ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಕೆಲಸದಲ್ಲಿರುವ ಯುವಕರು ಸಮಾಜ ಸೇವೆಗೆ ಮುಂದಾಗಿರುವುದು ಖುಷಿ ನೀಡಿದೆ. ಟೊಯೋಟಾ ಉದ್ಯೋಗಿ ಅಣ್ಣೂರು ಎ.ಆರ್. ಚಂದ್ರೇಶ್ರವರು ಶಾಲೆಯ ಅಭಿವೃದ್ಧಿಗೆ ಕಂಕಣಬದ್ಧರಾಗಿ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ನಿವೃತ್ತ ಎಂಜಿನಿಯರ್ ಬಿ.ವಿ.ಶಂಕರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಜೋಡಿ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಭಾರತಿನಗರ ರೋಟರಿ ಸೆಂಟ್ರಲ್ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕಗಳು ಹಾಗೂ ತಟ್ಟೆ ಲೋಟಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಜತೆಗೆ ದೇಶ ಕಟ್ಟುವ ಹಾಗೂ ಆದರ್ಶ ಪುರುಷರ ಇತಿಹಾಸ ತಿಳಿಸುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ನಾಗರೀಕರನ್ನಾಗಿ ನಿರ್ಮಿಸುವ ಅಗತ್ಯ ಎದುರಾಗಿದೆ ಎಂದರು.
ಬಳಿಕ ದಾನಿ ಎ.ಆರ್.ಚಂದ್ರೇಶ್ ಅಣ್ಣೂರು ವಿದ್ಯಾರ್ಥಿಗಳಿಗೆ ೮೦೦೦ ರು. ಮೌಲ್ಯದ ೨೦ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕಗಳು ಹಾಗೂ ಶಾಲೆಗೆ ೩೦೦೦ ರು. ಮೌಲ್ಯದ ೧೦ ತಟ್ಟೆಗಳು ಹಾಗೂ ಲೋಟಗಳನ್ನು ವಿತರಿಸಿದರು.ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮೂಲಕ ಮಾತನಾಡುವ ಕೌಶಲ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಭಾಷಣ, ಚರ್ಚಾ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಗುವುದು. ವಿದ್ಯಾರ್ಥಿಗಳು ನಿಮ್ಮ ಪೋಷಕರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಹೇಳಬೇಕು. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು ಎಂದರು.
ಮುಂದಿನ ದಿನಗಳಲ್ಲಿ ಸುರಕ್ಷತಾ ನಿಯಮಗಳ ಕುರಿತು ಕಾರ್ಯಾಗಾರ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಕರ್ಯ ಒದಗಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆ.ಟಿ.ನಾರಾಯಣ ರಾಜ್ ಅರಸ್, ಡಿ.ಎಸ್.ಕೃಷ್ಣೇಗೌಡ, ಕೆ.ಆರ್.ಶಶಿಧರ ಈಚಗೆರೆ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪ ಹಾಗೂ ಎನ್.ಕೆ.ಪವಿತ್ರ ಇದ್ದರು.