ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಕು ಸಮ್ಮೇಳನದ ಲಾಂಛನದಲ್ಲಿ ಮುದ್ದೇಬಿಹಾಳ ತಾಲೂಕಿನ ಐತಿಹಾಸಿಕ, ನಾಲತವಾಡ ಶರಣರಾದ ಶ್ರೀವೀರೇಶ್ವರ ಶ್ರೀಗಳ, ಪ್ರಮುಖ ಬೆಳೆಗಳಾದ ಗೋಧಿ, ಜೋಳ, ಕಬ್ಬು, ಸೂರ್ಯಕಾಂತಿ, ಸಜ್ಜೆ, ಕಡಲೆ, ತೊಗರಿ ಸೇರಿದಂತೆ ತಂಗಡಗಿಯ ನೀಲಾಂಬಿಕೆ ದೇವಸ್ಥಾನ ಹೀಗೆ ಐತಿಹಾಸಿಕ ವಿಶೇಷಗಳನ್ನು ಒಳಗೊಂಡ ಲಾಂಛನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.ಪಟ್ಟಣದ ವಿಸಿ ಹೈಸ್ಕೂಲ್ ಆವರಣದಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಫೆ.15ರಂದು ನಡೆಯುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಗುರುವಾರ ಸಂಜೆ ಬಿಡುಗಡೆ ಮಾಡಿ ಮಾತನಾಡಿದರು. ಎಲ್ಲವನ್ನು ಒಳಗೊಂಡ ವಿಶಿಷ್ಟವಾದ ಹಾಗೂ ಅದ್ಭುತವಾದ ಲಾಂಛನ ಇದಾಗಿದ್ದು, ಸರ್ವಧರ್ಮದ ಸಮನ್ವಯತೆ ಸಾರುವಂತಹ ಗ್ರಾಮೀಣ ಪ್ರದೇಶದಲ್ಲೂ ಕನ್ನಡದ ಕಂಪನ್ನು ಪಸರಿಸಲು ಎಲ್ಲ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೇವಲ ಅಲಂಕಾರಿ ಹುದ್ದೆಯಲ್ಲ ಇದೊಂದು ಕನ್ನಡ ತಾಯಿ ಭುವನೇಶ್ವರಿ ಸೇವೆ ಮಾಡುವ ಅತ್ಯುನ್ನತವಾದ ಜವಾಬ್ದಾರಿ ಎಂದು ಅರ್ಥೈಸಿಕೊಳ್ಳಬೇಕು. ಸಾಕಷ್ಟು ಜನ ಯುವ ಸಾಹಿತಿಗಳು ತಮ್ಮ ಸಾಹಿತ್ಯವನ್ನು ಪ್ರದರ್ಶಿಸುವ ವೇದಿಕೆ ಇದಾಗಬೇಕು. ಅದರಂತೆ ಕನ್ನಡ ಉಳಿವಿಗಾಗಿ ಅದೇಷ್ಟೋಜನ ಹೆಸರಾಂತ ಹಿರಿಯ ಸಾಹಿತಿಗಳು, ಕವಿಗಳು ಶ್ರಮಿಸಿದ್ದಾರೆ. ಇಡೀ ವಿಶ್ವದಲ್ಲಿಯೇ ಕನ್ನಡದ ಕಂಪನ್ನು ಪಸರಿಸಿದ್ದಾರೆ ಎಂದರು.ನಮ್ಮ ಅಧಿಕಾರಾವಧಿಯಲ್ಲಿ 108 ತಾಲೂಕು ಸಮ್ಮೇಳಗಳು ನಡೆಸಬೇಕು ಎಂಬ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿಯವರ ಆದೇಶವಿದೆ. ಆದರೆ ಇಲ್ಲಿತನಕ ಅವರ ಆದೇಶದಂತೆ ನಡೆಸಲು ಸಾಧ್ಯವಾಗಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ಪ್ರತಿ ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೆ ಅಗತ್ಯ ಅನುದಾನ ನೀಡಲು ಸಾಧ್ಯವಾಗಿಲ್ಲ. ಇದರಿಂದ ಸ್ವಲ್ಪ ಅಂದುಕೊಂಡಂತೆ ಸಮ್ಮೇಳನ ನಡೆಸಲು ಆಗಿಲ್ಲ. ಹಾಗಂತ ಕನ್ನಡ ಸಂಘಟನೆಯ ಕಟ್ಟುವಲ್ಲಿ ಕೊರತೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ ಉದ್ದೇಶವಿದೆ. ತಾಲೂಕಿನಲ್ಲಿ ಒಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದರೆ ಸಂಪೂರ್ಣ ಸಹಕಾರ ನೀಡುವ ಮೂಲಕ ಯೋಗ್ಯ ಮತ್ತು ಅರ್ಹ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಗೌರವಿಸಲು ಅನುಕೂಲವಾಗಲಿದೆ ಎಂದರು.
ಮುದ್ದೇಬಿಹಾಳ ತಾಲೂಕು ಮೊದಲಿನಿಂದಲೂ ಶರಣರ, ಸಂತರ, ವಿಭಿನ್ನರೀತಿಯ ಹೆಸರಾಂತ ಸಾಹಿತಿಗಳ, ಸಾಂಸ್ಕೃತಿಕ, ಜಾನಪದ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಇಲ್ಲಿ ಕಲೆ ಸಾಹಿತ್ಯ ಉಳಿಸಿ ಬೆಳೆಸಬೇಕಿದೆ. ಈನಿಟ್ಟಿನಲ್ಲಿ ಯಾವುದಕ್ಕೂ ಕೊರತೆ ಬಾರದಂತೆ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು, ಕನ್ನಡದ ಸಿರಿ ಹಬ್ಬದಲ್ಲಿ ಪಾಲ್ಗೊಳ್ಳಲು ರಾಜ್ಯಮಟ್ಟದ ಕಲಾತಂಡಗಳು ಆಗಮಿಸಲಿವೆ. ಸಮ್ಮೇಳನದಲ್ಲಿ ತಾಲೂಕಾದರ್ಶನ, ವಿಚಾರಗೋಷ್ಠಿ, ಸಂಕೀರ್ಣಗೋಷ್ಠಿ, ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಎಲ್ಲರಿಗೂ ಮುಟ್ಟಿಸುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಎಲ್ಲರೂ ಜಾತಿ ಮತ ಬೇಧ ಪಂಥ ಮರೆತು ಒಗ್ಗಟ್ಟಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.ಈ ವೇಳೆ ಹಿರಿಯ ಸಾಹಿತಿಗಳಾದ ಬಿ.ಎಂ.ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಮಹಾದೇವಯ್ಯ ಶಾಸ್ತ್ರಿಗಳು ಸಾನಿಧ್ಯ ವಹಿಸಿದ್ದರು. ಬಿ.ಪಿ.ಪಾಟೀಲ, ಶ್ರೀಶೈಲ ಮರೋಳ, ಕೆ.ವೈ.ಬಿರಾದಾರ, ಹಣಮಂತ ಕುರಿ, ಜಯಶ್ರೀ ಹಿರೇಮಠ, ಆರ್.ಡಿ.ಶಿವನಗುತ್ತಿ, ಎಸ್.ಬಿ.ಚಲವಾದಿ, ಅಣ್ಣಾಸಾಬ ನಾಡಗೌಡ, ಗುರು ಸುಳ್ಳಳ್ಳಿ, ಮಲ್ಲು ಗಂಗನಗೌಡರ, ಅಂಬಿಕಾ ಕರಿಕಪ್ಪಗೊಳ, ಮಲಕೇಂದ್ರಾಯಗೌಡ ಪಾಟೀಲ ಸೇರಿ ಹಲವರು ಇದ್ದರು. ಪಿ.ಎಸ್.ಬಡಿಗೇರ ಪ್ರಾರ್ಥಿಸಿದರು. ಆರ್.ಜಿ.ಕಿತ್ತೂರ ಸ್ವಾಗತಿಸಿದರು, ವೈ.ಎಚ್ ವಿಜಯಕರ, ಸಿದ್ದನಗೌಡ ಬಿಜ್ಜೂರ ಸೇರಿದಂತೆ ಹಲವರು ಇದ್ದರು.