ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕಿನ ಮುತ್ತಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಕ್ಷಿಸಲು ಆಗ್ರಹಿಸಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ವಿದ್ಯಾರ್ಥಿಗಳು ಪೋಷಕರು ಪ್ರತಿಭಟನೆ ನಡೆಸಿದರು. ಗ್ರಾಮದ ಮಾರೆಮ್ಮ ಗುಡಿ ಹತ್ತಿರ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿದ ಎಐಡಿಎಸಧೊ ಜಿಲ್ಲಾ ಸಂಚಾಲಕ ಕೆ.ಈರಣ್ಣ, ಮುತ್ತಯ್ಯನಹಟ್ಟಿಯಲ್ಲಿ ಬಡವರಿಗೆ ಇರುವುದು ಒಂದೇ ಸರ್ಕಾರಿ ಶಾಲೆ. ಈ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5 ವರ್ಷದ ಮಕ್ಕಳು 3 ಕಿಲೋ ಮೀಟರ್ ದೂರ ಹೇಗೆ ಹೋಗಬೇಕು? ಬಡವರ ಮಕ್ಕಳು 50ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ದಾಖಲಾತಿ ಇರುವ ಸರ್ಕಾರಿ ಶಾಲೆ ಮುಚ್ಚಬಾರದು ಎಂಬುದು ಪೋಷಕರು ಆಗ್ರಹವಾಗಿದೆ ಎಂದರು.
ದೇಶದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರು ಇಡೀ ಜೀವನವನ್ನು ಶಿಕ್ಷಣಕ್ಕಾಗಿ ದುಡಿದು, ಶೋಷಿತರಿಗೆ, ದಲಿತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅಕ್ಷರ ಕ್ರಾಂತಿಯ ಹರಿಕಾರರಾದರು. ಭಗತ್ ಸಿಂಗ್, ನೇತಾಜಿ ಅವರು ಸ್ವಾತಂತ್ರ್ಯ ನಂತರ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಸಾರಿದರು. ಅಧಿಕಾರದ ಚುಕ್ಕಾಣಿ ಹಿಡಿದ ಎಲ್ಲಾ ಸರ್ಕಾರಗಳು ಬಡ ಮಕ್ಕಳಿಂದ ಶಿಕ್ಷಣವನ್ನು ಕಿತ್ತುಕೊಂಡು, ಸಮಾಜವನ್ನು ಇನ್ನಷ್ಟು ಕತ್ತಲೆ ಕೋಣೆಯಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿರದರು.ಸಾರ್ವಜನಿಕ ಶಿಕ್ಷಣ ಉಳಿಸಿ ಜನರ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಪ್ರಬಲ ಹೋರಾಟ ಕಟ್ಟಬೇಕು. ಹಾಗೂ ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಿರುವ ಎಲ್ಲಾ ಸರ್ಕಾರಗಳ ವಿರುದ್ಧ ಜಾತಿ, ಧರ್ಮ ಬೇಧಬಾವವಿಲ್ಲದೆ ಒಂದಾಗಿ ಮತ್ತೊಂದು ನವೋದಯ ಚಳವಳಿ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷೆ ಪವಿತ್ರ, ಊರಿನ ಸರ್ಕಾರಿ ಶಾಲೆ ಉಳಿಸುವ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷ ಸೂರಪ್ಪ, ರೇಖಮ್ಮ, ಲಕ್ಷ್ಮಿ, ತಿಪ್ಪೇಸ್ವಾಮಿ, ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.