ಸಾರಾಂಶ
ಗದಗ: ಕೃಷಿಯಲ್ಲಿರುವ ಹಲವಾರು ಸಮಸ್ಯೆಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು. ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕು, ನೈಸರ್ಗಿಕ ಕೃಷಿಯನ್ನು ಮಾಡಲು ರೈತರು ಮುಂದೆ ಬರಬೇಕು, ಇದರಿಂದ ರೈತರ ಆತ್ಮಹತ್ಯೆಯ ಪ್ರಕರಣಗಳು ಕಡಿಮೆ ಆಗುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಾಡು ಕಂಡ ಅಪರೂಪದ ರಾಜಕಾರಣಿ, ಸಹಕಾರಿ ರಂಗದ ಭೀಷ್ಮ ಕೆ.ಎಚ್.ಪಾಟೀಲರ ಜನ್ಮ ಶತಮಾನೋತ್ಸವ (1925-2025) ಸಂಭ್ರಮದ ಅಂಗವಾಗಿ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ರೈತರ ಆತ್ಮ ಹತ್ಯೆಯ ಪ್ರಕರಣಗಳು ಕಡಿಮೆ ಆಗಬೇಕು. ಇಲ್ಲಿ ಸೇರಿರುವಂತಹ ರೈತರೆಲ್ಲರೂ ಸೇರಿ ಸೂಕ್ತವಾದ ನಿರ್ಣಯಗಳನ್ನು ಕೈಗೊಂಡರೆ ಅವುಗಳನ್ನು ಈಡೇರಿಸಲು ರಾಜಕೀಯವಾಗಿ ಹಾಗೂ ಕಾನೂನಾತ್ಮಕ ನೀತಿಗಳನ್ನು ಜಾರಿಗೊಳಿಸಲು ನಾವು ಬದ್ಧವಾಗಿದ್ದೇವೆ. ಒಟ್ಟಾರೆಯಾಗಿ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು, ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕು. ಜೊತೆಗೆ ನಾವು ನೀವೆಲ್ಲರೂ ವಿಷಮುಕ್ತ ಆಹಾರವನ್ನು ಸೇವಿಸುವಂತಾಗಬೇಕು. ಹಾಗಾದಾಗ ಇಡೀ ಜಗತ್ತಿಗೆ ನಿಮ್ಮಂತಹ ರೈತರೆಲ್ಲರ ಕೊಡುಗೆಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ, ಕಳೆದ ಹಲವಾರು ವರ್ಷಗಳಿಂದ ಈ ದಿಶೆಯಲ್ಲಿ ನಾವು ಕೆಲಸ ಮಾಡುತ್ತಿದ್ದು ಇನ್ನೂ ಹೆಚ್ಚು ಕೆಲಸ ಆಗಬೇಕು. ರೈತರು ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಲು ನೈಸರ್ಗಿಕ ಕೃಷಿ ಒಂದು ಉತ್ತಮ ಕೊಡುಗೆಯಾಗಿದೆ. ಪ್ರತಿಯೊಬ್ಬರು ವಿಷಮುಕ್ತ ಆಹಾರವನ್ನು ದಿನ ನಿತ್ಯ ಸೇವಿಸುವಂತಾಗಬೇಕು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ತುಮಕೂರಿನ ನೈಸರ್ಗಿಕ ಕೃಷಿ ತಜ್ಞ ಪ್ರಸನ್ನ ಮೂರ್ತಿ, ರಾಜಶೇಖರ ನಿಂಬರಗಿ ನೈಸರ್ಗಿಕ ಕೃಷಿ ಬಗ್ಗೆ ತಿಳಿಸಿದರು. ಪ್ರಗತಿಪರ ರೈತ ಸಿದ್ದಪ್ಪ ಕರಿಕಟ್ಟಿ, ಅಕ್ಬರಸಾಬ ಬಬರ್ಚಿ, ಡಾ. ಎಲ್.ಜಿ. ಹಿರೇಗೌಡರ, ಡಾ. ಸುಧಾ ವ್ಹಿ. ಮಂಕಣಿ, ರಾಜ್ಯದ 18 ಜಿಲ್ಲೆಗಳಿಂದ ಆಗಮಿಸಿದ್ದ 230 ಜನ ರೈತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.