ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ವಿರೋಧಿಸಿ ಅಹಿಂದ ಒಕ್ಕೂಟ ಪ್ರತಿಭಟನೆ

| Published : Aug 18 2024, 01:56 AM IST / Updated: Aug 18 2024, 10:39 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್‌ ಅನುಮತಿಯನ್ನು ಖಂಡಿಸಿ ಹಾಗೂ ರಾಜ್ಯಪಾಲರನ್ನು ಕೇಂದ್ರಕ್ಕೆ ವಾಪಾಸ್‌ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ನಗರದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡರ್ ವೃತ್ತದಿಂದ ನಗರದ ತಾಲೂಕು ಕಚೇರಿವರಗೆ ಮೆರವಣಿಗೆ ನಡೆಸಿ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮಾಡಲಾಯಿತು.

ರಾಜ್ಯದ ರಾಜ್ಯಪಾಲರು ದುರುದ್ದೇಶದಿಂದ ಜನರಿಂದ ಆಯ್ಕೆಯಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋಟ್‌ ಅವರು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ನೀಡಿದ ದೂರಿನ ಆಧಾರದ ಮೇಲೆ ಏಕಾಏಕಿ ಪ್ರಾಸಿಕ್ಯೂಷನ್ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಹಗರಣ ಮಾಡಿಲ್ಲ. ಅವರ ಮೇಲೆ ಕಪ್ಪು ಚುಕ್ಕೆಯೂ ಇಲ್ಲ. ಆದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಒತ್ತಡದ ಮೇಲೆ ರಾಜ್ಯಪಾಲರು ಈ ಕಾರ್ಯ ಮಾಡಿದ್ದಾರೆ. ಕೂಡಲೇ ಅವರನ್ನು ವಾಪಾಸ್‌ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್‌ರ ಮೂಲಕ ರಾಷ್ಟ್ರಪತಿಯವರಿಗೆ ಮನವಿಪತ್ರ ರವಾನಿಸಲಾಯಿತು.

ಅಹಿಂದ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ.ಎಂ.ಹಾಲಪ್ಪ, ಎಲ್.ಸಿದ್ದನಗೌಡ, ನಿಂಬಗಲ್ ರಾಮಕೃಷ್ಣ,ಎಚ್. ಮಹೇಶ್‌, ವಿನಾಯಕ ಶೆಟ್ಟರ್, ಸಿ.ಖಾಜಾ ಹುಸೇನ್, ಕೊಟಗಿನಾಳ ಮಲ್ಲಿಕಾರ್ಜುನ, ಬಣ್ಣದಮನೆ ಸೋಮಶೇಖರ್, ಕುರಿ ಶಿವಮೂರ್ತಿ, ಕೆ.ರಮೇಶ್, ಬಿ.ಮಾರೆಣ್ಣ, ತಮ್ಮನಳ್ಳೆಪ್ಪ, ಯರಿಸ್ವಾಮಿ, ಮರಡಿ ಮಂಜುನಾಥ, ಎಸ್.ಬಿ ಮಂಜುನಾಥ , ಧನ್ ರಾಜ್ , ಎಂ.ಡಿ.ರಫೀಕ್, ಜಿ.ಶಿವಕುಮಾರ, ತಾರಾ ಬಾಷಾ, ವಲಿ, ಗೋವಿಂದಪ್ಪ ಹೊನ್ನುರ ಸಾಬ್‌, ಭರತ ಕುಮಾರ್,ತಾಜುದ್ದೀನ್, ಅಲನ್ ಭಕ್ಷಿ, ವೆಂಕಪ್ಪ, ಚಿತ್ತವಾಡ್ಗಿಪ್ಪ, ನಾಗರಾಜ್, ರುಕ್ಸಾನ, ನಾಗಮ್ಮ, ಪರ್ವಿನ್, ಗಂಗಮ್ಮ, ಉಮಾ, ಸ್ವಪ್ನಾ, ಹಸೇನ್ , ಹುಸೇನ್, ಆಶಾ ಬಾನು, ಪ್ರಮೋದ್ ಪುಣ್ಯಮೂರ್ತಿ, ಪಲ್ಲೇದ ಸಿದ್ದೇಶ, ಗಾಳೆಪ್ಪ, ಸೋ‌ಹೆಲ್, ಶ್ರೀನಿವಾಸ ಮತ್ತಿತರರಿದ್ದರು.