ಸಾಣೆಹಳ್ಳಿಯ ತರಳಬಾಳು ಜಗದ್ಗುರು ಶಾಖಾಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಬುಧವಾರ ಸಂಜೆ ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಆಗಮಿಸಿದರು. ಕಳೆದ ನಾಲ್ಕು ವರ್ಷಗಳಿಂದ ಅವರು ಮಠಕ್ಕೆ ಆಗಮಿಸಿರಲಿಲ್ಲ. ಬುಧವಾರ ನಡೆದ ಅವರ ಭೇಟಿ ಹಲವರಲ್ಲಿ ಕುತೂಹಲವನ್ನು ಉಂಟು ಮಾಡಿತು.

ಸಿರಿಗೆರೆ: ಸಾಣೆಹಳ್ಳಿಯ ತರಳಬಾಳು ಜಗದ್ಗುರು ಶಾಖಾಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಬುಧವಾರ ಸಂಜೆ ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಆಗಮಿಸಿದರು. ಕಳೆದ ನಾಲ್ಕು ವರ್ಷಗಳಿಂದ ಅವರು ಮಠಕ್ಕೆ ಆಗಮಿಸಿರಲಿಲ್ಲ. ಬುಧವಾರ ನಡೆದ ಅವರ ಭೇಟಿ ಹಲವರಲ್ಲಿ ಕುತೂಹಲವನ್ನು ಉಂಟು ಮಾಡಿತು.ತಾಲೂಕಿನ ಹುಲ್ಲೇಹಾಳ್‌ ಗ್ರಾಮದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಅವರು ನೇರವಾಗಿ ಮಠಕ್ಕೆ ಆಗಮಿಸಿದರು. ಬೃಹನ್ಮಠದ ಆವರಣದಲ್ಲಿನ ಐಕ್ಯಂಟಪಕ್ಕೆ ತೆರಳಿ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿದರು.ಶ್ರೀಗಳು ಮಠಕ್ಕೆ ಆಗಮಿಸಿರುವ ವಿಷಯ ತಿಳಿದ ಸಿರಿಗೆರೆ ಮತ್ತು ಸುತ್ತಲಿನ ಹಲವು ಭಕ್ತರು ಅವರ ಬಿಡಾರದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.ಈ ವೇಳೆ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಸಾಣೆಹಳ್ಳಿಯಲ್ಲಿ ಎಂದಿನಂತೆ ಈ ಬಾರಿಯೂ ನವೆಂಬರ್‌ ತಿಂಗಳಿನಲ್ಲಿ ರಾಷ್ಟ್ರೀಯ ನಾಟಕೋತ್ಸವನ್ನು ಹಮ್ಮಿಕೊಳ್ಳಲಾಗಿದೆ. ಅದರ ಸಮಾರೋಪ ಮತ್ತು ಶಿವಕುಮಾರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಆಹ್ವಾನಿಸುವ ಉದ್ದೇಶದಿಂದ ನಾವು ಆಗಮಿಸಿದ್ದೇವೆ. ಕಾರ್ಯಗೌರವಗಳ ಹಿನ್ನೆಲೆಯಲ್ಲಿ ಶ್ರೀಗಳು ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿರುವ ವಿಷಯ ಇಲ್ಲಿಗೆ ಬಂದ ನಂತರ ತಿಳಿಯಿತು ಎಂದರು.

ಎರಡೂ ಮಠಗಳು ಮತ್ತು ಶ್ರೀಗಳ ಮಧ್ಯೆ ಭಿನ್ನಾಭಿಪ್ರಾಯಗಳು ಇಲ್ಲ. ಕೆಲವರು ಸಾಮಾಜಿಕ ಜಾಲತಾಣಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಮಠಗಳ ಭಕ್ತರು ಸ್ವಯಂ ಶಿಸ್ತುಗಾರರು ಮತ್ತು ಸಂಯಮಿಗಳು ಎಂದು ಶ್ರೀಗಳು ತಿಳಿಸಿದರು.