ದೋಟಿಹಾಳ ಕಂದಾಯ ಹೋಬಳಿ ಗ್ರಾಮಕ್ಕೆ ಇಂದಿನಿಂದ ಅಹೋರಾತ್ರಿ ಧರಣಿ

| Published : Aug 12 2025, 12:30 AM IST

ದೋಟಿಹಾಳ ಕಂದಾಯ ಹೋಬಳಿ ಗ್ರಾಮಕ್ಕೆ ಇಂದಿನಿಂದ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ದೋಟಿಹಾಳ 30 ಗ್ರಾಮಗಳಿಗೆ ಕೇಂದ್ರಬಿಂದುವಾಗಿದೆ. ಯಾವುದೇ ದಾಖಲೆ ಪಡೆಯಬೇಕಾದರೆ ಕುಷ್ಟಗಿ ಅಥವಾ ಹನುಮಸಾಗರಕ್ಕೆ ಹೋಗಬೇಕು. ಹೀಗಾಗಿ ಹೋಬಳಿ ಮಾಡುವಂತೆ ಧರಣಿ ನಡೆಸಿದರೂ ಸ್ಪಂದಿಸಿಲ್ಲ. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೋಬಳಿ ಅಥವಾ ವಿಸ್ತರಣಾ ಕೇಂದ್ರವೂ ಆಗಲಿಲ್ಲ.

ಕುಷ್ಟಗಿ:

ತಾಲೂಕಿನ ದೋಟಿಹಾಳ ಗ್ರಾಮವನ್ನು ಕಂದಾಯ ಹೋಬಳಿ ಅಥವಾ ವಿಸ್ತರಣಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ದೋಟಿಹಾಳದ ಬಸ್ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಂಟ್ಲಿ ಮಾತನಾಡಿ, ಮೂರು ವರ್ಷಗಳ ಹಿಂದೆ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ತಹಸೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿ ಆಗಮಿಸಿ ನಮ್ಮ ಬೇಡಿಕೆ ಆಲಿಸಿ ಮನವಿ ಸ್ವೀಕರಿಸಿದ್ದರು. ಆದರೆ, ಈ ವರೆಗೂ ಸ್ಪಂದಿಸಿಲ್ಲ. ಹೀಗಾಗಿ ಆ.12ರಿಂದ ಆಹೋರಾತ್ರಿ ಹಾಗೂ ಉಪ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ, ದೋಟಿಹಾಳ 30 ಗ್ರಾಮಗಳಿಗೆ ಕೇಂದ್ರಬಿಂದುವಾಗಿದೆ. ಯಾವುದೇ ದಾಖಲೆ ಪಡೆಯಬೇಕಾದರೆ ಕುಷ್ಟಗಿ ಅಥವಾ ಹನುಮಸಾಗರಕ್ಕೆ ಹೋಗಬೇಕು. ಹೀಗಾಗಿ ಹೋಬಳಿ ಮಾಡುವಂತೆ ಧರಣಿ ನಡೆಸಿದರೂ ಸ್ಪಂದಿಸಿಲ್ಲ. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೋಬಳಿ ಅಥವಾ ವಿಸ್ತರಣಾ ಕೇಂದ್ರವೂ ಆಗಲಿಲ್ಲ. ಹೀಗಾಗಿ ಪ್ರತಿಭಟನೆ ಆರಂಭಿಸಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ, ಸಚಿವರು, ಶಾಸಕರ ಬಂದು ನಮ್ಮ ಬೇಡಿಕೆ ಈಡೇರಿಸುವರೆಗೂ ಹಿಂದೇ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಹಸೀಲ್ದಾರ್‌ ಭೇಟಿ:

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಭೇಟಿ ನೀಡಿ, ನಿಮ್ಮ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರ ಮಟ್ಟದಲ್ಲಿ ಆಗಬೇಕು. ಅಧಿವೇಶನ ಆರಂಭವಾಗಿದ್ದು ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು. ಆದರಿಂದ ಪ್ರತಿಭಟನೆ ನಿಲ್ಲಿಸಬೇಕೆಂದು ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು, ಸ್ಥಳಕ್ಕೆ ಜನಪ್ರತಿನಿಧಿ ಹಾಗೂ ಜಿಲ್ಲಾಧಿಕಾರಿ ವಿಸ್ತರಣಾ ಕೇಂದ್ರದ ಆದೇಶ ಪ್ರತಿಯೊಂದಿಗೆ ಆಗಮಿಸಬೇಕು. ಅಲ್ಲಿಯ ವರೆಗೆ ಧರಣಿ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ತಾಪಂ ಇಒ ಪಂಪಾಪತಿ ಹಿರೇಮಠ, ಕಂದಾಯ ನಿರೀಕ್ಷಕ ಅಬ್ದುಲ್‌ರಜಾಕ ಮದಲಗಟ್ಟಿ, ಗ್ರಾಮಾಡಳಿತ ಅಧಿಕಾರಿ ಮೌನೇಶ ಮಡಿವಾಳರ, ಪ್ರತಿಭಟನಕಾರರಾದ ಮಂಜೂರುಅಲಿ ಬನ್ನು, ಮಹಿಬೂಬು ಹೊಸಮನಿ, ಪರಶುರಾಮ ಈಳಗೇರ, ಯಮನೂರ ಕ್ಯಾದಿಗುಂಪಿ ಇದ್ದರು. ಕುಷ್ಟಗಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.