ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯಜಾತ್ರೆಯ ಆಮಂತ್ರಣ ಬಿಡುಗಡೆ ಹಾಗೂ ಪೂರ್ವಭಾವಿ ಸಭೆ

ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜ. ೧೦ರಿಂದ ೧೨ರ ತನಕ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯಜಾತ್ರೆಯ ಆಮಂತ್ರಣ ಬಿಡುಗಡೆ ಹಾಗೂ ಪೂರ್ವಭಾವಿ ಸಭೆ ದೇವಸ್ಥಾನದ ಆವರಣದಲ್ಲಿ ನಡೆಯಿತು.ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಕಾರ್ಯಕ್ರಮದ ಸಿದ್ಧತೆ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು.ಕೃಷಿ ಇಲಾಖೆಯ ಪುತ್ತೂರು ಉಪವಿಭಾಗದ ಉಪ ಕೃಷಿ ನಿರ್ದೇಶಕ ಶಿವಶಂಕರ ದಾನೇಗೊಂಡರ ಮಾತನಾಡಿ, ವಿಜ್ಞಾನಿಗಳು ಹಾಗೂ ಯಶಸ್ವಿ ಕೃಷಿಕರಿಂದ ರೈತರಿಗೆ ವಿಚಾರಗೋಷ್ಟಿ ಹಾಗೂ ಕೃಷಿ ಮೇಳದ ಪೂರ್ವಭಾವಿಯಾಗಿ ಸಿರಿಧಾನ್ಯ ಕುರಿತು ಜಾಗೃತಿ ಮೂಡಿಸುವ ವಾಕಥಾನ್ ನಡೆಸುವ ಬಗ್ಗೆ ಮಾಹಿತಿ ನೀಡಿದರು.ಮಳಿಗೆಗಳ ನಿರ್ವಹಣೆ ಮಾಡಲಿರುವ ರೈತಕುಡ್ಲ ಪ್ರತಿಷ್ಠಾನದ ಭರತ್ ರಾಜ್ ಸೊರಕೆ ಹಾಗೂ ಸುಹಾಸ್ ಮರಿಕೆ ಅವರು ಮಳಿಗೆಗಳ ವಿಂಗಡನೆಗಳ ಕುರಿತು ಮಾಹಿತಿ ನೀಡಿ ೧೫೦ಕ್ಕೂ ಅಧಿಕ ಮಳಿಗೆಗಳು ಕೃಷಿ ಮೇಳದಲ್ಲಿ ಇರಲಿದೆ ಎಂದರು. ಹಲವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಸಮಾಜದ ಕಾರ್ಯಾಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ, ಪ್ರಮುಖರಾದ ಸುಭಾಶ್ ರೈ ಬೆಳ್ಳಿಪ್ಪಾಡಿ, ಪಿ.ಕೆ. ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಜಿಲ್ಲಾ ಕೃಷಿಕ ಸಮಾಜದ ಕೋಶಾಧಿಕಾರಿ ಕುಸುಮಾಧರ ಎ.ಟಿ., ಉಪಾಧ್ಯಕ್ಷ ಚಂದ್ರ ಕೋಲ್ಚಾರು, ಶರತ್ ಅಡ್ಕಾರು, ಬಾಳಪ್ಪ ಪೂಜಾರಿ ಬಂಬಿಲದೋಳ, ಇ.ಎಸ್.ವಾಸುದೇವ ಇಡ್ಯಾಡಿ, ರಾಜರಾಮ ಪ್ರಭು, ಸುರೇಶ್ ರೈ ಸೂಡಿಮುಳ್ಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಬಾಲಕೃಷ್ಣ ಎಂ., ಸುಕುಮಾರ ಕೆ.ಆರ್. ಶಿರಾಡಿ, ಗೋವಿಂದ ಬೋರ್ಕರ್ ಪುತ್ತೂರು, ಪಾಂಡುರಂಗ ಹೆಗ್ಡೆ, ಎ.ಪಿ. ಸದಾಶಿವ ಮರಿಕೆ, ಪ್ರವೀಣ್ ಚೆನ್ನಾವರ, ಬಾಲಕೃಷ್ಣ ಗೌಡ ಕಬಕ, ಸಂಜೀವ ಶೆಟ್ಟಿ, ವಿನೋದ್ ಕುಮಾರ್ ರೈ ಮುಂಡಾಳ, ಸುದರ್ಶನ ಶಿರಾಡಿ, ವಿನೋದ್ ಶೆಟ್ಟಿ, ರಾಮಪ್ರಸಾದ್ ಬಿ.ಎಸ್., ಧನಂಜಯ ಬೆದ್ರೋಡಿ, ದಿವ್ಯಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ ಚೆಲುವರಂಗಪ್ಪ ಟಿ.ಜಿ., ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಜಿ. ಗೌಡ ಮತ್ತಿತರರು ಉಪಸ್ಥಿತರಿದ್ದರು.