ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಪಾದಾರ್ಪಣೆ

| Published : Sep 05 2024, 12:37 AM IST

ಸಾರಾಂಶ

ಕಂಪನಿಗಳ ಚರಾಸ್ತಿ ಮತ್ತು ಸ್ಥಿರಾಸ್ತಿ ಮಾರಾಟ ಮಾಡಿದರೆ ಗ್ರಾಹಕರ ಹಣ ಪಾವತಿಸಬಹುದು

ಗದಗ: ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿ ಗ್ರಾಹಕರಿಗೆ ಹಣ ಪಾವತಿಸಬೇಕು. ಸರ್ಕಾರದ ಹಣ ಕೇಳುತ್ತಿಲ್ಲ.ನಮ್ಮ ಹಣವನ್ನು ಹಕ್ಕಿನಿಂದ ಕೇಳುತ್ತಿದ್ದೇವೆ, ನಿಗದಿತ ಸಮಯದಲ್ಲಿ ನಮ್ಮ ಹಣ ಪಾವತಿಸದೇ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದು ಸಂತ್ರಸ್ತ ಠೇವಣಿದಾರರ ಕುಟುಂಬದ ರಾಜ್ಯ ಘಟಕದ ಅಪ್ಪಾಸಾಹೇಬ ಬುಗಡೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತದ ಮುಂದೆ ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಕ್ಷಣ ಮರುಪಾವತಿಸಬೇಕೆಂದು ಆಗ್ರಹಿಸಿ ಠಗಿ ಪೀಡಿತ ಜಮಾಕರ್ತ ಪರಿವಾರ ಸಂಘಟನೆಯಿಂದ ನಡೆದ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ₹3 ಲಕ್ಷಕ್ಕೂ ಹೆಚ್ಚು ಕಂಪನಿ ಬಂದ್ ಮಾಡಿದ್ದು, ಕಾರ್ಯಾಲಯಗಳಿಗೆ ಬೀಗ ಜಡಿದು ಖಾತೆಗಳನ್ನು ಸ್ಥಗಿತಗೊಳಿಸಿದ್ದು, ದೇಶದಲ್ಲಿ ₹ 5 ಲಕ್ಷ 40 ಸಾವಿರ ಕೋಟಿ ಕಂಪನಿಗಳಿಂದ ಜಪ್ತಿ ಮಾಡಲಾಗಿದೆ. ಆದರೆ ಗ್ರಾಹಕರಿಗೆ ಹಣ ನೀಡದ ಸತಾಯುಸುತ್ತಿರುವದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂಪನಿಗಳಿಂದ ಜಪ್ತಿ ಮಾಡಿದ ಹಣ ಕೇಂದ್ರ ಸರ್ಕಾರ ಚಲಾವಣೆ ಸಹ ಮಾಡುತ್ತಿದೆ. ಕಂಪನಿಗಳ ಚರಾಸ್ತಿ ಮತ್ತು ಸ್ಥಿರಾಸ್ತಿ ಮಾರಾಟ ಮಾಡಿದರೆ ಗ್ರಾಹಕರ ಹಣ ಪಾವತಿಸಬಹುದು. 1978 ಆಕ್ಟ್ ಪ್ರಕಾರ ಸೆಬಿ ಎಲ್ಲ ಕಂಪನಿಗಳನ್ನು ಬಂದ್ ಮಾಡಿದ್ದು, ಬರ್ಡ್ಸ್ ಕಾಯಿದೆ ಅನ್ವಯ ನಮ್ಮ ಎಲ್ಲ ಗ್ರಾಹಕರಿಗೆ ನೀಡಲು ಅವಕಾಶವಿದೆ. ಆದರೆ ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಕಾರಣ ನಮ್ಮ ಹಣ ನಮಗೆ ದಕ್ಕುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೆ.16,17 ರಂದು ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ರಾಷ್ಟ್ರಾಧ್ಯಕ್ಷ ಮದನ್‌ಲಾದ ಆಜಾದ ಗದಗ ನಗರಕ್ಕೆ ಭೇಟಿ ನೀಡುವ ಉದ್ದೇಶವಿದ್ದು, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಕಂಪನಿಗಳ ಏಜೆಂಟ್ ಹಾಗೂ ಹಣ ತುಂಬಿದ ಗ್ರಾಹಕರು ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧ್ಯಕ್ಷ ಹೇಮಂತಗೌಡ ಮಾಲಿಪಾಟೀಲ ಹಾಗೂ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ವೀರಣ್ಣ ಚಾಲಕಬ್ಬಿ ಮಾತನಾಡಿದರು.

ಶಿರಹಟ್ಟಿ ತಾಲೂಕಾಧ್ಯಕ್ಷ ಮಂಜುನಾಥ ಆರೆಪಲ್ಲಿ, ಸುರೇಶ ಕರ್ಜಗಿ, ಹೊನಕೇರಪ್ಪ ನರಸಾಪೂರ, ಸುಮಂಗಲಾ ರಾಠೋಡ, ಗಂಗಮ್ಮ ಹುರಳಿ, ಲಾಲಸಾಬ್‌ ನದಾಫ್, ಜಯಪ್ರಕಾಶ ಗದಗ, ಶಿವಕುಮಾರ ಮಠದ, ಅಶೋಕ ಕುರ್ತಕೋಟಿ. ಸಿ.ಎಚ್.ಹುಚ್ಚಮ್ಮನವರ,ಪಂಚಾಕ್ಷರಯ್ಯ ವಿರಕ್ತಮಠ, ಪುಪ್ಪಾ ಸುತ್ರಾವೆ, ಕಲಾವತಿ ನಾವಿ ಮತ್ತಿತರರು ಇದ್ದರು.