ಪಟ್ಟಣದ ನ್ಯಾಯಾಲಯದ ಮೊದಲನೇ ಮಹಡಿ ಕಟ್ಟಡ ಕಾಮಗಾರಿಗೆ ೪. ೬೫ ಲಕ್ಷ ರು. ಮಂಜೂರು ಆಗಿದ್ದು ವಕೀಲರಿಗೆ ಮೂಲಭೂತ ಸೌಕರ್ಯ ನೀಡುವುದು ನನ್ನ ಜವಾಬ್ದಾರಿ ಎಂದು ಶಾಸಕ ಸಿಬಿ ಸುರೇಶ್ ಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣದ ನ್ಯಾಯಾಲಯದ ಮೊದಲನೇ ಮಹಡಿ ಕಟ್ಟಡ ಕಾಮಗಾರಿಗೆ ೪. ೬೫ ಲಕ್ಷ ರು. ಮಂಜೂರು ಆಗಿದ್ದು ವಕೀಲರಿಗೆ ಮೂಲಭೂತ ಸೌಕರ್ಯ ನೀಡುವುದು ನನ್ನ ಜವಾಬ್ದಾರಿ ಎಂದು ಶಾಸಕ ಸಿಬಿ ಸುರೇಶ್ ಬಾಬು ತಿಳಿಸಿದರು.ಪಟ್ಟಣದ ವಕೀಲರ ಭವನದಲ್ಲಿ ವಕೀಲರಿಗೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಕೀಲರ ವೃತ್ತಿ ಅತ್ಯಂತ ಸೂಕ್ಷ್ಮವಾಗಿದ್ದು ವಕೀಲರ ಆರೋಗ್ಯ ಮುಖ್ಯವಾಗಿರುತ್ತದೆ, ತಾಲೂಕು ವಕೀಲರ ಬೇಡಿಕೆಗಳನ್ನು ಈಡೇರಿಸುವುದು ನನ್ನ ಜವಾಬ್ದಾರಿಯಾಗಿದೆ, ಶಾಸಕರ ನಿಧಿಯಿಂದ ವಕೀಲರ ಸಂಘದ ಬೇಡಿಕೆ ಈಡೇರಿಸಲು ತಕ್ಷಣವೇ 5 ಲಕ್ಷ ರು.ಮಂಜೂರು ಮಾಡಲಾಗುತ್ತದೆ. ಹಂತ ಹಂತವಾಗಿ ವಿವಿಧ ಮೂಲಭೂತ ಸೌಕರ್ಯಗಳನ್ನು ನೀಡುತ್ತೇನೆ, ಶೈಕ್ಷಣಿಕವಾಗಿ ತಾಲೂಕನ್ನು ಅಭಿವೃದ್ಧಿಪಡಿಸಲು ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ನೀಡಲಾಗುತ್ತಿದೆ. ಹಲವಾರು ವಿದ್ಯಾರ್ಥಿಗಳಿಗೆ ಡೊನೇಷನ್ ಇಲ್ಲದೆ ಉನ್ನತ ವಿದ್ಯಾಭ್ಯಾಸಕ್ಕೆ ಉಚಿತವಾಗಿ ಸೀಟ್ ಗಳು ದೊರೆಯುತ್ತವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೆಎಎಸ್ ತರಬೇತಿಯನ್ನು ಸಹ ನೀಡಲು ಯೋಜನೆ ರೂಪಿಸಲಾಗಿದೆ. ತಾಲೂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿರುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಜ್ಞಾನಮೂರ್ತಿ ಮಾತನಾಡಿ, ವಕೀಲರ ಸಂಘಕ್ಕೆ ಕಂಪ್ಯೂಟರ್ ಹಾಗೂ ಝೆರಾಕ್ಸ್ ಮಿಷನ್ ಅತ್ಯಂತ ಅವಶ್ಯಕವಾಗಿದೆ. ಸುಪ್ರೀಂ ಕೋರ್ಟ್ ಆದೇಶಗಳು ಸೇರಿದಂತೆ ಸರ್ಕಾರದ ಆದೇಶಗಳು ಇತ್ತೀಚಿನ ದಿನಗಳಲ್ಲಿ ಸಿ.ಡಿಯ ಲಭ್ಯವಿದ್ದು ಶಾಸಕರು ವಕೀಲರ ಸಂಘಕ್ಕೆ ನೀಡಿದರೆ ಎಲ್ಲಾ ವೃತ್ತಿಪರ ವಕೀಲರಿಗೆ ಅನುಕೂಲವಾಗುತ್ತದೆ. ಶೌಚಾಲಯ ಅತ್ಯಂತ ಅವಶ್ಯಕವಾಗಿದೆ. ಜಿಲ್ಲೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಬಾರ್ ಅಸೋಸಿಯೇಷನ್ ಗೆ ಅತ್ಯಂತ ಒಳ್ಳೆಯ ಹೆಸರಿದೆ. ಚುನಾವಣೆ ಇಲ್ಲದೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಬಾರ್ ಅಸೋಸಿಯೇಷನ್ ಗೆ ಶಾಸಕರು ಎಲ್ಲಾ ಮೂಲಭೂತ ಸೌಕರ್ಯ ನೀಡಿದರೆ ವಕೀಲರು ಸಹ ಸಮಾಜದಲ್ಲಿ ಉತ್ತಮವಾಗಿ ನ್ಯಾಯದಾನ ಮಾಡಲು ಅನುಕೂಲವಾಗುತ್ತದೆ ಎಂದರು.ಹಿರಿಯ ವಕೀಲರಾದ ಎನ್ ಶ್ರೀಧರ್ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ನೊಂದಾವಣೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಎಲ್ಲರಿಗೂ ಆತಂಕ ಮೂಡಿಸಿದೆ. ಕಂದಾಯ ಇಲಾಖೆಯ ಸಿಬ್ಬಂದಿಗಳು ತಿದ್ದುಪಡಿಯಲ್ಲಿ ತಪ್ಪು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನಾನುಕೂಲವಾಗುತ್ತಿದ್ದು ಇದರ ಬಗ್ಗೆ ತಹಸೀಲ್ದಾರ್ ಅವರು ಮಾಡುತ್ತಿರುವ ಲೋಪವನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದಿಂದ ಶಾಸಕ ಸಿಬಿ ಸುರೇಶ್ ಬಾಬುರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ. ಎಮ್, ವಕೀಲರ ಸಂಘದ ಕಾರ್ಯದರ್ಶಿ ಎಂ. ಎಸ್ ರಮೇಶ್,ವಕೀಲರಾದ,ಸಿದ್ದನಕಟ್ಟೆ ಚಂದ್ರಶೇಖರ್, ಕೊಡಲಗಾರ ಚಂದ್ರಶೇಖರ್,ಪರಮೇಶ್ವರಯ್ಯ,ಎಂ. ಏನ್ ಶೇಖರ್, ವೈ ಜಿ ಲೋಕೇಶ್ವರ್, ಗೋಪಾಲಕೃಷ್ಣ, ಹರೀಶ್ ಬಾಬು, ಹನುಮಂತರಾಯಪ್ಪ ಸೇರಿದಂತೆ ವಕೀಲರುಗಳು ಉಪಸ್ಥಿತರಿದ್ದರು.