. ಇದಕ್ಕೆಲ್ಲ ಕಾರಣ ನಾವೇ ಆಗಿದ್ದು, ಕೈಗಾರಿಕೆಗಳು ಸೇರಿದಂತೆ ಮನುಷ್ಯ ಕೈಗೊಳ್ಳುವ ಅನೇಕ ಪ್ರಕ್ರಿಯೆಗಳಿಂದ ಪರಿಸರ ಮಾಲಿನ್ಯ, ಅಸಮತೋಲನ ಉಂಟಾಗುತ್ತಾ ಬಂದಿದೆ. ಆದ್ದರಿಂದ ನಾವೆಲ್ಲ ಸರಳ ಜೀವನ, ಅಹಿಂಸೆ ತತ್ವವನ್ನು ಅಳವಡಿಸಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾವು ಇಂದು ಪ್ರಕೃತಿಯ ವಿರುದ್ಧ ಹೋಗುತ್ತಿದ್ದೇವೆ. ಅತಿಯಾದ ಕೈಗಾರಿಕೋದ್ಯಮ, ರಾಸಾಯನಿಕಗಳ ಬಳಕೆಯಿಂದ ಗ್ಲೋಬಲ್ ವಾರ್ಮಿಂಗ್ ಆಗುತ್ತಿದೆ. ದೇಶಗಳ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಇಡೀ ಭೂಮಿ ಸುಡುವಷ್ಟು ಸ್ಫೋಟಕ ನಮ್ಮಲ್ಲಿದೆ. ಅಸಂಬದ್ದವಾದ ಬದುಕನ್ನು ಬದುಕುತ್ತಿದ್ದೇವೆ. ಹಳ್ಳಿಗಳಲ್ಲೂ ಸಾಕಷ್ಟು ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರಕವಾಗಲಿದೆ. ವಿಶ್ವಾದ್ಯಂತ ಪರಿಸರ ಸಂರಕ್ಷಿಸುವ ಕುರಿತು ಜಾಗೃತಿ ಮೂಡಬೇಕಿದ್ದು ಒತ್ತಡ ರಹಿತ ಬದುಕು ನಮ್ಮದಾಗಿಸಿಕೊಳ್ಳಲು ಸರಳತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.

ಜಿ.ಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಜಿಲ್ಲಾ ಅಧಿಕಾರಿಗಳನ್ನು ಈ ಕ್ರಿಯಾ ಯೋಜನೆಯ ಪ್ರಮುಖ ಅಂಶಗಳಿಗೆ ಪರಿಚಯಿಸಲು, ಇಲಾಖಾ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಲು ಮತ್ತು ಜಿಲ್ಲಾಮಟ್ಟದಲ್ಲಿ ಹವಾಮಾನ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಾಗುವುದು ಎಂದು ತಿಳಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಬೆಂಗಳೂರಿನ ತರಬೇತಿ ಅಸೋಸಿಯೇಟ್ ರುಚಿತಾಶ್ರೀ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ಸರ್ಕಾರವು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಅನ್ವಯಿಕ ಮತ್ತು ನೀತಿ ಸಂಶೋಧನೆ ನಡೆಸುತ್ತದೆ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ-ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದ ಅವರು, ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆ ಕಾರಣಗಳು, ಜಾಗತಿಕ ಮತ್ತು ಭಾರತೀಯ ಉಪ ಕ್ರಮಗಳು ಸೇರಿದಂತೆ ರಾಜ್ಯ ಕ್ರಿಯಾ ಯೋಜನೆಯ ಮುಖ್ಯಾಂಶಗಳನ್ನು ವಿವರಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ.ಶೃತಿ ಮಾತನಾಡಿದರು.

ಜಿ.ಪಂ. ಎನ್‌ಆರ್‌ಡಿಎಂಸ್ ಅಧಿಕಾರಿ ಶಂಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.