-ಸ್ಮಾಲ್ ಕಿಕ್ಕರ್
ಔಷಧ ಕ್ಷೇತ್ರದಲ್ಲಿ ಹೊಸತನ--
ಕನ್ನಡಪ್ರಭ ವಾರ್ತೆ ಶಿವಮೊಗ್ಗಉತ್ತಮ ಆರೋಗ್ಯಕ್ಕಾಗಿ ಹೊಸ ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ವಹಿಸುತ್ತಿದ್ದು, ಔಷಧ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿದೆ ಎಂದು ಸೌದಿ ಅರೇಬಿಯಾದ ಶಾಖ್ರಾ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಫಾರ್ಮಸಿ ಔಷಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ ಬಿ.ಎಸ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಔಷಧಶಾಸ್ತ್ರ ವಿಭಾಗ ಹಾಗೂ ಇಂಡಿಯನ್ ಫಾರ್ಮಸಿ ಗ್ರಾಜುಯೇಟ್ಸ್ ಅಸೋಸಿಯೇಷನ್ ಮಹಿಳಾ ವೇದಿಕೆಯ ಕರ್ನಾಟಕ ಘಟಕದ ವತಿಯಿಂದ ಶನಿವಾರ ಭಾರತೀಯ ಔಷಧಶಾಸ್ತ್ರದ ಪಿತಾಮಹ ಸರ್ ರಾಮನಾಥ್ ಚೋಪ್ರಾ ಅವರ 144ನೇ ಜನ್ಮದಿನದ ಅಂಗವಾಗಿ 2ನೇ ರಾಷ್ಟ್ರೀಯ ಔಷಧಶಾಸ್ತ್ರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಔಷಧಗಳ ಪರಿಣಾಮ, ಅಡ್ಡಪರಿಣಾಮ, ಪರಸ್ಪರ ಕ್ರಿಯೆ, ಹೊಸ ಔಷಧದ ಗುರಿಗಳ ಕಡಿಮೆ ಸಮಯದಲ್ಲಿ ಗುರುತಿಸುವಿಕೆ ಹಾಗೂ ಸಂಯುಕ್ತಗಳ ವಿಶ್ಲೇಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಸಹಕಾರಿಯಾಗಿವೆ.
ಔಷಧಗಳು ವಿವಿಧ ಜೀನ್ಗಳು, ಪ್ರೋಟೀನ್ ಮತ್ತು ಜೈವಿಕ ಮಾರ್ಗಗಳ ಮೇಲೆ ಬೀರುವ ಒಟ್ಟಾರೆ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಜಾಲರೂಪದ ಔಷಧ ವಿಜ್ಞಾನ ನೆರವಾಗುತ್ತದೆ. ಎಐ ಮೇಲ್ವಿಚಾರಿತ ಯಂತ್ರ ಕಲಿಕೆಯಲ್ಲಿರುವ ಬೆಂಬಲ ವಾಹಕ ಯಂತ್ರ ವಿಧಾನವನ್ನು ಔಷಧೀಯ ದತ್ತಾಂಶ ವಿಶ್ಲೇಷಣೆಗೆ ಬಳಸಬಹುದಾಗಿದೆ. ಎಐ ಮೇಲ್ವಿಚಾರಣೆಯಿಲ್ಲದ ಯಂತ್ರ ಕಲಿಕೆ ಮೂಲಕ ದತ್ತಾಂಶದಲ್ಲಿರುವ ಗುಪ್ತ ಮಾದರಿಗಳು ಮತ್ತು ಸಂಬಂಧಗಳನ್ನು ಗುರುತಿಸಬಹುದು ಎಂದು ವಿವರಿಸಿದರು.ಪ್ರಾಂಶುಪಾಲ ಡಾ. ಎಸ್.ಎನ್. ಶ್ರೀಹರ್ಷ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಔಷಧ ಸಂಶೋಧನೆಗೆ ಉತ್ತೇಜನ’ ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಔಷಧವಿಜ್ಞಾನದ ಜ್ಞಾನದೊಂದಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜ್ಞಾನವನ್ನು ಸಮನ್ವಯಗೊಳಿಸಿದಾಗ, ಔಷಧ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು.
ಎಐ ನೆರವಿನಿಂದ ಹೆಚ್ಚಿನ ಪ್ರಮಾಣದ ದತ್ತಾಂಶವನ್ನು ವೇಗವಾಗಿ ವಿಶ್ಲೇಷಿಸಿ, ಸಂಶೋಧನೆಯ ನಿಖರತೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಣಾಮಕಾರಿ ಔಷಧಗಳ ಅಭಿವೃದ್ಧಿ ಪ್ರಕ್ರಿಯೆಯನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಔಷಧವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಆಧುನಿಕ ತಂತ್ರಜ್ಞಾನಗಳ ಜ್ಞಾನವನ್ನು ಹೊಂದುವುದು ಅಗತ್ಯವಾಗಿದೆ ಎಂದು ಹೇಳಿದರು.ವಿಭಾಗದ ಮುಖ್ಯಸ್ಥ ಡಾ. ಜೆ.ಹೆಚ್. ವಿರೂಪಾಕ್ಷ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪೊಟೋ09ಎಸ್ಎಂಜಿಕೆಪಿ02