ಕುಕನೂರು: ತಾಲೂಕಿನ ಕಕ್ಕಿಹಳ್ಳಿ ತಾಂಡಾದಲ್ಲಿ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಾಲಾಲ್ ಭಾವಚಿತ್ರ ಅಲಂಕರಿಸಿ ಭವ್ಯ ಮೆರವಣಿಗೆ ಜರುಗಿತು. ಗುದ್ನೇಪ್ಪಮಠದ ಸಮೀಪದ ಸೇವಾಲಾಲ್ ವೃತ್ತದಿಂದ ಕಕ್ಕಿಹಳ್ಳಿ ತಾಂಡಾದ ಸೇವಾಲಾಲ್ ದೇವಸ್ಥಾನದವರೆಗೆ ಸಾಂಪ್ರದಾಯಿಕ ತೀಜ್ ನೃತ್ಯದ ಮಧ್ಯೆ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರು ಮತ್ತು ಮಕ್ಕಳು ಸಾಂಪ್ರದಾಯಿಕ ವಸ್ತ್ರಧಾರಣೆಯಲ್ಲಿ ಪಾಲ್ಗೊಂಡು ನೃತ್ಯ ಮಾಡಿ ಸಂಭ್ರಮಿಸಿದರು. ಮಹಿಳೆಯರು ಹೊತ್ತು ಸಾಗಿದ ತೀಜ್ ಮೇರವಣಿಗೆ ವಿಶೇಷ ಮೆರಗು ನೀಡಿತು.

ಸಮಾಜದ ಮುಖಂಡ ಮೇಘರಾಜ ಬಳಗೇರಿ ಮಾತನಾಡಿ, ವೈವಿಧ್ಯದಲ್ಲಿ ಏಕತೆ ಸಾರಿದ ಮಹನೀಯರಲ್ಲಿ ಸಂತ ಸೇವಾಲಾಲ್ ಪ್ರಮುಖರು. ಬಂಜಾರ ಸಮುದಾಯದಲ್ಲಿ ಹುಟ್ಟಿ ಸಂತರಾಗಿ ತಮ್ಮ ಸಮುದಾಯದ ಪ್ರಗತಿಗೆ ಶ್ರಮಿಸಿದ ಅವರು ದುಡಿಮೆ, ಜ್ಞಾನಾರ್ಜನೆ,ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ಹಾದಿ ತೋರಿದವರು ಎಂದರು.

ಗ್ರಾಪಂ ಮಾಜಿ ಸದಸ್ಯ ಯಮನೂರಪ್ಪ ಕಟ್ಟಿಮನಿ, ವಿರೂಪಾಕ್ಷಯ್ಯ ಕುರ್ತಕೋಟಿ, ಬಸವಂತಪ್ಪ ನಾಯಕ, ಹಂಪಣ್ಣ ಕಟ್ಟಿಮನಿ, ಯಲ್ಲಪ್ಪ ಕಾರಭಾರಿ, ಕುಮಾರ್ ಬಳಗೇರಿ, ಯಮನೂರಪ್ಪ ಭಾನಾಪುರ, ಶರಣಪ್ಪ ಚಿಕೇನಕೊಪ್ಪ, ಕಿರಣ ರಾಠೋಡ್, ತಿರುಪತಿ ತಲ್ಲೂರು, ಶಶಿಕುಮಾರ, ತಿಪ್ಪಮ್ಮ ನಾಯಕ, ಹೊನ್ನಮ್ಮ ಇಟಗಿ, ಧಾನವ್ವ ಹೊನ್ನಂಚಿ ಹಾಗೂ ಗ್ರಾಮಸ್ಥರಿದ್ದರು.