ಸಾರಾಂಶ
ವಿವಿಧ ಹಕ್ಕೊತ್ತಾಯಗಳಿಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಆಹೋರಾತ್ರಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಹಕ್ಕೊತ್ತಾಯಗಳಿಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಆಹೋರಾತ್ರಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿರುವ ಕಾರ್ಯಕರ್ತೆರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷೆ ಕವಿತಾ ಮಾತನಾಡಿ, ನಮ್ಮ ಬೇಡಿಕೆಗಳಿಗಾಗಿ ಮೂರು ದಿನಗಳ ಕಾಲ ಕರ್ತವ್ಯಕ್ಕೆ ಗೈರು ಹಾಜರಾಗಿ ರಾಜ್ಯದ ಜಿಲ್ಲಾಕೇಂದ್ರಗಳಲ್ಲಿ ಆಶಾಗಳಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದೇವೆ ಗುರುವಾರ ಕೊನೆಗೊಳಿಸುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಮುಖ್ಯಮಂತ್ರಿ ಘೋಷಿಸಿದ ರಾಜ್ಯದ ಗೌರವಧನ ಹಾಗೂ ಕೇಂದ್ರದ ಭಾಗಶ; ಗೌರವಧನ ಸೇರಿ ಮಾಸಿಕ ೧೦ ಸಾವಿರ ರು. ಗ್ಯಾರಂಟಿಯನ್ನು ಏಪ್ರಿಲ್ ನಿಂದಲೇ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು,ಮುಖ್ಯಮಂತ್ರಿಗಳು ಘೋಷಿಸಿದಂತೆ ಪ್ರತಿ ತಿಂಗಳು ಎಲ್ಲ ಆಶಾಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ, ೧೦ಸಾವಿರ ರು. ಗೌರವಧನ, ಇದನ್ನು ಹೊರತೂಪಡಿಸಿ, ಕಾಂಪೋನೆಟ್ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇಂಟೆನ್ಸಿವ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ೮ ತಿಂಗಳಾದರೂ ಅವರು ಕೊಟ್ಟ ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು.
ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ೧ಸಾವಿರ ರೂ.ಹೆಚ್ಚಳ ಮಾಡಿದಂತೆ ಆಶಾಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು, ಜನಸಂಖ್ಯೆ ಹೆಚ್ಚಿಸಿ ತರ್ಕಬದ್ದ ಗೊಳಿಸುವ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಆಶಾಗಳನ್ನು ಕೆಲಸದಿಂದ ತೆಗೆಯಬಾರದು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ವಿ.ಭಾಗ್ಯ, ಜಯಲಕ್ಷ್ಮಿ, ಅಶ್ವಿನಿ, ಬಿ.ಶಶಿಕಲಾ, ಸುಜನಾ, ಯಶೋಧ, ಮಂಜು, ರಾಜಮ್ಮ ಇತರರು ಭಾಗವಹಿಸಿದ್ದರು,