ಹಾಸನ: ಜಿಲ್ಲೆಯ ದುದ್ದ ಹೋಬಳಿಯ ಹಾರನಹಳ್ಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಬಿ.ಎಸ್‌.ಸಿ. ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅಣಬೆ ಬೆಳೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಗುರುಮೂರ್ತಿ ಎಚ್. (ಸಹ ಪ್ರಾಧ್ಯಾಪಕರು, ಕೃಷಿ ಸೂಕ್ಷ್ಮಜೀವಶಾಸ್ತ್ರ ವಿಭಾಗ) ಭಾಗವಹಿಸಿ, ಅಣಬೆ ಬೆಳೆ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಅವರು ಅಣಬೆ ಬೆಳೆಗಳಲ್ಲಿ ಬಳಸುವ ವಿವಿಧ ತಳಿಗಳು, ಪೌಷ್ಟಿಕ ಹಾಗೂ ಔಷಧೀಯ ಮಹತ್ವ, ಬೆಳೆ ಬೆಳೆಸುವ ವೈಜ್ಞಾನಿಕ ತಂತ್ರಜ್ಞಾನ, ಬೀಜ ತಯಾರಿ, ತೇವಾಂಶ ಮತ್ತು ತಾಪಮಾನ ನಿರ್ವಹಣೆ, ಸೋಂಕು ನಿಯಂತ್ರಣ ವಿಧಾನಗಳು ಕುರಿತು ರೈತರಿಗೆ ಪ್ರಾಯೋಗಿಕ ಅರಿವು ನೀಡಿದರು.

ಅಲ್ಲದೆ, ಅಣಬೆ ಬೆಳೆ ಒಂದು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನೀಡುವ, ಶೀಘ್ರಾವಧಿಯ ಕೃಷಿ ಹಾಗೂ ಗ್ರಾಮೀಣ ಉದ್ಯಮಾಭಿವೃದ್ಧಿಗೆ ಉತ್ತಮ ಆಯ್ಕೆ ಎಂಬುದನ್ನು ಅವರು ಒತ್ತಿ ಹೇಳಿದರು. ಗ್ರಾಮೀಣ ಯುವಕರು ಮತ್ತು ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಹಾಗೂ ಉದ್ಯಮಶೀಲತೆಯತ್ತ ಮುಖಮಾಡಲು ಅಣಬೆ ಬೆಳೆ ಒಂದು ಭರವಸೆಯ ಮಾರ್ಗವಾಗಬಹುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರು ಅಣಬೆ ಬೆಳೆ ಬಗ್ಗೆ ಆಸಕ್ತಿ ತೋರಿದರು ಮತ್ತು ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ಆರ್ಥಿಕ ಮಟ್ಟ ಸುಧಾರಿಸಲು ಇಚ್ಛಿಸಿದರು.

-------