ಸಾರಾಂಶ
ಬೆಂಗಳೂರು : ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ವೀರ್ಯದ ಆರೋಗ್ಯ ಸ್ಥಿತಿಯನ್ನು ಕಡಿಮೆ ಮಾಡುತ್ತಿದೆ ಎಂದು ಸಿಐಸಿ 2025 ಸಂಘಟನಾ ಅಧ್ಯಕ್ಷ ಡಾ। ಪ್ರವೀಣ್ ಜೋಶಿ ಕಳವಳ ವ್ಯಕ್ತಪಡಿಸಿದರು.
ಗ್ಲೋಬಲ್ ಹೆಲ್ತ್ ಅಕಾಡೆಮಿ ಆಯೋಜಿಸಿದ್ದ ಸಿಐಸಿ 2025 ಸಮಾವೇಶದಲ್ಲಿ ಅವರು ಮಾತನಾಡಿ, ‘ನಗರ ಪ್ರದೇಶಗಳಲ್ಲಿ ಬಂಜೆತನ ಪ್ರಕರಣ ಹೆಚ್ಚಾಗುತ್ತಿವೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಶೇ.40-50 ರಷ್ಟು ಬಂಜೆತನ ಪ್ರಕರಗಳು ಪುರುಷರಿಗೆ ಸಂಬಂಧಿಸಿವೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟ ವೀರ್ಯದ ಆರೋಗ್ಯ ಸ್ಥಿತಿಯನ್ನು ಕಡಿಮೆ ಮಾಡಲು ಕಾರಣವಾಗಿದೆ.
ವೀರ್ಯಾಣು ಕಡಿಮೆ ಇರುವುದು, ಹಾರ್ಮೋನು ಅಸಮತೋಲನ, ಅನುವಂಶಿಕ ಪರಿಸ್ಥಿತಿ ಜೊತೆಗೆ ಧೂಮಪಾನ, ಅತಿಯಾದ ಮದ್ಯಪಾನ, ಬೊಜ್ಜು ಮತ್ತು ದೀರ್ಘಕಾಲಗೆ ಶಾಖ ಮತ್ತು ವಿಕಿರಣಕ್ಕೆ ಒಡ್ಡಿಕೊಳ್ಳುವಂತಹ ಜೀವನಶೈಲಿ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ನಿರಂಜನ್, ಸಮಗ್ರ ಬಂಜೆತನ ನಿವಾರಣೆಗೆ ಸಂತಾನೋತ್ಪತ್ತಿ ಔಷಧದಲ್ಲಿನ ಇತ್ತೀಚಿನ ಆವಿಷ್ಕಾರ, ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿ ಹೆಚ್ಚು ನೆರವಾಗುತ್ತಿದೆ. ಬಂಜೆತನ ನಿರ್ವಹಣೆಗೆ ಹೊಸ ಒಳನೋಟಗಳು ಮತ್ತು ಪರಿಹಾರ ಒದಗಿಸಬೇಕಿದೆ. ವೈದ್ಯಕೀಯ ಪ್ರಗತಿಯನ್ನು ರೋಗಿ-ಕೇಂದ್ರಿತ ವಿಧಾನದೊಂದಿಗೆ ಸಂಯೋಜನೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಮಹಿಳೆಯರ ಬಂಜೆತನದ ಬಗ್ಗೆ ಮತನಾಡಿದ ಡಾ. ಮೇಘನಾ ನ್ಯಾಪತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಪ್ರಕಾರ, ವಿವಾಹವಾದ 15 ರಿಂದ 49 ರ ವಯೋಮಾನದ ಪ್ರತಿ ಸಾವಿರ ಮಹಿಳೆಯರಲ್ಲಿ 18.7 ರಷ್ಟು ಮಂದಿಯಲ್ಲಿ ಬಂಜೆತನ ಸಮಸ್ಯೆ ಎದುರಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯನ್ನು ಸುಧಾರಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ ಲಿಮಿಟೆಡ್ನ ಕಾರ್ಯಕಾರಿ ಅಧ್ಯಕ್ಷ ಡಾ। ಬಿ.ಎಸ್.ಅಜಯ್ ಕುಮಾರ್, ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್ ಕಾರ್ಯಕಾರಿ ನಿರ್ದೇಶಕಿ ಡಾ। ಅಂಜಲಿ ಅಜಯ್ ಕುಮಾರ್, ಡಾ। ಮೇಘನಾ, ಡಾ। ಪ್ರವೀಣ್ ಜೋಶಿ, ನಗರದ 300ಕ್ಕೂ ಅಧಿಕ ಖ್ಯಾತ ಸ್ತ್ರೀರೋಗ ತಜ್ಞರು ಪಾಲ್ಗೊಂಡಿದ್ದರು.