ಸೋಮಶೇಖರ್ ವೈ. ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನಲ್ಲಿ ಮುಂಗಾರು ಮಳೆ ಈ ಸಲ ಸಂಪೂರ್ಣವಾಗಿ ಕೈ ಕೊಟ್ಟಿದ್ದು, ಒಂದು ತಿಂಗಳಿಂದ ವರುಣನ ದರ್ಶನವಿಲ್ಲದೆ ರೈತಾಪಿಗಳು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಯಾವುದೇ ನೀರಾವರಿ ಇಲ್ಲದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕಿನಲ್ಲಿ ಇದುವರೆಗೂ ಶೇ. 20ರಷ್ಟು ಮಾತ್ರ ಬೀಜ ಬಿತ್ತಿದ್ದು, ಬಿತ್ತಿರುವ ಬೀಜಗಳಿಗೂ ಸಹ ಮಳೆಯಿಲ್ಲದೆ ಒಣಗುತ್ತಿವೆ. ಇನ್ನೂ ಶೇ.80ರಷ್ಟು ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ಕೆಲವು ರೈತರು ಭೂಮಿ ಹಸನು ಮಾಡಿಕೊಂಡು ಮುಗಿಲಕಡೆ ಮುಖ ಮಾಡಿದ್ದಾರೆ.

ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಟಡುವ ತಾಲೂಕಿನಲ್ಲಿ ತಂದಿರುವ ಬೀಜಗಳು ಮತ್ತು ಗೊಬ್ಬರ ರೈತರ ಮನೆಯ ಮೂಲ ಸೇರಿವೆ. ಪ್ರಸ್ತುತ ಶೇಂಗಾ, ಮುಸುಕಿನಜೋಳ, ರಾಗಿ, ನವಣೆ ಬಿತ್ತಲು ಇದು ಸಕಾಲ ಹಲವು ರೈತರು ಭೂಮಿ ಹಸನು ಮಾಡಿ ಬೀಜ ಬಿತ್ತಲು ರೆಡಿ ಮಾಡಿದ್ದು ಮಳೆಗಾಗಿ ಕಾಯುತಿದ್ದಾರೆ.

ಈಗಾಗಲೇ ತಾಲೂಕಿನಾದ್ಯಂತ ದುಡಿವ ಕೈಗಳಿಗೆ ಕೆಲಸವಿಲ್ಲದೆ ಸಾಕಷ್ಟು ಯುವಕರು ಕುಟುಂಬದ ಜೀವನ ನಿರ್ವಹಣೆಗಾಗಿ ನಗರ ಪ್ರದೇಶಗಳಲ್ಲಿ ದುಡಿಮೆ ಮಾಡುತ್ತಿದ್ದು, ಬಹುತೇಕ ಗ್ರಾಮಗಳಲ್ಲಿ ವೃದ್ಧರು ಬದುಕು ಸಾಗಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಕೂಲಿಗೆ ಬರುವ ಜನವಿಲ್ಲ, ಇನ್ನೂ ಕೆಲವು ರೈತರು ತಾಂತ್ರಿಕ ಮಾಹಿತಿ ಹಾಗೂ ವೈಜ್ಞಾನಿಕ ಪರಿಕರಗಳ ಸೌಲಭ್ಯವಿಲ್ಲದೆ ವಂಚಿತರಾಗಿದ್ದು ಬೇಸಾಯ ಮನೆ ಮಂದಿ ಸಾಯ ಎಂಬಂತಾಗಿದೆ ಎಂದು ಗೊಣಗುತ್ತಾರೆ.

ಬೋರ್ ವೆಲ್‌ಗಳಲ್ಲಿ ನೀರಿನ ಕೊರತೆ ಕಂಡು ಬರುತ್ತಿದೆ. ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಬೇಸಿಗೆ ರಣ ಬಿಸಿಲಿನಂತೆ ಮಳೆಗಾಲದಲ್ಲೂ ಉರಿ ಬಿಸಿಲು ಕೇಕೆ ಹಾಕುತ್ತಿದೆ. ಮಳೆಗಾಗಿ ಜನತೆ ಜಾತಕ ಪಕ್ಷಿಯಂತೆ ಕಾದು ಕುಳಿಯುತಿದ್ದಾನೆ .ಮಳೆ ಬಾರದಿದ್ದರೆ ಜನ ಜಾನುವಾರುಗಳಿಗೂ ಕುಡಿವ ನೀರು ಮೇವಿಗೂ ಪರದಾಡಬೇಕಾಗುತ್ತದೆ. ಸರ್ಕಾರಗಳು ಮಧುಗಿರಿ ತಾಲೂಕನ್ನು ಬರಪೀಡಿ ಪ್ರದೇಶವೆಂದು ಘೋಷಿಸಿ ಸಂಕಷ್ಟದಲ್ಲಿರುವ ರೈತರು ಮತ್ತು ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಜನರ ಅಭಿಪ್ರಾಯ.


ಬೆಳೆ ವಿಮಾ ಕಟ್ಟಲು ಮನವಿ

2026 -27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮಾ ಕಟ್ಟಲು ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನಿಸಿದ್ದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ಮಧುಗಿರಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಕೇಶವ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇವಲ 5100 ಹೆಕ್ಟೇರ್‌ ಮಾತ್ರ ಬಿತ್ತನೆ ತಾಲೂಕಿನಲ್ಲಿ ವಾರ್ಷಿಕ 655 ಮಿಮೀ ಮಳೆ ಬೀಳಬೇಕು.ಈ ಪೈಕಿ 223 ಮಿಮೀ ಮಾತ್ರ ಮಳೆ ಬಿದ್ದಿದೆ. ನಮ್ಮ ತಾಲೂಕಿನಲ್ಲಿ ಒಟ್ಟು 24,784 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಈ ಪೈಕಿ ಎಲ್ಲ ಬೆಳೆಗಳು ಸೇರಿ 5100 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಈಗಾಗಲೇ ಕೃಷಿ ಇಲಾಖೆಯಿಂದ ಒಂದು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಶೇಂಗಾ ಬಿತ್ತನೆ ಮಾಡಲು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 1500 ಸಾವಿರ ಕ್ವಿಂಟಾಲ್ ಶೇಂಗಾ ಉಚಿತವಾಗಿ ವಿತರಿಸಿದೆ.