ಸಾರಾಂಶ
ನವೀಕರಿಸಬಹುದಾದ ಇಂಧನ ನಿಗಮದಿಂದ ಅಧ್ಯಯನ ಪ್ರವಾಸ । ಆಸ್ಟ್ರೇಲಿಯ ಕಂಪನಿಯೊಂದಿಗೆ ಒಪ್ಪಂದ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲು ಆಸ್ಟ್ರೇಲಿಯಾದ ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಜತೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕ್ರೆಡಲ್) ಒಪ್ಪಂದ ಮಾಡಿಕೊಂಡಿದೆ ಎಂದು ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಾರ ಕ್ರೆಡಲ್ ಅಧ್ಯಕ್ಷನಾದ ನಾನು, ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಗೌರವ್ ಗುಪ್ತ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಗೂ ವಿಶೇಷ ಅಧಿಕಾರಿ ಸೇರಿ 4 ಜನರ ತಂಡ ಆಸ್ಟ್ರೇಲಿಯಾದ ಸಿಡ್ನಿ ಮತ್ತು ಮೇಲ್ಬರ್ನ್ ಗೆ ಪ್ರವಾಸದ ಸಂದರ್ಭದಲ್ಲಿ ಇಂಧನದ ಉತ್ಪಾದನೆ, ಅದರ ಶೇಖರಣೆ, ಆರ್ಥಿಕ ಮಿತವ್ಯಯದಿಂದ ಇಂಧನದ ಅಭಿವೃದ್ಧಿ, ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು.
ಯುನಿರ್ವಸಿಟಿ ಆಫ್ ಸೌತ್ ವೆಲ್ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಹೊಸ ಇಂಧನ ಅಭಿವೃದ್ಧಿ ತಂತ್ರಜ್ಞಾನ, ಅವಿಷ್ಕಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸ್ಮಾರ್ಟ್ ಕೌನ್ಸಿಲ್ ಜತೆ ಒಪ್ಪಂದ ಮಾಡಿಕೊಳ್ಳಲಾಯಿತು. ಶುದ್ಧ ಇಂಧನ, ಗ್ರೀನ್ ಹೈಡ್ರೋಜನ್, ಬ್ಯಾಟರಿ ಪವರ್ ಸ್ಟೋರೇಜ್ ಸಂಬಂಧಿತ ವಲಯಗಳಲ್ಲಿ ಪರಸ್ಪರ ಸಹಕಾರ ಬಲಪಡಿಸಲು ಒಪ್ಪಂದ ಸಹಕಾರಿಯಾಗಲಿದೆ ಎಂದರು. ಸಿಡ್ನಿಯಲ್ಲಿ ಆಯೋಜಿಸಿದ್ದ ನ್ಯೂ ಆಸ್ಟ್ರೇಲಿಯಾ ಬ್ಯುಸಿನೆಸ್ ಕಾರ್ಯಾಗಾರದಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಯುನಿರ್ವಸಿಟಿ ಆಫ್ ನ್ಯೂ ಕ್ಯಾಸಲ್ ಗೆ ಭೇಟಿ ನೀಡಿ ಬ್ಯಾಟರಿ ಸ್ಟೋರೇಜ್, ಹೊಸ ತಂತ್ರಜ್ಞಾನ ಅಳವಡಿಸಿ ಇಂಧನ ಉತ್ಪಾದನೆ ಮತ್ತು ಸ್ಟೋರೇಜ್ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು ಎಂದು ವಿವರಿಸಿದರು. ಮೇಲ್ಬರ್ನ್ ನಲ್ಲಿ ಇರುವ ಜಗತ್ತಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾದ ಸಿಎಸ್ ಐಆರ್ ಓ ಸಂಸ್ಥೆಗೆ ಭೇಟಿ ನೀಡಿ, ಗ್ರೀನ್ ಹೈಡ್ರೋಜನ್, ಬ್ಯಾಟರಿ ಸ್ಟೋರೇಜ್, ಎಲೆಕ್ಟ್ರೀಕ್ ಸಿಟಿ ವೈಕಲ್ ಸಂಶೋಧನೆ ಮಾಡುತ್ತಿರುವುದನ್ನು ವೀಕ್ಷಿಸಲಾಯಿತು. ಇಲ್ಲಿ ಭಾರತದ ಸಾವಿರಾರ ಯುವಕ, ಯುವತಿಯರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಯುನಿರ್ವಸಿಟಿ ಆಫ್ ಸೌತ್ ವೆಲ್ ನೊಂದಿಗಿನ ಒಡಂಬಡಿಕೆಯಿಂದ ಇನ್ ಕ್ಯೂಬೀಟರ್ ಅಳವಡಿಸುವುದರಿಂದ ಇಂಧನದ ಉತ್ಪಾದನೆ ಮತ್ತು ಬೇಡಿಕೆ ಇದ್ದಾಗ ಇಂಧನ ಸಂಗ್ರಹಕ್ಕೆ ಸಹಕಾರಿಯಾಗಲಿದೆ ಎಂದರು. ಹೊಸ ಸಮೀಕ್ಷೆ ಪ್ರಕಾರ ರಾಜ್ಯಕ್ಕೆ ಪ್ರತಿನಿತ್ಯ 46 ಗಿಗಾ ವ್ಯಾಟ್, ದೇಶಕ್ಕೆ500 ಗಿಗಾ ವ್ಯಾಟ್ ವಿದ್ಯುತ್ ನ ಅವಶ್ಯಕತೆಯಿದೆ. ಅವಶ್ಯಕತೆಗೆ ತಕ್ಕಂತೆ ಇಂಧನ ಉತ್ಪಾದನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ. ಪವನ ಶಕ್ತಿ ಮತ್ತು ಸೌರಶಕ್ತಿ ಹೆಚ್ಚು ಉತ್ಪಾದಿಸಿ ಅದನ್ನು ಸಂಗ್ರಹಿಸಿಡಲು ಇಂಧನ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವುದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದ್ದು ಇದರಿಂದ ವರ್ಷ 365 ದಿನ, 24 ಗಂಟೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ರಾಜ್ಯದಲ್ಲಿ ವಿದ್ಯುತ್ ಮಾರ್ಗ ನವೀಕರಣ ಮಾಡಲು ಇಂಧನ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.ಟೆಂಡರ್ ಆಗಿದೆ: ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ನಿಂತ ಕೂಡಲೇ ರಸ್ತೆ ದುರಸ್ತಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುವುದು. ಕ್ಷೇತ್ರವನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕೆಪಿಸಿಸಿ ಸದಸ್ಯ ಪಿ.ಆರ್. ಸದಾಶಿವ,ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.