ಸಾರಾಂಶ
ನಗರದ ಎಂ.ಸಿ. ಕಾಲೋನಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಮಾಸಿಕ ಸಭೆ ಸೋಮವಾರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಲಸಿರಿ, ಕಂದಾಯ, ಪಾರ್ಕ್, ಇ- ಸ್ವತ್ತು ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಎಂ.ಸಿ. ಕಾಲೋನಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಮಾಸಿಕ ಸಭೆ ಸೋಮವಾರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಲಸಿರಿ, ಕಂದಾಯ, ಪಾರ್ಕ್, ಇ- ಸ್ವತ್ತು ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಯಿತು.ಮೇಯರ್ ಮಾತನಾಡಿ, ಶೀಘ್ರದಲ್ಲಿಯೇ ಎಂಸಿಸಿ ಬಿ ಬ್ಲಾಕ್ ಈಜುಕೊಳ ಆವರಣದಲ್ಲಿ ಕಂದಾಯ ವಸೂಲಾತಿ, ಇ-ಸ್ವತ್ತು ನೀಡುವ ಹಾಗೂ ಜಲಸಿರಿ ಯೋಜನೆಯ ಸಾಧಕ-ಬಾಧಕಗಳ ಕುರಿತಂತೆ ಸಮಸ್ಯೆ ತಿಳಿದುಕೊಳ್ಳಲು ಹಾಗೂ ಪರಿಹರಿಸಲು ಒಂದು ದಿನ ಆಂದೋಲನ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಎಂಸಿಸಿ ಎ ಮತ್ತು ಬಿ ಬ್ಲಾಕ್ ಸೇರಿದಂತೆ ಎಲ್ಲಾ ವಾರ್ಡ್ ಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಎಂಸಿಸಿ ಬಿ ಬ್ಲಾಕ್ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ನಿಮ್ಮ ವಾರ್ಡಿನ ಪಾಲಿಕೆ ಸದಸ್ಯ ಜಿ. ಎಸ್.ಮಂಜುನಾಥ್ ಗಡಿಗುಡಾಳ್ ಈ ಭಾಗದಲ್ಲಿ ಜನಪರ, ಸಮಾಜಮುಖಿ ಹಾಗೂ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅಭಿವೃದ್ದಿ ವಿಚಾರ ಬಂದರೆ ರಾಜಿ ಆಗುವುದಿಲ್ಲ. ಸ್ನೇಹಪೂರ್ವಕ ಹಾಗೂ ಪ್ರೀತಿಪೂರ್ವಕವಾಗಿ ನಮ್ಮ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸುತ್ತಾರೆ. ಸಮಸ್ಯೆಗಳಿದ್ದರೆ ಪರಿಹರಿಸುವವರೆಗೂ ವಿರಮಿಸುವುದಿಲ್ಲ. ಅಷ್ಟು ಜನಪರ ಕಾರ್ಪೊರೇಟರ್. ಉತ್ತಮ ಪಾಲಿಕೆ ಸದಸ್ಯ ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ಮಂಜುನಾಥ್ ಅವರಂಥ ಜನಪರ ನಾಯಕನಿಗೆ ನಿಮ್ಮ ಬೆಂಬಲ ಸದಾ ಇರಲಿ ಎಂದು ಹೇಳಿದರು.ಮಂಜುನಾಥ್ ಗಡಿಗುಡಾಳ್ ಮಾತನಾಡಿ, ವಾರ್ಡಿನ ಜನರು ತೋರಿಸಿದ ಪ್ರೀತಿ, ವಿಶ್ವಾಸ, ಗೌರವದಿಂದಲೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ನಡೆಸಿ ಜನರ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡಿದ್ದೇನೆ ಎಂದರು.
ಅಂದನೂರು ಮುಪ್ಪಣ್ಣನವರ ಅಧ್ಯಕ್ಷತೆ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಮಹಾಪೌರರಾದ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯ ಮಂಜುನಾಥ್ ಗಡಿಗಾಡಾಳ್, ಉಪಮೇಯರ್ ಸೋಗಿ ಶಾಂತಕುಮಾರ್ ಅವರಿಗೆ ಎಂ. ಸಿ. ಕಾಲೋನಿಯ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಯಿತು.- - - -27ಕೆಡಿವಿಜಿ41:
ದಾವಣಗೆರೆಯ ಎಂಸಿಸಿ ಎ ಮತ್ತು ಬಿ ಬ್ಲಾಕಿನಲ್ಲಿ ಮೇಯರ್ ಕೆ.ಚಮನ್ಸಾಬ್ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು.