ಸಾರಾಂಶ
ಹಾವುಗೊಲ್ಲರು ಸಮುದಾಯದ ಜನರಿಗೆ ಸಿಗಬೇಕಾದ ಸಕಲ ಸವಲತ್ತುಗಳನ್ನು ತಕ್ಷಣ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕಿ ಶಾರದಾ ಪೂರ್ಯ ನಾಯ್ಕ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಹಾವುಗೊಲ್ಲರು ಸಮುದಾಯದ ಜನರಿಗೆ ಸಿಗಬೇಕಾದ ಸಕಲ ಸವಲತ್ತುಗಳನ್ನು ತಕ್ಷಣ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕಿ ಶಾರದಾ ಪೂರ್ಯ ನಾಯ್ಕ ಹೇಳಿದರು.ಪಟ್ಟಣ ಸಮೀಪದ ಹಾವುಗೊಲ್ಲರ ಕ್ಯಾಂಪ್ ಇಲ್ಲಿಗೆ ಬುಧವಾರ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸಿ ಬಳಿಕ ಅವರನ್ನು ಕುರಿತು ಮಾತನಾಡಿದರು.
ಹಾವುಗೊಲ್ಲರು ಜನಾಂಗದವರು ವಲಸೆ ಬಂದಿರುವ ಸಮುದಾಯದವರಾಗಿದ್ದು, ಸರ್ಕಾರಿ ಸೌಲಭ್ಯ ಪಡೆಯಲು ಕೆಲ ತಾಂತ್ರಿಕ ತೊಂದರೆ ಆಗುತ್ತಿದೆ. ಇಲ್ಲಿರುವ ಅನೇಕ ಜನರಿಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಇಲ್ಲದೆ ಜಾತಿ, ಆದಾಯ ದೃಢೀಕರಣ ಪತ್ರ ನೀಡಲು ಆಗುತ್ತಿಲ್ಲ. ಇವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಶಿಕ್ಷಣ ವಂಚಿತರಾಗಿದ್ದಾರೆ ಎಂದರು.ಈ ಬಗ್ಗೆ ಇಲ್ಲಿನ ಜನರು ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಅವರು ಗಮನ ಹರಿಸದೆ ಇರುವುದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದರೆ ಈಗ ಸುಮಾರು ಹತ್ತಾರು ವರ್ಷಗಳಿಂದ ಒಂದೆಡೆ ನೆಲೆಸಿದ್ದಾರೆ. ಆದ್ದರಿಂದ ಇವರಿಗೆ ವಸತಿ ಸೌಕರ್ಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ವ್ಯವಸ್ಥೆ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.
ಬಿಇಒ ಎ.ಕೆ.ನಾಗೇಂದ್ರಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಸಿಆರ್ಪಿ ಹರೀಶ್, ಸ್ಥಳೀಯ ಮುಖಂಡ ಎ.ಕೆ.ಮಂಜುನಾಥ್, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಎಂ.ಎಚ್.ಜ್ಯೋತಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್, ಶಾಸಕರ ಆಪ್ತ ಸಹಾಯಕ ಲಕ್ಷ್ಮೀಶ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಸ್ಥಳೀಯ ಜನರು ಹಾಜರಿದ್ದರು.