ರಾಮನಗರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆ ರದ್ದುಪಡಿಸಬೇಕು, ಮನರೇಗಾ ಮರು ಜಾರಿಗೊಳಿಸುವುದು ಹಾಗೂ ಬಿಡದಿ ಟೌನ್ ಶಿಪ್ ಯೋಜನೆಗೆ ಬಲವಂತದ ಭೂ ಸ್ವಾಧೀನ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೆಐಇಇಎಫ್ ಸಂಘಟನೆ ಅಧ್ಯಕ್ಷ ಗಂಗಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರು, ರೈತರು, ಯುವ ಸಮುದಾಯ, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ದುಡಿಯುವ ವರ್ಗದ ಜನ ತಮ್ಮ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತರಾಗಿ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಯುವಜನತೆ ಮತ್ತು ಶ್ರಮಿಕ ವರ್ಗವನ್ನು ಆಧುನಿಕ ಗುಲಾಮಗಿರಿಗೆ ತಳ್ಳಲಿದೆ. ಇನ್ನು ರಾಜ್ಯದಲ್ಲಿ ನಾಲ್ಕು ಕಾರ್ಮಿಕ ನಿಯಮಗಳನ್ನು ರೂಪಿಸಲು ಕಾರ್ಮಿಕ ಇಲಾಖೆ ಮುಂದಾಗಿದ್ದು, ಮೂರು ಕರಡುಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಿದೆ. ಈ ಕರಡು ಅಧಿಸೂಚನೆಗಳು ಕೇಂದ್ರ ಸರ್ಕಾರದ ಮೂಲ ಕಾನೂನುಗಳಿಗಿಂತಲೂ ಕಠಿಣ ಮಾತ್ರವಲ್ಲದೆ ಅಸಂವಿಧಾನಿಕ, ಅನಿಯಂತ್ರಿತ ನಿಬಂಧನೆಗಳಾಗಿವೆ ಎಂದು ಟೀಕಿಸಿದರು.
ಕೈಗಾರಿಕಾ ಸಂಬಂಧಗಳ ನಿಯಮಗಳಲ್ಲಿ ಸಂಘಟನಾ ಹಕ್ಕಿಗೆ ಅಡ್ಡಿ ಇದೆ. ಕಾರ್ಮಿಕ ಸಂಘದ ಮಾನ್ಯತೆಗೆ ಒಟ್ಟು ಕಾರ್ಮಿಕರಲ್ಲಿ ಶೇ.51ರಷ್ಟು ಮತಗಳನ್ನು ಕಡ್ಡಾಯಗೊಳಿಸಿದೆ. ಇದು ಸಾಧ್ಯವಿಲ್ಲದ ಮಿತಿ. ಮುಷ್ಕರ ಹಮ್ಮಿಕೊಳ್ಳುವುದಾದರೆ 6 ತಿಂಗಳು ಕೂಲಿಂಗ್ ಆಫ್ ಅವಧಿಯನ್ನು ವಿಧಿಸಿರುವುದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ. ಒತ್ತಡ ಹೇರುವ ಪ್ರಕ್ರಿಯೆಯನ್ನು ಕಾರ್ಮಿಕರ ಅನುಚಿತ ವರ್ತನೆ ಎಂದು ವ್ಯಾಖ್ಯಾನಿಸಿರುವುದರಿಂದ ಶಾಂತಿಯುತ ಪ್ರತಿಭಟನೆಯನ್ನು ಅಪರಾಧವಾಗಿ ಪರಿಗಣಿಸಲು ಅವಕಾಶ ಇದೆ ಎಂದು ಗಂಗಣ್ಣ ದೂರಿದರು.ಕೈಗಾರಿಕಾ ಪ್ರದೇಶದೊಳಗೆ ಮೆರವಣಿಗೆ :
ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಮಾತನಾಡಿ, ಕೇಂದ್ರದ ಕಾರ್ಮಿಕರ ನೀತಿಗಳಿಂದ ನೇರವಾದ ಹೊಡೆತ ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೀಳಲಿದೆ. ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಬಂಡವಾಳಶಾಹಿಗಳ ಹಿತ ಸರ್ಕಾರಗಳಿಗೆ ಮುಖ್ಯವಾಗಿದೆ. ಕಾಯಂಯೇತರ ಕಾರ್ಮಿಕರ ಕಾಯಂಗೆ ತಿಲಾಂಜಿ ಇಟ್ಟಿದೆ. ಸಂಹಿತೆ ಮೂಲಕ ನಿಗದಿ ಅವಧಿಯ ಉದ್ಯೋಗಕ್ಕೆ ಅವಕಾಶ ನೀಡಿ ಕಾಯಂ ಉದ್ಯೋಗದಿಂದ ಕಾರ್ಮಿಕರನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿದರು.
ಫೆ.12ರಂದು ಕೖೆಗಾರಿಕಾ ಪ್ರದೇಶಗಳಲ್ಲಿರುವ ಎಲ್ಲಾ ಕಂಪನಿಗಳಲ್ಲಿ ಚಟುವಟಿಕೆ ನಿಲ್ಲಿಸಿ ಕಾರ್ಮಿಕರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಅಂದು ವಂಡರ್ ಲಾ ಗೇಟ್ ಬಳಿಯಿಂದ ಕೖೆಗಾರಿಕಾ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿದ ತರುವಾಯ ಬಿಡದಿಯ ಚೌಕಿಮಠದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಾಗುವುದು. ಆನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಯೋಗೇಶ್ ಮಾತನಾಡಿ, ವೇತನ ಸಂಹಿತೆ ನಿಯಮಗಳಲ್ಲಿಯೂ ಕಾರ್ಮಿಕರ ಹಕ್ಕುಗಳನ್ನು ಮೊಕಟುಗೊಳಿಸಲಾಗಿದೆ.ವಸತಿ ಸೌಕರ್ಯದ ಹೆಸರಿನಲ್ಲಿ ಯಾವುದೇ ಮಾನದಂಡಗಳಿಲ್ಲದೆ ವೇತನ ಕಡಿತಗೊಳಿಸಲು ಮಾಲೀಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಬ್ಯಾಂಕೇತರ ಡಿಜಿಟಲ್ ವ್ಯಾಲೆಟ್ ಗಳ ಮೂಲಕ ವೇತನ ಪಾವತಿಗೆ ಅವಕಾಶ ನೀಡಿರುವುದು ಕಾರ್ಮಿಕರನ್ನು ಶೋಷಣೆಗೆ ತಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಹಿತೆಯಲ್ಲಿ ಮಹಿಳಾ ಕಾರ್ಮಿಕರಿಗೆ ಸಮಾನ ಅವಕಾಶದ ನೆಪದಲ್ಲಿ ರಾತ್ರಿ ಪಾಳಿಯ ಮತ್ತು ಅಪಾಯಕಾರಿ ಕೆಲಸದ ಸ್ಥಳಗಳಲ್ಲಿ ದುಡಿಮೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಹಿಳಾ ಕಾರ್ಮಿಕರು ದುಡಿಮೆಯಿಂದ ಹೊರ ಬರುತ್ತಾರೆ. ವೇತನದ ವ್ಯಾಖ್ಯಾನದಲ್ಲಿನ ಬದಲಾವಣೆಯಿಂದ ಮಹಿಳಾ ಕಾರ್ಮಿಕರು ನಿಜವಾದ ಸಂಬಳ ಕಳೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಇಎ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಟಿಕೆಎಂಇಯು ಪ್ರಧಾನ ಕಾರ್ಯದರ್ಶಿ ರವಿ, ವಕೀಲ ವಿನೋದ್ ಕುಮಾರ್, ಅಸಂಘಟಿತ ಕಾರ್ಮಿಕ ವಲಯದ ಮುಖಂಡ ಇಬ್ರಾಹಿಂ, ರೖತ ಮುಖಂಡ ಅಂಕಪ್ಪ ಇದ್ದರು.ಕೋಟ್ ................
ಕೇಂದ್ರ - ರಾಜ್ಯ ಸರ್ಕಾಗಳು ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರ ಮುಷ್ಕರದ ಹಕ್ಕನ್ನೇ ದುರ್ಬಲಗೊಳಿಸಲು ಹೊರಟಿದೆ. ಕನಿಷ್ಠ 14 ದಿನ ಮತ್ತು ಗರಿಷ್ಠ 60 ದಿನ ಮುಂಚಿತವಾಗಿ ಮುಷ್ಕರದ ನೋಟಿಸ್ ನೀಡಬೇಕು. ನೋಟಿಸ್ ನೀಡಿದ 14 ದಿನದೊಳಗೆ ಮುಷ್ಕರ ನಡೆಸುವಂತಿಲ್ಲ. ಮಾಲೀಕರು ಮುಷ್ಕರದ ಸಂಬಂಧ 7 ದಿನದಲ್ಲಿ ಅರ್ಜಿ ಸಲ್ಲಿಸಿ ಸಂಧಾನ ಸಭೆ, ನ್ಯಾಯ ನಿರ್ಣಯ, ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಮತ್ತು 60 ದಿನಗಳ ನಂತರವೂ ಮುಷ್ಕರ ಮಾಡುವಂತಿಲ್ಲ. ಈ ಅವಧಿಯಲ್ಲಿ ಮುಷ್ಕರದ ಚಟುವಟಿಕೆ ಮಾಡಿದಲ್ಲಿ ಅದು ಅಕ್ರಮ ಮತ್ತು ಕಾನೂನು ಬಾಹಿರ ಆಗಲಿದೆ. ಹಣಕಾಸು ಸಹಾಯ ನೀಡುವುದು ಅಪರಾಧ. ಕಾನೂನು ಬಾಹಿರ ಮುಷ್ಕರಕ್ಕೆ ದಂಡದ ಜೊತೆಗೆ ಶಿಕ್ಷೆಗೂ ಅವಕಾಶ ಕಲ್ಪಿಸಿದೆ.- ಮಂಜುನಾಥ್, ಪ್ರಧಾನ ಕಾರ್ಯದರ್ಶಿ, ಎಂಇಎ ಸಂಘಟನೆ
...ಕೋಟ್ ...ಪ್ರಸ್ತುತ ಕಾಯ್ದೆಯಲ್ಲಿ ದಿನದ ಕೆಲಸದ ಅವಧಿ 8 ಗಂಟೆ, ವಾರಕ್ಕೆ 48 ಗಂಟೆ ಕೆಲಸ, ವಿಶ್ರಾಂತಿ ಅವಧಿ, ಹೆಚ್ಚುವರಿ ಕೆಲಸದ ಅವಧಿ, ವಿಸ್ತರಿತ ಕೆಲಸದ ಅವಧಿ ಬಗ್ಗೆ ವ್ಯಾಖ್ಯಾನಿಸಲಾಗಿದೆ. ಆದರೆ, ಕಾರ್ಮಿಕ ಸಂಹಿತೆಯಲ್ಲಿ ದಿನದ ಕೆಲಸದ ಅವಧಿ 8 ಗಂಟೆಗಳ ಮೂಲಭೂತ ಮಾನವೀಯ ಅವಧಿಯನ್ನು ರಕ್ಷಿಸಿಲ್ಲ. ಸಂಹಿತೆಯಲ್ಲಿ 6 ದಿನಗಳ ನಿರಂತರ ಕೆಲಸದ ದಿನಗಳ ನಂತರವೂ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ರಜೆ ದಿನಗಳಲ್ಲಿ ಮಾಡಿದ ದುಡಿಮೆಗೆ ಬದಲಿ ರಜೆ ಎರಡು ತಿಂಗಳಲ್ಲಿ ನೀಡಲು ಮಾಲೀಕರಿಗೆ ಕಾಲಾವಕಾಶ ನೀಡಲಾಗಿದೆ.
- ರವಿ, ಪ್ರಧಾನ ಕಾರ್ಯದರ್ಶಿ, ಟಿಕೆಎಂಇಯು ಸಂಘಟನೆ10ಕೆಆರ್ ಎಂಎನ್ 1.ಜೆಪಿಜಿ
ಕೆಐಇಇಎಫ್ ಸಂಘಟನೆ ಅಧ್ಯಕ್ಷ ಗಂಗಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.