ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಕ್ಷರದಾಸೋಹ ಬಿಸಿಯೂಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸರ್ಕಾರಿ ವೇತನ ವಿಳಂಬವಾಗುತ್ತಿದ್ದು, ಇದನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಅಡುಗೆ ಸಿಬ್ಬಂದಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.ಸರ್ಕಾರ ಮೂರು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದ್ದರಿಂದ ಬಿಸಿಯೂಟ ಸಿಬ್ಬಂದಿ ತೀವ್ರ ಸಂಕಷ್ಟಕ್ಕೊಳಗಾಗಿರುವುದಾಗಿ ತಿಳಿಸಿದ್ದಾರೆ. ಸಾಲದ ಸುಳಿಗೆ ಸಿಲುಕಿಕೊಂಡಿರುವ ಅದೆಷ್ಟೋ ಮಂದಿ ಬಿಸಿಯೂಟ ಕೆಲಸ ತೊರೆದು ಕೂಲಿ ಕೆಲಸಕ್ಕೆ ತೆರಳಿ ನೆಮ್ಮದಿ ಜೀವನಕ್ಕೆ ಕಟ್ಟಿಕೊಂಡಿದ್ದಾರೆ.
ಮಾಸಿಕ ಕನಿಷ್ಠ 3,500 ರು.ಗಳಿಂದ ತೊಡಗಿ, ಗರಿಷ್ಠ 3800 ರು. ತನಕ ನಾಲ್ಕು ಸ್ಲಾಬ್ಗಳಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗೆ ಸಂಬಳ ನಿಗದಿಯಾಗಿದೆ. ಈ ಸಂಬಳವನ್ನು ಮೂರು ತಿಂಗಳಿಗೊಮ್ಮೆ ಅನಿಯಮಿತವಾಗಿ ನೀಡುತ್ತಿರುವುದೇ ದುಡಿಯುವ ವರ್ಗಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದರೂ ಸರ್ಕಾರದ ವೇತನ ಪರಿಷ್ಕರಣೆ ಆಗದಿರುವುದೂ ಸಹ ಬಿಸಿಯೂಟ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.ನಾವು ಅಕ್ಷರ ದಾಸೋಹದ ಬಿಸಿಯೂಟ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸುವುದ್ದಕ್ಕಿಂತ ಕಾಫಿ ತೋಟ ಹಾಗೂ ಇತರೆ ಕೂಲಿ ಕೆಲಸಗಳಿಗೆ ತೆರಳಿದರೆ ಕುಟುಂಬಗಳನ್ನು ನಿರ್ವಹಿಸಬಹುದಾಗಿತ್ತು. ಈಗ ಸರ್ಕಾರ ಮಧ್ಯಾಹ್ನದ ಬಿಸಿಯೂಟದೊಂದಿಗೆ ಹಾಲು, ಮೊಟ್ಟೆ ವಿತರಣೆಯನ್ನೂ ಪ್ರಾರಂಭಿಸಿದ ಕಾರಣ ನಾವು ಶಾಲೆಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ನಂತರ ಯಾವುದೇ ಕೆಲಸಕ್ಕೂ ತೆರಳಲು ಆಗುತ್ತಿಲ್ಲ. ಇಲ್ಲಿನ ಸಂಬಳ ನಂಬಿ ನಾವು ಮಾಡಿರುವ ಸಾಲ ಮರುಪಾವತಿಸಲಾಗದೆ ಸಂಕಷ್ಟ ಎದುರಾಗಿದೆ ಎಂದು ಅಕ್ಷರದಾಸೋಹ ಸಿಬ್ಬಂದಿ ‘ಕನ್ನಡಪ್ರಭ’ದೊಂದಿಗೆ ಅಳಲು ತೋಡಿಕೊಂಡಿದ್ದಾರೆ...............................
ಸರ್ಕಾರ ಸಮರ್ಪಕ ವೇತನ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಲಾಗಿದೆ. ಪ್ರತಿಭಟನೆ ಸಂದರ್ಭ ಭರವಸೆ ನೀಡುವ ಮೂಲಕ ಪ್ರತಿಭಟನೆ ಹಿಂಪಡೆಸಿಕೊಳ್ಳುವ ಮೂಲಕ ಸರ್ಕಾರಗಳು ಮುಜುಗರದಿಂದ ತಪ್ಪಿಸಿಕೊಳ್ಳುತ್ತದೆ. ಆದರೆ, ಪ್ರತಿಭಟನಾಕಾರರಿಗೆ ನೀಡಿದ ಭರವಸೆಯಾಗಿಯೇ ಉಳಿದುಕೊಳ್ಳುತ್ತಿದೆ. ಅಡುಗೆ ತಯಾರಿಕಾ ಸಂದರ್ಭ ಆಕಸ್ಮಿಕ ಅನಾಹುತಗಳು ಘಟಿಸಿದರೆ ಕನಿಷ್ಠ ಸೇವಾ ಭದ್ರತೆ ಇಲ್ಲ. ನಿವೃತ್ತಿ ಹೊಂದುವವರ ಸೇವೆ ಪರಿಗಣಿಸದೆ ಬರಿಗೈಯಲ್ಲಿ ಅವರನ್ನು ಕಳುಹಿಸುತ್ತಿದೆ.-ಯಶೋದಾ, ಅಕ್ಷರ ದಾಸೋಹ ಬಿಸಿಯೂಟ ಸಿಬ್ಬಂದಿ ಸಂಘದ ತಾಲೂಕು ಮಾಜಿ ಉಪಾಧ್ಯಕ್ಷೆ.
................ಶಾಲೆಯಲ್ಲಿ ಮಕ್ಕಳಿಗೆ ವಾರದಲ್ಲಿ 3 ದಿನ ರಾಗಿಮಾಲ್ಟ್, 2 ದಿನ ಹಾಲು, ದಿನಂಪ್ರತಿ ಬಿಸಿಯೂಟದೊಂದಿಗೆ ಮೊಟ್ಟೆ ನೀಡಬೇಕಾಗಿದೆ. ಇದನ್ನೆಲ್ಲಾ ತಯಾರಿಸಬೇಕಾದರೆ ಬೆಳಗ್ಗಿನಿಂದ ಸಂಜೆ 3 ರವರೆಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದನ್ನು ನಿರ್ವಹಿಸಿದ ನಂತರ ನಾವು ಬೇರೆ ಕೆಲಸ ಕಾರ್ಯಗಳಿಗೂ ತೆರಳಲು ಸಾಧ್ಯವಾಗುವುದಿಲ್ಲ.
-ಖತೀಜಾ, ಶೋಭಾ, ಅಕ್ಷರದಾಸೋಹ ಸಿಬ್ಬಂದಿ............................ನಮ್ಮ ಸೇವೆಯನ್ನು ಸರ್ಕಾರಗಳು ಪರಿಗಣನೆಗೆ ತೆಗೆದುಕೊಂಡು ಕನಿಷ್ಠ ವೇತನ ಹೆಚ್ಚಿಸಿ ನಮ್ಮಗೆ ಮೂಲಭೂತ ಸೌಲಭ್ಯಗಳಾದ ಸೇವಾ ಭದ್ರತೆ ಒದಗಿಸಲು ಮುಂದಾಗಬೇಕು. ನಿಗದಿತ ದಿನಾಂಕದಂದೇ ವೇತನವನ್ನು ನೀಡಲು ಕ್ರಮ ಕೈಗೊಳ್ಳಬೇಕು.
-ಅಶ್ವಿನಿ, ಅಕ್ಷರದಾಸೋಹ ಸಿಬ್ಬಂದಿ.