ಪಿಯು ಫಲಿತಾಂಶ ಪ್ರಕಟ । ಕಳೆದ ಬಾರಿಗಿಂತ 12 % ಕುಸಿತ ! ಮತ್ತೆ ಬಾಲಕಿಯರೇ ಟಾಪರ್ಸ್‌

| N/A | Published : Apr 09 2025, 12:33 AM IST / Updated: Apr 09 2025, 05:58 AM IST

ಪಿಯು ಫಲಿತಾಂಶ ಪ್ರಕಟ । ಕಳೆದ ಬಾರಿಗಿಂತ 12 % ಕುಸಿತ ! ಮತ್ತೆ ಬಾಲಕಿಯರೇ ಟಾಪರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

  2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ  ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 6,88,678 ವಿದ್ಯಾರ್ಥಿಗಳಲ್ಲಿ 4,76,256 ಮಂದಿ ಉತ್ತೀರ್ಣರಾಗಿದ್ದಾರೆ.   ಈ ಬಾರಿ ಶೇ.69.16 ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿಗಿಂತ (ಶೇ.81.15) ಶೇ.11.99 ರಷ್ಟು ಫಲಿತಾಂಶ ಕುಸಿದಿದೆ.

 ಬೆಂಗಳೂರು : ಇದೇ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್‌ ಕಣ್ಗಾವಲಲ್ಲಿ ನಡೆದಿದ್ದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 6,88,678 ವಿದ್ಯಾರ್ಥಿಗಳಲ್ಲಿ 4,76,256 ಮಂದಿ ಉತ್ತೀರ್ಣರಾಗಿದ್ದಾರೆ. ತನ್ಮೂಲಕ ಈ ಬಾರಿ ಶೇ.69.16 ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿಗಿಂತ (ಶೇ.81.15) ಶೇ.11.99 ರಷ್ಟು ಫಲಿತಾಂಶ ಕುಸಿದಿದೆ.

ಒಟ್ಟಾರೆ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುವ ಜೊತೆಗೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮೂರೂ ಭಾಗಗಳಲ್ಲೂ ಟಾಪರ್‌ಗಳಾಗಿದ್ದಾರೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಾರಿಗೊಳಿಸಿದ್ದ ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯನ್ನು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೂ ಅನುಷ್ಠಾನಗೊಳಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಮಾದರಿಯಲ್ಲೇ ಪಿಯು ಪರೀಕ್ಷೆಯಲ್ಲೂ ಅಕ್ರಮಗಳಿಗೆ ಕಡಿವಾಣ ಬಿದ್ದ ಪರಿಣಾಮ ಫಲಿತಾಂಶ ಕುಸಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕೂಡ ಶೇ.10ರಷ್ಟು ಕುಸಿತ್ತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದರು.

ಒಟ್ಟಾರೆ ಫಲಿತಾಂಶ ಶೇ.11.99 ರಷ್ಟು ಕುಸಿದಿರುವುದು ಒಂದೆಡೆಯಾದರೆ, ವಿದ್ಯಾರ್ಥಿವಾರು ಫಲಿತಾಂಶದಲ್ಲಿ ತರಗತಿ ವಿದ್ಯಾರ್ಥಿಗಳ (ಫ್ರೆಷರ್ಸ್‌) ಫಲಿತಾಂಶವೂ ಶೇ.11.14ರಷ್ಟು ಇಳಿಕೆಯಾಗಿದೆ. ಈ ಬಾರಿ ಪರೀಕ್ಷೆ ಬರೆದಿದ್ದ 6.37 ಲಕ್ಷ ತರಗತಿ ವಿದ್ಯಾರ್ಥಿಗಳಲ್ಲಿ 4.68 ಲಕ್ಷಕ್ಕೂ ಹೆಚ್ಚು ಮಂದಿ ಉತ್ತೀರ್ಣಗೊಂಡು ಶೇ.73.45 ಫಲಿತಾಂಶ ಬಂದಿದೆ. ಕಳೆದ ಬಾರಿ ಇದು ಶೇ.84.59ರಷ್ಟಿತ್ತು. ಅದೇ ರೀತಿ 33,576 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಕೇವಲ 2,987 ಮಂದಿ ಪಾಸಾಗಿದ್ದು, ಶೇ.8.90ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಬಾರಿ ಶೇ.41.98 ರಷ್ಟಿತ್ತು. ಅಂದರೆ ಐದು ಪಟ್ಟು ಫಲಿತಾಂಶ ಕುಸಿದಿದೆ. ಇನ್ನು, 17,297 ಖಾಸಗಿ ವಿದ್ಯಾರ್ಥಿಗಳ ಪೈಕಿ 4,830 ಮಂದಿ ಉತ್ತೀರ್ಣಗೊಂಡು ಫಲಿತಾಂಶ ಶೇ.27.92ರಷ್ಟಿದೆ. ಕಳೆದ ಬಾರಿ ಇದು ಶೇ.48.16 ರಷ್ಟಿತ್ತು.

ಈ ಮಧ್ಯೆ, ಗರಿಷ್ಠ ಎರಡು ವಿಷಯಗಳಲ್ಲಿ ಕೆಲವೇ ಅಂಕಗಳಿಂದ ಅನುತ್ತೀರ್ಣದ ಅಂಚಿನಲ್ಲಿದ್ದ 8,400 ವಿದ್ಯಾರ್ಥಿಗಳನ್ನು ಪ್ರತಿ ವಿಷಯದಲ್ಲಿ ಶೇ.5ರಷ್ಟು ಕೃಪಾಂಕ ನೀಡಿ ಪಾಸು ಮಾಡಲಾಗಿದೆ. 186 ಮಂದಿ ದೃಷ್ಟಿ ದೋಷದ ವಿದ್ಯಾರ್ಥಿಗಳು ಸೇರಿ 785 ಮಂದಿ ವಿವಿಧ ವಿಶೇಷ ಚೇತನ ಮಕ್ಕಳು ಉತ್ತೀರ್ಣರಾಗಿದ್ದಾರೆ.

ಸಂಯೋಜನೆವಾರು ಫಲಿತಾಂಶ:

ಈ ಬಾರಿ ಸಂಯೋಜನೆವಾರು, ಲಿಂಗವಾರು, ಕಾಲೇಜುವಾರು ಫಲಿತಾಂಶದಲ್ಲಿ ಮಂಡಳಿಯು ತರಗತಿ ವಿದ್ಯಾರ್ಥಿಗಳ ಲೆಕ್ಕವನ್ನು ಮಾತ್ರ ತೋರಿಸಿದೆ. ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳನ್ನು ಕೈಬಿಟ್ಟಿದೆ. ಅದರಂತೆ ಕಲಾ ವಿಭಾಗದಲ್ಲಿ ಶೇ.53.29, ವಾಣಿಜ್ಯ ವಿಭಾಗದಲ್ಲಿ ಶೇ.76.07 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.82.54ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 3.45 ಲಕ್ಷ ವಿದ್ಯಾರ್ಥಿನಿಯರಲ್ಲಿ 2.69 ಲಕ್ಷಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿ ಶೇ.77.88 ರಷ್ಟು ಫಲಿತಾಂಶ ಬಂದಿದೆ. 2.92 ಲಕ್ಷಕ್ಕೂ ಹೆಚ್ಚು ಬಾಲಕರು ಪರೀಕ್ಷೆ ಬರೆದಿದ್ದು, ಅದರಲ್ಲಿ 1.99 ಲಕ್ಷಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿ ಶೇ.68.20ರಷ್ಟು ಫಲಿತಾಂಶ ದಾಖಲಾಗಿದೆ. ಅದೇ ರೀತಿ ಗ್ರಾಮಾಂತರಕ್ಕಿಂತ ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶವೇ ಹೆಚ್ಚಿದೆ. ಶೇ.74.55ರಷ್ಟು ನಗರ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದ ಶೇ.69.33 ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದಾರೆ.

ಜಿಲ್ಲಾವಾರು ಉಡುಪಿ ಫಸ್ಟ್‌:

ಜಿಲ್ಲಾವಾರು ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಉಡುಪಿ ಈ ಬಾರಿ ಶೇ.93.90ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನಕ್ಕೆ ಜಿಗಿದಿದ್ದರೆ, ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಶೇ.93.57 ಫಲಿತಾಂಶದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಕೊನೆಯ ಸ್ಥಾನದಲ್ಲಿದ್ದ ಗದಗ ಈ ಬಾರಿ ಶೇ.66.64 ಫಲಿತಾಂಶದೊಂದಿಗೆ 25ನೇ ಸ್ಥಾನಕ್ಕೆ ಏರಿದ್ದು, ಯಾದಗಿರಿ ಶೇ.48.45 ಫಲಿತಾಂಶ ಪಡೆದು ಕೊನೆಯ ಸ್ಥಾನಕ್ಕೆ ಜಾರಿದೆ.

ಹೆಣ್ಣುಮಕ್ಕಳೇ ಟಾಪರ್ಸ್‌:

ಒಟ್ಟಾರೆ ಫಲಿತಾಂಶದಲ್ಲಿ ಮತ್ತೆ ಮೇಲುಗೈ ಸಾಧಿಸಿರುವ ಹೆಣ್ಣು ಮಕ್ಕಳೇ ಮೂರೂ ವಿಭಾಗಗಳಲ್ಲೂ ಟಾಪರ್‌ಗಳಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊಡಿಯಾಲ್‌ಬೈಲಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್‌, ಶಿವಮೊಗ್ಗ ಜಿಲ್ಲೆಯ ಮೇಲಿನಕುರುವಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಆರ್‌. ಮತ್ತು ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ದೀಪಾಶ್ರೀ ಎಸ್‌. ತಲಾ 600 ಅಂಕಗಳಿಗೆ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಹಾಗೂ ಆ ವಿಭಾಗಗಳಲ್ಲಿ ಟಾಪರ್‌ಗಳಾಗಿದ್ದಾರೆ. ಮೂಡಬಿದರೆಯ ಆಳ್ವಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಬಿಂದು ನಾವಲೆ, ರಾಜಾ ಯದುವಂಶಿ ಯಾದವ್‌ ಮತ್ತು ವಿಜೇತ್‌ ಜಿ.ಗೌಂಡ ವಿಜ್ಞಾನ ವಿಭಾಗದಲ್ಲಿ ತಲಾ 598 ಅಂಕಗಳನ್ನು ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ತಲಾ 597 ಅಂಕ ಪಡೆದು ಮೂರನೇ ಸ್ಥಾನವನ್ನು ಆರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್‌.ಆರ್‌.ಸಂಜನಾ ಬಾಯಿ 597 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಹೂವಿನಹಡಗಲಿ ತಾಲೂಕಿನ ಶ್ರೀ ಪಂಚಮಸಾಲಿ ಪಿಯು ಕಾಲೇಜಿನ ಕೆ.ನಿರ್ಮಲಾ 596 ಅಂಕ ಪಡೆದು ದ್ವಿತೀಯ ಸ್ಥಾನ, ಬೆಂಗಳೂರಿನ ಮಲ್ಲೇಶ್ವರಂನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಕೆ.ಆರ್‌.ಶ್ರೀ ಜೆಯ ದರ್ಶಿಣಿ 595 ಅಂಕ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಇನ್ನು, ವಾಣಿಜ್ಯ ವಿಭಾಗದಲ್ಲಿ ಮೈಸೂರು ಜಿಲ್ಲೆ ಕೊಪ್ಪದ ಭಾರತ ಮಾತಾ ಪಿಯು ಕಾಲೇಜಿನ ಎಂ.ಎ.ತೇಜಸ್ವಿನಿ 598 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ಐದು ವಿದ್ಯಾರ್ಥಿಗಳು 597 ಅಂಕ ಪಡೆದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

 ಉನ್ನತ ಶ್ರೇಣಿಯಲ್ಲಿ 1 ಲಕ್ಷ ಮಕ್ಕಳು ಪಾಸು

ಈ ಬಾರಿ 1,00,571 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 2.78 ಲಕ್ಷಕ್ಕೂ ಹೆಚ್ಚು ಮಕ್ಕಳು ಶೇ.60 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪ್ರಥಮ ದರ್ಜೆ, 70,969 ವಿದ್ಯಾರ್ಥಿಗಳು ಶೇ.50ಕ್ಕಿಂತ ಹೆಚ್ಚು ಅಂಕ ಪಡೆದು ದ್ವಿತೀಯ ದರ್ಜೆ ಮತ್ತು 18,845 ಮಂದಿ ಶೇ.35ಕ್ಕಿಂತ ಹೆಚ್ಚು ಅಂಕ ಪಡೆದು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು ಕನ್ನಡ ಭಾಷೆಯಲ್ಲಿ 5,424 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅದೇ ರೀತಿ ಗಣಿತದಲ್ಲಿ 4,038, ಜೀವಶಾಸ್ತ್ರದಲ್ಲಿ 2,346, ಸಂಸ್ಕೃತದಲ್ಲಿ 2,536, ಸಂಖ್ಯಾಶಾಸ್ತ್ರದಲ್ಲಿ 2,013, ಗಣಕ ವಿಜ್ಞಾನದಲ್ಲಿ 1,137 ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದಾರೆ. ಅತಿ ಕಡಿಮೆ ಮಲಯಾಳಂ ಭಾಷಾ ವಿಷಯದಲ್ಲಿ ಒಬ್ಬ, ಇಂಗ್ಲೀಷ್‌ ಭಾಷೆಯಲ್ಲಿ 11 ಮಂದಿ ಮಾತ್ರ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.8400 ಮಂದಿ ಕೃಪಾಂಕದಿಂದ ಉತ್ತೀರ್ಣ

ಈ ಬಾರಿಯೂ ಗರಿಷ್ಠ ಎರಡು ವಿಷಯಗಳಲ್ಲಿ ಬೆರಳೆಣಿಕೆಯಷ್ಟು ಅಂಕಗಳಿಂದ ಅನುತ್ತೀರ್ಣ ಹಂತದಲ್ಲಿದ್ದ 8,400 ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಶೇ.5ರಷ್ಟು ಕೃಪಾಂಕ ನೀಡಿ ಪಾಸುಮಾಡಲಾಗಿದೆ. ಫಲಿತಾಂಶ ಹೆಚ್ಚಿಸಲು ಸರ್ಕಾರ 2014ರಿಂದ ಒಂದು ವಿಷಯದಲ್ಲಿ ಕೃಪಾಂಕ ನೀಡುವ ಪದ್ಧತಿ ಜಾರಿಗೊಳಿಸಿತ್ತು. ನಂತರ ಕೋವಿಡ್ ವರ್ಷದಿಂದ ಇದನ್ನು ಎರಡು ವಿಷಯಗಳಿಗೆ ಹೆಚ್ಚಿಸಿ ಮುಂದುವರೆಸಿದೆ. 2024ರಲ್ಲಿ 9200 ವಿದ್ಯಾರ್ಥಿಗಳು, 2023ರಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.ಶೂನ್ಯ ಫಲಿತಾಂಶ ಕಾಲೇಜುಗಳ

ಸಂಖ್ಯೆ ಮೂರು ಪಟ್ಟು ಹೆಚ್ಚಳ

13 ಸರ್ಕಾರಿ, 3 ಅನುದಾನಿತ ಮತ್ತು 103 ಅನುದಾನರಹಿತ ಸೇರಿ ಒಟ್ಟು 134 ಪಿಯು ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ ಮಕ್ಕಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಈ ಸಂಖ್ಯೆ 463 ಇತ್ತು. ಅದೇ ರೀತಿ ಎಂಟು ಸರ್ಕಾರಿ ಕಾಲೇಜುಗಳು, 20 ಅನುದಾನಿತ ಮತ್ತು 90 ಅನುದಾನ ರಹಿತ ಸೇರಿ ಒಟ್ಟು 123 ಕಾಲೇಜುಗಳಲ್ಲಿ ಒಬ್ಬರೂ ಪಾಸಾಗಿಲ್ಲ. ಕಳೆದ ವರ್ಷ ಶೂನ್ಯ ಫಲಿತಾಂಶದ ಕಾಲೇಜುಗಳ ಸಂಖ್ಯೆ 34 ಮಾತ್ರ ಇತ್ತು.ಸರ್ಕಾರಿ ಕಾಲೇಜು, ಕನ್ನಡ ಮಾಧ್ಯಮ

ವಿದ್ಯಾರ್ಥಿಗಳ ಫಲಿತಾಂಶ ಪಾತಾಳಕ್ಕೆ

ಸರ್ಕಾರಿ ಪಿಯು ಕಾಲೇಜುಗಳಲ್ಲಿ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಳೆದ ಬಾರಿ ಶೇ.75.29ರಷ್ಟು ಇದ್ದ ಫಲಿತಾಂಶ ಈ ಬಾರಿ ಶೇ.57.11ಕ್ಕೆ ಇಳಿದಿದೆ. ಅದೇ ರೀತಿ ಅನುದಾನಿತ ಕಾಲೇಜಿನಲ್ಲಿ ಫಲಿತಾಂಶ ಶೇ.62.69ಕ್ಕೆ, ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಶೇ.82.66, ಬಿಬಿಎಂಪಿ ಕಾಲೇಜುಗಳಲ್ಲಿ ಶೇ.68.66, ವಿಭಜಿತ ಕಾಲೇಜುಗಳಲ್ಲಿ ಶೇ.78.58 ಮತ್ತು ವಸತಿ ಶಾಲಾ ಪಿಯು ಕಾಲೇಜುಗಳಲ್ಲಿ ಶೇ.86.18ಕ್ಕೆ ಇಳಿಕೆಯಾಗಿದೆ.

ಇನ್ನು, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 2.08 ಲಕ್ಷ ವಿದ್ಯಾರ್ಥಿಗಳಲ್ಲಿ 1.17 ಲಕ್ಷ ಮಂದಿ ಉತ್ತೀರ್ಣರಾಗಿದ್ದು ಶೇ.56.37 ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಬಾರಿ 70.41ರಷ್ಟಿತ್ತು. ಆಂಗ್ಲ ಮಾಧ್ಯಮದಲ್ಲಿ 4.29 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದು 3.50 ಲಕ್ಷ ಮಂದಿ (ಶೇ.81.75) ಪಾಸಾಗಿದ್ದಾರೆ. ಕಳೆದ ಬಾರಿ ಇದು ಶೇ.87.40 ಇತ್ತು.

- 69% ವಿದ್ಯಾರ್ಥಿಗಳು ಪಾಸ್‌ । ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌- ವೆಬ್‌ಕಾಸ್ಟಿಂಗ್‌ ಕಣ್ಗಾವಲಿನಿಂದಾಗಿ ಈ ಸಲ ಫಲಿತಾಂಶ ಇಳಿಕೆ

ದ್ವಿತೀಯ ಪಿಯು ಶೇ.69.16 ವಿದ್ಯಾರ್ಥಿಗಳು ಉತ್ತೀರ್ಣ

3 ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ । ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್

ಸಂಜನಾ (ಕಲೆ), ದೀಪಶ್ರೀ (ವಾಣಿಜ್ಯ), ಅಮೂಲ್ಯ, ವಾಗ್ದೇವಿ (ವಿಜ್ಞಾನ) ಟಾಪರ್ಸ್‌

ಸಂಜನಾ

600/597

ಬಳ್ಳಾರಿ

ದೀಪಶ್ರೀ

600/599

ದಕ್ಷಿಣ ಕನ್ನಡ

ಅಮೂಲ್ಯ

600/599

ದಕ್ಷಿಣ ಕನ್ನಡವಾಗ್ದೇವಿ

600/599

ಶಿವಮೊಗ್ಗ

134 ಕಾಲೇಜಲ್ಲಿ

ಶೇ.100 ರಿಸಲ್ಟ್‌

ಈ ಬಾರಿ 134 ಪಿಯು ಕಾಲೇಜುಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಈ ಸಂಖ್ಯೆ 463 ಇತ್ತು

123 ಕಾಲೇಜಲ್ಲಿ

ಶೂನ್ಯ ರಿಸಲ್ಟ್‌

123 ಕಾಲೇಜುಗಳಲ್ಲಿ ಒಬ್ಬರೂ ಪಾಸಾಗಿಲ್ಲ. ಕಳೆದ ವರ್ಷ ಶೂನ್ಯ ಫಲಿತಾಂಶದ ಕಾಲೇಜುಗಳ ಸಂಖ್ಯೆ 34 ಇತ್ತು

ಫಲಿತಾಂಶಕ್ಕೆ ನೊಂದು

ಇಬ್ಬರು ಆತ್ಮಹತ್ಯೆ

ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಬೇಸತ್ತು ಹಾವೇರಿ ಜಿಲ್ಲೆ ಹಿರೇಕೆರೂರಿನ ಕಾವ್ಯ ಬಸಪ್ಪ ಲಮಾಣಿ ಮತ್ತು ಮೈಸೂರಿನ ಐಶ್ವರ್ಯಾ ಎಂಬ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಫಲಿತಾಂಶ ಶೇ.11.99ರಷ್ಟು ಕುಸಿತ

ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಾರಿಗೊಳಿಸಿದ್ದ ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಗೂ ಜಾರಿಗೊಳಿಸಲಾಗಿತ್ತು. ಹೀಗಾಗಿ ಅಕ್ರಮಗಳಿಗೆ ಕಡಿವಾಣ ಬಿದ್ದ ಪರಿಣಾಮ ಫಲಿತಾಂಶ ಶೇ.11.99ರಷ್ಟು ಕುಸಿದಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕೂಡ ಇದೇ ಕಾರಣಕ್ಕೆ ಶೇ.10ರಷ್ಟು ಕುಸಿತ್ತು.==

ಟಾಪ್‌ 3 ಜಿಲ್ಲೆಗಳು

ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ದಕ್ಷಿಣ

ಏ.24ಕ್ಕೆ ಪಿಯು 2

ಪರೀಕ್ಷೆ ಆರಂಭ

ಉತ್ತೀರ್ಣರಾಗದ ವಿದ್ಯಾರ್ಥಿಗಳಿಗಾಗಿ ಮತ್ತು ಫಲಿತಾಂಶ ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಏ.24ರಿಂದ ದ್ವಿತೀಯ ಪಿಯುಸಿ ಎರಡನೇ ಹಂತದ ಪರೀಕ್ಷೆ ನಡೆಸಲಾಗುವುದು.